ಕನ್ನಡಪ್ರಭ ವಾರ್ತೆ ಹಲಗೂರು
ಶ್ರೀರಾಮನ ಆದರ್ಶ ಗುಣಗಳಾದ ಪ್ರೀತಿ, ವಿಶ್ವಾಸ, ಕರುಣೆಗಳನ್ನು ಮೈಗೂಡಿಸಿಕೊಂಡು ನಡೆದರೆ ಮಾತ್ರ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ಬ್ಯಾಡರಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರ ದೇವಸ್ಥಾನ ಲೋಕಾರ್ಪಣೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಗ್ರಾಮಗಳಲ್ಲಿ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮುಖಾಂತರ ನಮ್ಮ ಆಚಾರ, ವಿಚಾರಗಳನ್ನು ಸರಿಪಡಿಸಿಕೊಳ್ಳಬೇಕು. ಆಧುನಿಕ ಕಾಲಘಟ್ಟಕ್ಕೆ ಶ್ರೀರಾಮಚಂದ್ರನ ಆದರ್ಶ, ತತ್ವಗಳ ಅವಶ್ಯಕತೆ ಇದೆ ಎಂದರು.ನಾವು ಚಿಕ್ಕವರಾಗಿದ್ದಾಗ ಮಕ್ಕಳು ಗುರು-ಹಿರಿಯರಿಗೆ ತಲೆ ಬಗ್ಗಿಸಿ ಶ್ರೀರಾಮಚಂದ್ರನ ಪಿತೃ ವಾಕ್ಯ ಪರಿಪಾಲನೆಯಂತೆ ಗೌರವ ನೀಡುತ್ತಿದ್ದೇವು. ಆದರೆ, ಈಗ ಕಾಲ ಬದಲಾಗಿದೆ. ಯುವಕರು ಬರುತ್ತಿದ್ದರೆ ಗುರು-ಹಿರಿಯರು ತಲೆಬಗ್ಗಿಸಿ ಪಕ್ಕಕ್ಕೆ ಸರಿಯುವ ಕಾಲ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀರಾಮಚಂದ್ರನ ಆದರ್ಶ, ತತ್ವಗಳು ಕ್ರಿಯಾಶೀಲವಾಗುವ ಸ್ಥಿತಿ ನಿರ್ಮಾಣವಾಗಬೇಕು ಎಂದರು.
ಉತ್ತಮ ಚಿಂತನೆಗಳು ಉತ್ತಮ ಫಲ ನೀಡುವ ಬೀಜಗಳು. ಬೀಜಗಳನ್ನು ಬಿತ್ತನೆ ಮಾಡಿ ಬೆಳೆ ಬೆಳೆದರೆ ಮಾತ್ರ ಬಿತ್ತನೆ ಬೀಜಗಳು ಉಪಯೋಗಕ್ಕೆ ಬರುತ್ತವೆ. ಹಾಗೆಯೇ ಆದರ್ಶಗಳು ಉತ್ತಮ ಚಿಂತನೆಗಳು ನಮ್ಮ ಬಳಿ ಇದ್ದರೂ ಆಚರಣೆಗೆ ಬರದಿದ್ದರೆ ಮನುಷ್ಯನಿಗಾಗಲಿ ಅಥವಾ ಸಮಾಜಕ್ಕಾಗಲಿ ಉಪಯೋಗವಿಲ್ಲ ಎಂದರು.ಶ್ರೀರಾಮಚಂದ್ರರ ಆದರ್ಶ, ವ್ಯಕ್ತಿತ್ವ ಆಧುನಿಕ ಕಾಲದ ಯುವಕರಿಗೆ ಮಾರ್ಗದರ್ಶನವಾಗಬೇಕು. ಹಾಗೆಯೇ ಆಂಜನೇಯ ಸ್ವಾಮಿಯ ನಿಯತ್ತು ಕ್ರಿಯಾಶೀಲ ಗುಣ ಬರಬೇಕು. ರಾಮಾಂಜನೇಯರನ್ನು ಹೇಗೆ ಬೇರ್ಪಡಿಸಲು ಆಗುವುದಿಲ್ಲವೋ ಅಂತೆಯೇ ಆದರ್ಶ ವ್ಯಕ್ತಿತ್ವ ಕ್ರಿಯಾಶೀಲ ಗುಣ ವಿರುವ ವ್ಯಕ್ತಿತ್ವವುಳ್ಳ ಮನುಷ್ಯರು ಸಮಾಜಕ್ಕೆ ಅಗತ್ಯವಾಗಿ ಬೇಕಿದೆ ಎಂದರು.
ಮೂರು ದಿನಗಳ ಕಾಲ ಕೆ.ಶ್ರೀಹರಿಯವರ ಮಾರ್ಗದರ್ಶನದಲ್ಲಿ ಆಗಮ ಪ್ರವೀಣ ತೇಜೋನಿಧಿ ಎಸ್.ದೀಕ್ಷಿತ್ ಮತ್ತು ಶ್ರೀ ಪ್ರಹ್ಲಾದ್ ರಾವ್ ರವರ ಆಚಾರ್ಯತ್ವವದಲ್ಲಿ ಎಲ್ಲಾ ಪೂಜಾ ಕಾರ್ಯಗಳು ಭಕ್ತಿ ಭಾವಪೂರ್ವಕವಾಗಿ ನಡೆದವು. ಗುರುವಾರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.ಹಲಗೂರು ಗ್ರಾಮದವರು ಸೇರಿದಂತೆ ಮುತ್ತತ್ತಿ, ಕರಲಕಟ್ಟೆ, ಗಾಣಾಳು ಮತ್ತು ಇನ್ನು ಇತರೆ ಗ್ರಾಮಗಳ ಶ್ರೀರಾಮನ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಪುನೀತರಾದರು.
ರಾಮದೇವರ ಸಮಿತಿ ಅಧ್ಯಕ್ಷ ಜಯರಾಮ್ ಮಾತನಾಡಿ, ಇಂದಿನಿಂದ 48 ದಿವಸಗಳ ವಿಶೇಷ ಪೂಜೆಗಳನ್ನು ನಡೆಸಿ ಬಂದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಗುತ್ತದೆ. ರಾಮದೇವರ ಭಕ್ತರು ದೇವರ ಕೃಪೆಗೆ ಪಾತ್ರರಾಗಿ ಈ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.