ಚಳ್ಳಕೆರೆ: ಪುರುಷ ಸಮಾಜದ ದಾಸ್ಯದ ನಡುವೆಯೂ ಹೆಣ್ಣು ಶಿಕ್ಷಣ ಕಲಿತು, ಸಮಾಜದಲ್ಲಿ ಪುರುಷರಷ್ಟೇ ಸಮಾನಳು ಎಂದು ತೋರಿಸಿದ ದಿಟ್ಟ, ಧೀರೆ ಮಹಿಳೆ ಸಾವಿತ್ರಿ ಬಾ ಫುಲೆಯವರು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ರವೀಶ್ ತಿಳಿಸಿದರು.
ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಕರೆಸಿಕೊಳ್ಳುವ ಸಾವಿತ್ರಿ ಬಾ ಫುಲೆಯವರು ಇಂದಿನ ಮಹಿಳೆಯರಿಗೂ ಸ್ಪೂರ್ತಿ. ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎಂಬ ನಾಲ್ನಡಿಯಂತೆ ತಮ್ಮ ಪತಿಯಿಂದಲೇ ಶಿಕ್ಷಣ ಕಲಿತು ಸಮಾಜಕ್ಕೆ ಮಾದರಿಯಾದರು. ನನ್ನಂತೆ ಎಲ್ಲಾ ಮಹಿಳೆಯರು ಶಿಕ್ಷಣ ಕಲಿಯಬೇಕು ಎಂಬ ಉದ್ದೇಶದಿಂದ ಹಲವು ವರ್ಷಗಳ ಕಾಲ ಮಹಾರಾಷ್ಟ್ರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಮಕ್ಕಳಿಗೆ ಬೋಧನೆ ಮಾಡುವ ಮೂಲಕ ದೇಶದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದರು.
ಎನ್ನೆಸ್ಸೆಸ್ ಅಧಿಕಾರಿ ಬಿ.ಶಾಂತಕುಮಾರಿ ಮಾತನಾಡಿ, ಭಾರತದ ಶಿಕ್ಷಣ ಕಲಿತ ಮೊದಲ ಮಹಿಳೆ ಸಾವಿತ್ರಿ ಬಾ ಹಲವಾರು ಸಾಮಾಜಿಕ ಕಟ್ಟುಪಾಡುಗಳನ್ನು ದೂರ ಮಾಡಿದರು. ಬ್ರಾಹ್ಮಿಯ ಪದ್ಧತಿಯ ವಿವಾಹವನ್ನು ಕಾನೂನು ಬದ್ಧವಾಗಿ ಪರಿವರ್ತಿಸುವಲ್ಲಿ ಇವರ ಪಾತ್ರ ಹೆಚ್ಚಿದೆ. ಶಿಕ್ಷಕಿ, ಶ್ರೇಣಿಕೃತ ಸಮಾಜದಲ್ಲಿ ಅಡಗಿದ್ದ ಹಲವಾರು ಅನಿಷ್ಟ ಪದ್ಧತಿಗಳನ್ನು ದೂರಮಾಡಿದರು. ಅಂಧಾನುಕರಣೆ, ಕಂದಾಚಾರ, ಶೋಷಣೆ, ಅಸಮಾನತೆ, ಮೌಢ್ಯತೆಯಿಂದ ಜಡ್ಡುಗಟ್ಟಿದ್ದ ಗೊಡ್ಡು ಸಂಪ್ರದಾಯಗಳಿಗೆ ತೀಲಾಂಜಲಿ ಹೇಳಿದ ಧೀರ ಮಹಿಳೆಯಾಗಿ ಹೊರಹೊಮ್ಮಿದರು. ಇದರ ಫಲವಾಗಿ ಅಂದಿನ ಬ್ರಿಟೀಷ್ ಸರ್ಕಾರ ಇವರಿಗೆ ಉತ್ತಮ ಶಿಕ್ಷಕಿ ಎಂದು ಸನ್ಮಾನಿಸಿದ್ದನ್ನು ಸ್ಮರಿಸಿದರು. ದಮನಿತ ಮಹಿಳೆಯರು, ಬಹಿಷ್ಕೃತರು, ಅನಾಥರು, ಅಸ್ಪೃಶ್ಯರಿಗೆ ದಿಟ್ಟತನದಿಂದಲೇ ಶಿಕ್ಷಣ ನೀಡುವ ಮೂಲಕ ಅವರೂ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಹಕ್ಕಿದೆ ದಿಕ್ಕುತೋರಿದ ಧೀರೋದ್ದಾತ ಸಮಾಜ ಸುಧಾರಕಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಿ.ಟಿ.ಪುಪ್ಪಲತಾ, ಹಬೀಬುಲ್ಲಾ, ನಾಗರಾಜಬೆಳಗಟ್ಟ, ರೇಖಾ ಮುಂತಾದವರು ಉಪಸ್ಥಿತರಿದ್ದರು.