ಮಹಿಳಾ ಸಿಪಿಐ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಮುಖಂಡರಿಗೆ ಇದೇ ಬಿಜೆಪಿ ಶಾಸಕ ಬಿ.ಪಿ.ಹರೀಶ ಎಸ್ಪಿ ಉಮಾ ಪ್ರಶಾಂತ ಬಗ್ಗೆ, ಎಂಎಲ್ಸಿ ಎನ್.ರವಿಕುಮಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಬಗ್ಗೆ, ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾಗ ನೀವು ಎಲ್ಲಿದ್ದಿರಿ? ನಿಮ್ಮ ಮಹಿಳಾ ಪರ ಕಾಳಜಿ ಎಲ್ಲಿ ಹೋಗಿತ್ತು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಿಳಾ ಸಿಪಿಐ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಮುಖಂಡರಿಗೆ ಇದೇ ಬಿಜೆಪಿ ಶಾಸಕ ಬಿ.ಪಿ.ಹರೀಶ ಎಸ್ಪಿ ಉಮಾ ಪ್ರಶಾಂತ ಬಗ್ಗೆ, ಎಂಎಲ್ಸಿ ಎನ್.ರವಿಕುಮಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಬಗ್ಗೆ, ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾಗ ನೀವು ಎಲ್ಲಿದ್ದಿರಿ? ನಿಮ್ಮ ಮಹಿಳಾ ಪರ ಕಾಳಜಿ ಎಲ್ಲಿ ಹೋಗಿತ್ತು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಿಪಿಐ ಗಾಯತ್ರಿ, ಪೊಲೀಸರಿಬ್ಬರ ಮೇಲಿನ ಹಲ್ಲೆ ಪ್ರಕರಣ ಸೇರಿದಂತೆ ಯಾವುದೇ ಪ್ರಕರಣದ ಆರೋಪಿಗಳ ವಿರುದ್ಧ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ ಸೂಚನೆ ನೀಡಿದ್ದು, ತಪ್ಪಿತಸ್ಥರು ಯಾವುದೇ ಜಾತಿ, ಧರ್ಮ, ಸಮುದಾಯಕ್ಕೆ ಸೇರಿದವರಾಗಿದ್ದರೂ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದರು.

ಸಿಪಿಐ ಗಾಯತ್ರಿ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದು, ದಾವಣಗೆರೆಯಲ್ಲಿ ಮೊನ್ನೆ ನೇಕಾರ ಸಮುದಾಯ ಪ್ರತಿಭಟಿಸಿದ್ದಕ್ಕೆ ತಮ್ಮ ಬೆಂಬಲವಿದೆ. ನಾವೂ ಸಹ ಸಿಪಿಐ ಪರವಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲೆಂದು ಒತ್ತಾಯಿಸುತ್ತೇವೆ. ಸಿ.ಟಿ.ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಹಗುರ ಮಾತನಾಡಿದಾಗ ಮಹಿಳಾ ಮೋರ್ಚಾ ಮುಖಂಡರ ಗಮನಕ್ಕೆ ಬರಲೇ ಇಲ್ಲವೇ ಎಂದು ಕಿಡಿಕಾರಿದರು.

ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರ ವೀರಾವೇಶದ ಮಾತುಗಳು ಎಲ್ಲಾ ಮಹಿಳೆಯರಿಗೂ ಅನ್ಯಾಯ, ಅಪಮಾನವಾದಾಗಲೂ ಬರಬೇಕಲ್ಲವೇ? ಇನ್ನು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಸದಾ ಸುದ್ದಿಗೋಷ್ಟಿಗೆ ಜೊತೆಗೆ ಕರೆ ತರುತ್ತಿದ್ದ ಪುಲ್ಲಯ್ಯ ಸೇರಿದಂತೆ ನಾಲ್ವರ ವಿರುದ್ಧ ನೂತನ ಕಾಲೇಜು ರಸ್ತೆ ಟೀಂ ಅಕಾಡೆಮಿ ಅಧ್ಯಕ್ಷರು 2 ಕೋಟಿ ರು.ಗೆ ಬೇಡಿಕೆ ಇಟ್ಟ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರವೀಣ, ಪುಲ್ಲಯ್ಯ, ಮಂಜುನಾಥ, ಹನುಮಂತ ಎಂಬುವರ ವಿರುದ್ಧ ಬಿಎನ್ಎಸ್‌ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಡಿಎಸ್ಸೆಸ್ ಹೆಸರಿನಲ್ಲಿ ಆರ್‌ಟಿಐ ಮೂಲಕ ಮಾಹಿತಿ ಕೇಳಿದ್ದು, ಮಾಧ್ಯಮಗಳಲ್ಲಿ ಸಂಸ್ಥೆ ಬಗ್ಗೆ ಮಾನಹಾನಿಕರ ಸುದ್ದಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಯುವ ಮುಖಂಡ ಎಲ್.ಎಂ.ಎಚ್.ಸಾಗರ್ ಮಾತನಾಡಿ, ವಿದ್ಯಾನಗರದ ಸ್ವಾಮಿ ಹಾಗೂ ಶಾಬನೂರಿನ ರುದ್ರೇಶ ಎಂಬವರೂ ಟೀ ಅಕಾಡೆಮಿ ಆಡಳಿತ ಮಂಡಳಿಗೆ 2 ಕೋಟ ರು.ಗೆ ಡಿಮ್ಯಾಂಡ್ ಮಾಡಿದ್ದ ಬಗ್ಗೆ ದೂರು ಇದ್ದು, ಈ ಇಬ್ಬರ ವಿರುದ್ಧ ದೂರು ದಾಖಲಾಗಿಲ್ಲ. 2 ಕೋಟಿ ರು.ಗೆ ಡಿಮ್ಯಾಂಡ್ ಮಾಡಿದ್ದವರು ಕಡೆಗೆ 20 ಲಕ್ಷ ಕೊಡುವಂತೆ ಪೀಡಿಸಿದ್ದಾರೆ. ಆರ್‌ಟಿಐ ಕಾಯ್ದೆಯು ಕೆಲವರಿಗೆ ದುಡ್ಡು ವಸೂಲಿ ಮಾಡಲು ಅಸ್ತ್ರವಾಗಿದೆ ಎಂದರು.

ಪಾಲಿಕೆ ಮಾಜಿ ಸದಸ್ಯ ಎಲ್.ಡಿ.ಗೋಣೆಪ್ಪ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ ಜಾಧವ್, ಪಾಲಿಕೆ ಮಾಜಿ ಸದಸ್ಯರಾದ ಕೆ.ಜಿ.ಶಿವಕುಮಾರ, ಎ.ನಾಗರಾಜ, ಮಂಜುಳಮ್ಮ, ಮಂಗಳಮ್ಮ, ಲಿಯಾಖತ್ ಅಲಿ, ಮಂಜುನಾಥ, ಶಿವಶಂಕರ ಇತರರು ಇದ್ದರು.