ಫುಟ್ಪಾತ್‌, ಒತ್ತುವರಿ ತೆರವು ಬಳಿಕ ರಾಜಕಾಲುವೆ ಒತ್ತುವರಿ ತೆರವು

KannadaprabhaNewsNetwork |  
Published : Jul 14, 2026, 04:00 AM IST
ಬಿಎಂಟಿಸಿ | Kannada Prabha

ಸಾರಾಂಶ

ಫುಟ್‌ಪಾತ್ ಒತ್ತುವರಿ ತೆರವು, ರಸ್ತೆ ಬದಿ ಫುಟ್‌ಪಾತ್‌ ಮೇಲೆ ನಿಲ್ಲಿಸಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಬಳಿಕ ನಗರದಲ್ಲಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಚಿಂತನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಫುಟ್‌ಪಾತ್ ಒತ್ತುವರಿ ತೆರವು, ರಸ್ತೆ ಬದಿ ಫುಟ್‌ಪಾತ್‌ ಮೇಲೆ ನಿಲ್ಲಿಸಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಬಳಿಕ ನಗರದಲ್ಲಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಚಿಂತನೆ ನಡೆದಿದೆ.

ನಗರದ 4 ದಿಕ್ಕುಗಳಲ್ಲಿ 800 ಕಿ.ಮೀ.ಗಿಂತ ಹೆಚ್ಚು ಉದ್ದದ ರಾಜಕಾಲುವೆಗಳು ಇವೆ. ಇವುಗಳಲ್ಲಿ ಅನೇಕ ಕಡೆ ಕಾಲುವೆ ಒತ್ತುವರಿಯಾಗಿವೆ. ಕೆಲವೆಡೆ ಕಾಲುವೆ ಜಾಗ ಒತ್ತುವರಿಯಾಗಿದ್ದರೆ, ಮತ್ತೆ ಕೆಲವೆಡೆ ಬಫರ್ ವಲಯ ಒತ್ತುವರಿಯಾಗಿದೆ. ಇದರಲ್ಲಿ ಖಾಸಗಿ ಸಂಸ್ಥೆ ಮತ್ತು ಸರ್ಕಾರದ ಸಂಸ್ಥೆಗಳು ಕೂಡ ಒತ್ತುವರಿ ಮಾಡಿಕೊಂಡಿವೆ. ಆದರೆ, ಖಾಸಗಿ ವ್ಯಕ್ತಿಗಳಿಂದ ಒತ್ತುವರಿ ಪ್ರಮಾಣ ಹೆಚ್ಚಾಗಿದೆ. ಒತ್ತುವರಿ ತೆರವು ಕುರಿತು ಅಧಿಕಾರಿಗಳೊಂದಿಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.

ಒತ್ತುವರಿ ಆಗಿರುವ ರಾಜಕಾಲುವೆ ಜಾಗಗಳಲ್ಲಿ ಅನೇಕ ಕಡೆ ಆರ್‌ಸಿಸಿ ಕಟ್ಟಡಗಳನ್ನೇ ನಿರ್ಮಿಸಲಾಗಿದೆ. ಮತ್ತೆ ಕೆಲವೆಡೆ ತಾತ್ಕಾಲಿಕ ಶೆಡ್, ಸಿಮೆಂಟ್ ಗೋಡೆಗಳನ್ನು ನಿರ್ಮಿಸಲಾಗಿದೆ. ವಸತಿ ಮತ್ತು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿವೆ. ಈ ಒತ್ತುವರಿಯಿಂದಾಗಿ ಕಾಲುವೆ ಗಾತ್ರ, ಅಗಲ ಕಡಿಮೆಯಾಗಿದೆ. ಇದರಿಂದಾಗಿ ಭಾರಿ ಮಳೆ ಬಂದಾಗ ಮಳೆ ನೀರು ಹರಿದು ಹೋಗಲು ತೊಡಕಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಕಾಲುವೆ ನೀರು ರಸ್ತೆಗೆ ಹಾಗೂ ಸಮೀಪದ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ.

ವಿರೋಧ ವ್ಯಕ್ತವಾಗುವ ಸಾಧ್ಯತೆ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯು ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯಂತಲ್ಲ. ಅನೇಕ ಕಡೆಗಳಲ್ಲಿ ಬಡವರು ಸಣ್ಣ ಪುಟ್ಟ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಕೆಲವು ಕಡೆ ಪ್ರಭಾವಿಗಳು, ಸರ್ಕಾರಿ ಸಂಸ್ಥೆಗಳಿಂದಲೂ ಒತ್ತುವರಿಯಾಗಿದೆ. ಯಾವುದೇ ಒಂದು ಕಡೆ ಕಾರ್ಯಾಚರಣೆ ನಡೆಸಿದರೆ, ಉಳಿದ ಎಲ್ಲಾ ಕಡೆಗಳಲ್ಲೂ ಅದೇ ರೀತಿಯ ತೆರವು ಕಾರ್ಯಾಚರಣೆ ನಡೆಸಬೇಕು ಎನ್ನುವ ಆಗ್ರಹಗಳು ಕೇಳಿ ಬರುತ್ತವೆ. ರಾಜಕೀಯ ಒತ್ತಡವು ಇರುತ್ತದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹತ್ತು ದಿನಗಳಲ್ಲಿ ಬೆಂಗಳೂರಲ್ಲಿ 500 ಕಿ.ಮೀ ಫುಟ್ಪಾತ್‌ ಒತ್ತುವರಿ ತೆರವು
ಪ್ರಯಾಣಿಕ ಸ್ನೇಹಿ ಸೇವೆ ನೀಡಿ: ಚಾಲಕನಿರ್ವಾಹಕರಿಗೆ ಬಿಎಂಟಿಸಿಯಿಂದ ಸೂಚನೆ