)
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟು ಎಸ್ಟೀಮ್ ಮಾಲ್ನಿಂದ ಬೆಂಗಳೂರು ಸಿಟಿಯನ್ನು ಪ್ರವೇಶಿಸಲು ಮತ್ತು ನಾಗವಾರದಿಂದ ಬರುವ ವಾಹನಗಳು ನೇರವಾಗಿ ಬಳ್ಳಾರಿ ರಸ್ತೆ ಪ್ರವೇಶಿಸಲು ಅನುಕೂಲವಾಗುವಂತೆ ಮೇಲ್ಸೇತುವೆಯನ್ನು ನಿರ್ಮಿಸಿ ಕಳೆದ ಆಗಸ್ಟ್ನಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.
ಈ ಮೇಲ್ಸೇತುವೆ ಈಗ ವಾಹನ ಸವಾರರಿಗೆ ಇನ್ನಷ್ಟು ಕಿರಿಕಿರಿಯುಂಟು ಮಾಡುತ್ತಿದೆ. ಮೇಲ್ಸೇತುವೆಯ ಕೆಳಭಾಗ ಸಂಪೂರ್ಣವಾಗಿ ಅತಿಕ್ರಮಣಕ್ಕೆ ಒಳಗಾಗಿದ್ದು ಅಕ್ರಮ ಪಾರ್ಕಿಂಗ್ ತಾಣವಾಗಿ ಬದಲಾಗಿದೆ. ಇಲ್ಲಿ ನಿತ್ಯವೂ ಬೈಕ್, ಕಾರುಗಳು, ಮಿನಿ ಬಸ್ಗಳು, ಪಾಲಿಕೆಯ ಕಸದ ಲಾರಿಗಳು ಬಂದು ನಿಲ್ಲುತ್ತಿವೆ. ಕೆಲವು ವಾಹನಗಳು ವಾರಗಳು ಕಳೆದರೂ ನಿಂತ ಜಾಗದಿಂದ ಅಲುಗಾಡುತ್ತಿಲ್ಲ.ಇನ್ನು ಎಸ್ಟೀಮ್ ಮಾಲ್ ಕಡೆಯಿಂದ ಕೆ.ಆರ್.ಪುರಂ, ನಾಗವಾರ ಕಡೆಯಿಂದ ಹೆಬ್ಬಾಳದ ಬರುವ ಬಿಎಂಟಿಸಿ ಬಸ್ಗಳು, ಕಾರುಗಳು ನೇರವಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮುಂಭಾಗವೇ ನಿಲ್ಲುವಂತೆ ಬಸ್ ನಿಲ್ದಾಣ ನಿರ್ಮಿಸಿರುವುದು ಟ್ರಾಫಿಕ್ ಸಮಸ್ಯೆ ಉಲ್ಭಣಗೊಳ್ಳುವುದಕ್ಕೆ ಪೂರಕವಾಗಿದೆ. ಇದರಿಂದ ನಿತ್ಯವೂ ಇಲ್ಲಿ ವಾಹನ ಸಂಚಾರ ದಟ್ಟಣೆಯ ಸಮಸ್ಯೆ ಎಲ್ಲೆ ಮೀರುತ್ತಿದೆ.
ಮೆಲ್ಸೇತುವೆ ಕೆಳಭಾಗದಲ್ಲಿರುವ ಸರ್ಕಲ್ (ರೈಲ್ವೆ ಹಳಿ ಸಮೀಪ) ಅನಧಿಕೃತವಾಗಿ ಬಿಎಂಟಿಸಿ ಬಸ್ಗಳ ತಂಗುದಾಣವಾಗಿ ಬಿಟ್ಟಿದೆ. ಸದ್ಯ ವಿಶ್ವನಾಥ್ ನಾಗೇನಹಳ್ಳಿ ಮುಖ್ಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗಾಗಿ ನಿತ್ಯವೂ ಟ್ರ್ಯಾಕ್ಟರ್ ಸೇರಿದಂತೆ ದೊಡ್ಡ ವಾಹನಗಳು ಇಲ್ಲಿ ಸಂಚರಿಸುತ್ತಿರುತ್ತವೆ. ಈ ಮಧ್ಯೆ ಪಾಲಿಕೆಗಳ ಕಸದ ಟಿಪ್ಪರ್ಗಳು, ಸಣ್ಣ ಟಿಪ್ಪರ್ಗಳು ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತವೆ. ಮೆಲ್ಸೇತುವೆ ಕೆಳಭಾಗದಲ್ಲಿರುವ ಸರ್ಕಲ್ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆ ವರೆಗೆ ದಟ್ಟಣೆಯ ಅವಧಿಯಲ್ಲಿ ಪಾದಾಚಾರಿಗಳಂತೂ ಓಡಾಡುವುದು ನರಕದ ದರ್ಶನ ಮಾಡಿಸುತ್ತದೆ.
ಹೆಬ್ಬಾಳದಿಂದ ಸಂಜಯನಗರ, ಭೂಪಸಂದ್ರ ಮಾರ್ಗವಾಗಿ ಔಟರ್ ರಿಂಗ್ ರಸ್ತೆಗೆ ಹೋಗುವ ವಾಹನಗಳು ಬ್ಯಾಪ್ಟಿಸ್ಟ್ ಆಸ್ಪತ್ರೆ ಮಾರ್ಗವಾಗಿಯೇ ಇದೇ ಸರ್ವೀಸ್ ರಸ್ತೆಯಲ್ಲಿ ಬರಬೇಕು. ಇಕ್ಕಟ್ಟಾದ ಓಣಿಯಂತಿರುವ ಈ ಸರ್ವೀಸ್ ರಸ್ತೆ, ದ್ವಿಮುಖ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸವಾರರು ಕೇವಲ 200 ಮೀ. ಸಂಚರಿಸಲು 10-15 ನಿಮಿಷ ಸರ್ಕಸ್ ಮಾಡಬೇಕಾಗಿದೆ.