ಕೃಷಿಕೂಲಿಕಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಘಟಕ, ವಲಯ ಮಟ್ಟದ ಸಮ್ಮೇಳನಗಳು ನಡೆದಿವೆ. ಜಿಲ್ಲಾ ಸಮಿತಿ ನಿರ್ಣಯದಂತೆ ಅ.೩೧ಕ್ಕೆ ಮದ್ದೂರು, ನ.೨ರಂದು ಮಂಡ್ಯ, ನ.೧೩ರಂದು ಕೆ.ಆರ್.ಪೇಟೆಯಲ್ಲಿ ತಾಲೂಕು ಸಮ್ಮೇಳನಗಳು ನಡೆಯಲಿವೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೃಷಿಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಒಂಬತ್ತನೇ ಮಳವಳ್ಳಿ ತಾಲೂಕು ಸಮ್ಮೇಳನ ಅ.೨೯ರಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಕೃಷಿ ಕೂಲಿಕಾರರ ರಾಜ್ಯಾಧ್ಯಕ್ಷ ಪುಟ್ಟಮಾಧು ತಿಳಿಸಿದರು.
ಪಟ್ಟಣದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಕೂಲಿಕಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಘಟಕ, ವಲಯ ಮಟ್ಟದ ಸಮ್ಮೇಳನಗಳು ನಡೆದಿವೆ. ಜಿಲ್ಲಾ ಸಮಿತಿ ನಿರ್ಣಯದಂತೆ ಅ.೩೧ಕ್ಕೆ ಮದ್ದೂರು, ನ.೨ರಂದು ಮಂಡ್ಯ, ನ.೧೩ರಂದು ಕೆ.ಆರ್.ಪೇಟೆಯಲ್ಲಿ ತಾಲೂಕು ಸಮ್ಮೇಳನಗಳು ನಡೆಯಲಿವೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಮೂಲಭೂತ ಸೌಲಭ್ಯ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಹಾಗೂ ಹೊಟೇಲ್ಗಳಲ್ಲಿ ಇಷ್ಟ ಬಂದಷ್ಟು ಹಣವನ್ನು ನಿಗದಿಪಡಿಸಿ ಹಗಲು ದರೋಡೆ ನಡೆಸಲಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ವಸ್ತುಗಳು ಹಾಗೂ ಆಹಾರ ಪದಾರ್ಥಗಳಿಗೆ ಏಕಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಅನರ್ಹರ ಬಿಪಿಎಲ್ ಕಾರ್ಡ್ಗಳನ್ನು ಕಡಿತ ಮಾಡುವ ಹೆಸರಿನಲ್ಲಿ ಬಡವರ ಬಿಪಿಎಲ್ ಕಾರ್ಡ್ಗಳನ್ನು ಕಡಿತ ಮಾಡುವುದನ್ನು ನಿಲಿಸಬೇಕು. ಈಗಾಗಲೇ ಕಡಿತ ಮಾಡಿರುವ ಕಾರ್ಡ್ಗಳನ್ನು ಮುಂದುವರೆಸಬೇಕು. ಅಕ್ಕಿ ಜೊತೆಗೆ ೧೩ ಆಹಾರ ಪದಾರ್ಥಗಳನ್ನು ನೀಡಬೇಕು. ಸಕ್ಕರೆ ಬದಲು ೨ ಕೆ.ಜಿ ಬೆಲ್ಲವನ್ನು ನೀಡಿದರೇ ಸ್ಥಳೀಯ ಅಲೆಮನೆಗಳನ್ನು ಅಭಿವೃದ್ದಿಪಡಿಸಬಹುದು ಎಂದರು.
ಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ, ವಲಯ ಸಮಿತಿ ಅಧ್ಯಕ್ಷರಾದ ರಾಮಣ್ಣ, ಪಾಪಣ್ಣ, ಕಪಿನಿಗೌಡ, ಜ್ಯೋತಿ, ಶುಭಮತಿ, ಜಿಲ್ಲಾ ಮುಖಂಡ ಬಸವರಾಜು, ಆನಂದ್ ಪುಟ್ಟಮಾದೇಗೌಡ ಇದ್ದರು.
ಇಂದು ಮಂತ್ರಮಾಂಗಲ್ಯ; ವಧು-ವರದಿಂದ ರಕ್ತದಾನ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಅ.೨೪ರಂದು ಬೆಳಗ್ಗೆ ೯.೩೦ಕ್ಕೆ ಮಂತ್ರ ಮಾಂಗಲ್ಯ ಮದುವೆ ಹಾಗೂ ವಧು-ವರರು ರಕ್ತದಾನ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.
ದಿವ್ಯಸಾನ್ನಿಧ್ಯವನ್ನು ಯಾಚೇನಹಳ್ಳಿಯ ಶ್ರೀರಾಮಕೃಷ್ಣಸೇವಾ ಕೇಂದ್ರ ಟ್ರಸ್ಟ್ನ ಶ್ರೀನಾದನಂದನಾಥ ಸ್ವಾಮಿ ವಹಿಸಲಿದ್ದು, ವಿವಾಹ ಸಂಹಿತೆಯನ್ನು ರೈತ ಮುಖಂಡೆ ಸುನಂದಾ ಜಯರಾಮು ಬೋಧಿಸುವರು. ನಟ ಚೇತನ್ ವಿಶ್ವಮಾನವ ಸಂದೇಶ ನೀಡುವರು. ರಕ್ತದಾನ ಶಿಬಿರಕ್ಕೆ ನಟಿ ಪೂಜಾ ಗಾಂಧಿ ಚಾಲನೆ ನೀಡುವರು. ಅಭಿ ಒಕ್ಕಲಿಗ ಸಸಿ ವಿತರಿಸುವರು. ಅಧ್ಯಕ್ಷತೆಯನ್ನು ನೆಲದನಿ ಬಳಗದ ಪೋಷಕಿ ರುಕ್ಮಿಣಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎಸ್.ರವಿಕುಮಾರ್, ಅಲೈಯನ್ಸ್ ಸೌತ್ ಮಲ್ಟಿಪಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು, ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್, ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಎಂ.ಸಿದ್ದರಾಜು, ಜಾಗೃತ ಕರ್ನಾಟಕದ ಬಿ.ಕೃಷ್ಣಪ್ರಕಾಶ್, ಮಂಗಲ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಜೆ.ಗಿರೀಶ್ಪಾಲ್ಗೊಳ್ಳುವರು ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.