ಮಾರುತಿ ಶಿಡ್ಲಾಪುರ
ಪ್ರಸ್ತುತ ಕೃಷಿ ವರ್ಷಕ್ಕೆ ಮಳೆಗಾಗಿ ಕಾಯುತ್ತಿದ್ದ ರೈತನಿಗೆ ಸಮಾಧಾನ ಉಂಟಾಗಿದೆ. ಮೇ ತಿಂಗಳಿನಲ್ಲಿ ವಾಡಿಕೆ ಮಳೆ ೭೪ ಮಿಮೀ ಇದ್ದರೆ ೧೦೨ ಮಿಮೀ ಮಳೆ ಬಿದ್ದಿದೆ. ಹೀಗಾಗಿ ಕೃಷಿ ಚಟುವಟಿಕೆ ಆರಂಭವಾಗಿದೆ. ತಾಲೂಕಿನಲ್ಲಿ ೫೨ ಸಾವಿರ ಹೆಕ್ಟೇರ ಕೃಷಿ ಭೂಮಿ ಇದೆ. ಮುಂಜಾಗ್ರತಾ ಕ್ರಮವಾಗಿ ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದೆ. ಹಾನಗಲ್ಲ ತಾಲೂಕಿನ ಹಾನಗಲ್ಲ, ಚಿಕ್ಕಾಂಸಿ ಹೊಸೂರು, ಅಕ್ಕಿಆಲೂರು, ತಿಳವಳ್ಳಿ, ಆಡೂರು, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ ಹಾಗೂ ವರ್ದಿ ಸೇರಿದಂತೆ ೯ ಬೀಜ ವಿತರಣಾ ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸಜ್ಜಾಗಿದೆ.
೧೪,೩೫೦ ಹೆಕ್ಟೇರ್ ಬತ್ತ, ೨೪,೧೦೩ ಹೆಕ್ಟೇರ್ ಗೋವಿನ ಜೋಳ, ೫೮೮ ಹೆಕ್ಟೇರ್ ಶೇಂಗಾ, ೨೪೦೩ ಹೆಕ್ಟೇರ್ ಸೋಯಾ ಅವರೆ, ೩೧೦೦ ಹೆಕ್ಟೇರ್ ಹತ್ತಿ ಬಿತ್ತನೆಯಾಗುವ ಅಂದಾಜಿದೆ. ಇದಕ್ಕಾಗಿ ೧,೮೦೦ ಕ್ವಿಂಟಲ್ ಸೋಯಾ ಅವರೆ, ೩,೭೦೦ ಕ್ವಿಂಟಲ್ ಬತ್ತ, ೧,೮೫೦ ಕ್ವಿಂಟಲ್ ಗೋವಿನ ಜೋಳ, ೩೧೦ ಕ್ವಿಂಟಲ್ ಶೇಂಗಾ ಬಿತ್ತನೆ ಬೀಜಗಳನ್ನು ಇಲಾಖೆ ದಾಸ್ತಾನು ಮಾಡಿದೆ. ತಾಲೂಕಿನ ೩೮ ಸಾವಿರ ರೈತರಿಗೆ ಗರಿಷ್ಠ ೫ ಎಕರೆ ವರೆಗೆ ಅಗತ್ಯದ ಬಿತ್ತನೆ ಬೀಜ ವಿತರಿಸಲಾಗುತ್ತದೆ.ರಸಗೊಬ್ಬರದ ಕೊರತೆಯಾಗದಂತೆ ಕಟ್ಟುನಿಟ್ಟಿನ ನಿಯಮಗಳ ಅಡಿ ಹಾನಗಲ್ಲ ತಾಲೂಕಿನ ೭೮ ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರ ಮಾರಾಟಕ್ಕೆ ಕೃಷಿ ಇಲಾಖೆ ಸೂಚಿಸಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗಿದೆ. ಇಂದಿನಿಂದಲೇ ಬಿತ್ತನೆ ಬೀಜ ವಿತರಣೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಬಿತ್ತನೆ ಬೀಜಕ್ಕೆ ಯಾವುದೇ ತೆರನಾಗಿ ಕೊರತೆ ಆಗದು. ರಸಗೊಬ್ಬರಕ್ಕೂ ಕೊರತೆಯಾಗದು ಎಂದು ಕೃಷಿ ಇಲಾಖೆ ರೈತರಿಗೆ ಭರವಸೆ ನೀಡಿದೆ.
ಹಾನಗಲ್ಲ ತಾಲೂಕಿನಲ್ಲಿ ಧರ್ಮಾ, ವರದಾ ನದಿ, 700ರಷ್ಟಿರುವ ಕೆರೆಗಳು, ಧರ್ಮಾ ಜಲಾಶಯ, ಕೊಳವೆ ಬಾವಿಗಳನ್ನು ಅವಲಂಬಿಸಿ ೭೦೦೦ ರೈತರು ೧೦ ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬತ್ತದ ನಾಟಿ ಮಾಡುವ ನಿರೀಕ್ಷೆಯೂ ಇದೆ.