ಕೇಂದ್ರ ಹಾಗೂ ರಾಜ್ಯಗಳ ಬಿನ್ನಾಭಿಪ್ರಾಯದಿಂದಾಗಿ ಗ್ರಾಮ ಪಂಚಾಯಿತಿಗಳು ಸೊರಗುತ್ತಿವೆ ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕೇಂದ್ರ ಹಾಗೂ ರಾಜ್ಯಗಳ ಬಿನ್ನಾಭಿಪ್ರಾಯದಿಂದಾಗಿ ಗ್ರಾಮ ಪಂಚಾಯಿತಿಗಳು ಸೊರಗುತ್ತಿವೆ ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದರು.

ಸಮೀಪದ ಮೈದೊಳಲಿನ ಗ್ರಾಪಂ ಆವರಣದಲ್ಲಿ ಗುರುವಾರ ನಡೆದ ಮೈದೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 2021 ರಿಂದ 2025ನೇ ಸಾಲಿನವರೆಗೆ 6.43 ಕೋಟಿ ವೆಚ್ಚದ ವಿವಿಧ ಅನುದಾನಗಳ ಅಡಿಯಲ್ಲಿ ಮಂಜೂರಾದ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂಗಳಲ್ಲಿ ಒಬ್ಬ ಫಲಾನುಭವಿಗೂ ಆಶ್ರಯ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿಲ್ಲ. ಸರ್ಕಾರಗಳ ಪ್ರತಿಷ್ಟೆಯಿಂದ ಗ್ರಾಮಗಳು ಸೊರಗುತ್ತಿವೆ. ಸದ್ಯದ ಪರಿಸ್ಥಿತಿ ನೋಡಿದರೆ ಗ್ರಾಪಂ ಚುನಾವಣೆಗಳು ಇನ್ನೂ ತಡವಾಗಲಿದೆ. ವಾರ್ಡ್‍ಗಳ ಮರುವಿಂಗಡಣೆ ಪ್ರಕ್ರಿಯೆಗಳು ನಡೆಯಬೇಕಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳಿಲ್ಲದೆ ಜಿಲ್ಲಾಡಳಿತ ಸಂಪೂರ್ಣವಾಗಿ ಹಾದಿ ತಪ್ಪಿದೆ. ಕಾಂಗ್ರೆಸ್ ಸರ್ಕಾರದ ಗ್ರಾಮ ಸ್ವರಾಜ್ಯ ಕಲ್ಪನೆ ಅಕ್ಷರಶಃ ತಲೆಕೆಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಳ್ಳಿಗಳಲ್ಲಿ ಸರ್ಕಾರಿ ಆಸ್ತಿಗಳನ್ನು ಹಾಳು ಮಾಡಿಕೊಳ್ಳುತ್ತಿರುವುದು ಬಹುದೊಡ್ಡ ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ಗ್ರಾಮಸ್ಥರು ಮನಸು ಮಾಡಿದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾದ್ಯ. ಈ ಭಾಗದ ಗ್ರಾಮಸ್ಥರ ಬಹುದೊಡ್ಡ ಬೇಡಿಕೆಯಾದ ಮಲ್ಲಾಪುರ ರಸ್ತೆ ಅಗಲೀಕರಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ. ಅಲ್ಪ ಅನುದಾನವನ್ನು ಕೈಲಾದ ಮಟ್ಟಿಗೆ ಹಂಚಿಕೆ ಮಾಡುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಮೈದೊಳಲು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳು ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ ಎಂದರು.

ಪರಿಷತ್ ಸದಸ್ಯ ಡಿ.ಎಸ್ ಅರುಣ್ ಮಾತನಾಡಿ, ಗ್ರಾಪಂಗಳಲ್ಲಿ ಸದಸ್ಯರಾಗಿ ಸೈ ಎನ್ನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಗ್ರಾಮೀಣಭಾಗದಲ್ಲಿ ಉದ್ಯಾನವನಗಳು ಭಾವನಾತ್ಮಕ ಸಂಬಂಧಗಳನ್ನು ಬೆಸೆಯುತ್ತವೆ. ಪ್ರತಿಯೊಬ್ಬರಲ್ಲೂ ಆರೋಗ್ಯ ಕಾಳಜಿ ಮೈ ಗೂಡಬೇಕು. ಹೊಸ ಆಲೋಚನೆಗಳನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರ್ಕಾರದ ಯಾವೊಂದು ಇಲಾಖೆಯಲ್ಲೂ ಹಣವಿಲ್ಲ ಎನ್ನಲಾಗುತ್ತಿದೆ. ಸರ್ಕಾರಗಳು ಮುಂದಾಲೋಚನೆ ಇಲ್ಲದೆ ಭಾಗ್ಯಗಳನ್ನು ಕರುಣಿಸಿದರ ಫಲವಾಗಿ ರಾಜ್ಯದಲ್ಲಿ ಅಭಿವೃದ್ಧಿ ಕ್ಷೀಣವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ವಿನೋದಮ್ಮ, ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಪ್ಪ, ಪಿಡಿಒ ಲಕ್ಷ್ಮೀಬಾಯಿ, ಲಕ್ಷ್ಮೀಕಾಂತ, ಕೃಷ್ಣೋಜಿರಾವ್, ಚಂದ್ರೋಜಿರಾವ್, ಪರಮೇಶ್ವರಪ್ಪ ಮೂಡ್ಲೆರ್, ಮುತ್ಯಾಲ ರಾಮರಾವ್, ರಾಮಪ್ಪ, ಗೀತಮ್ಮ, ಪೂಜಾ, ಅರ್ಪಿತಾ, ರೇಣುಕಮ್ಮ, ಶಿವಾಜಿರಾವ್ ಡಿಸಿಲೆ, ಕೆ.ಎಚ್ ಪರಮೇಶ್ವರ್‌ ರಾವ್, ಮಂಜುನಾಥ್, ರಾಜು, ನಂದಿನಿ, ಆನಂದ, ರುದ್ರೇಶ್, ಸತೀಶ್ ಇತರರಿದ್ದರು.