ಉಜಿರೆಯ ಶ್ರೀ ಧ. ಮಂ.ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಆಟಿ ಆಚರಣೆ ಹಾಗೂ ತುಳು ಸಂಸ್ಕೃತಿಯಲ್ಲಿ ಬಳಸುವ ಸಸ್ಯಗಳ ಮಹತ್ವ ಕುರಿತು ಮಾಹಿತಿ ಕಾರ್ಯಾಗಾರ ನೆರವೇರಿತು.
ಬೆಳ್ತಂಗಡಿ: ಆಟಿ ಎಂಬುದು ತಲತಲಾಂತರದಿಂದ ಬಂದಿರುವ ಸಸ್ಯಗಳ ಆಚರಣೆ. ಜಗತ್ತಿನ ಹಲವಾರು ಆಚರಣೆಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿ ಒಂದು ವಿಶೇಷವಾಗಿದೆ. ಇದರಲ್ಲಿ ಹೆಚ್ಚಿನ ಆಚರಣೆಗಳು ಕೃಷಿ ಹಾಗೂ ಪ್ರಕೃತಿಯ ಮೇಲಿನ ಕಾಳಜಿಗಾಗಿ ಆಚರಿಸಲಾಗುತ್ತದೆ. ಆದ್ದರಿಂದ ಕೃಷಿ ಮತ್ತು ಪ್ರಕೃತಿ ಜಗತ್ತಿನ ಎರಡು ಕಣ್ಣುಗಳಿದ್ದಂತೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ದಿವಾಕರ ಕೊಕ್ಕಡ ಹೇಳಿದ್ದಾರೆ.ಉಜಿರೆಯ ಶ್ರೀ ಧ. ಮಂ.ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಆಟಿ ಆಚರಣೆ ಹಾಗೂ ತುಳು ಸಂಸ್ಕೃತಿಯಲ್ಲಿ ಬಳಸುವ ಸಸ್ಯಗಳ ಮಹತ್ವ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಯುವಪೀಳಿಗೆಯ ದಾರಿ ತಪ್ಪುತ್ತಾ ಇದೆ.ಅವರನ್ನು ಸರಿ ದಾರಿಗೆ ತರುವ ಕಾರ್ಯ ನಮ್ಮಿಂದಾಗಬೇಕು. ದೇವತೆ, ದೇವರುಗಳ ಆಚರಣೆಗಳು ತುಳು ಸಂಸ್ಕೃತಿಯಲ್ಲಿ ಬಹಳ ಕಡಿಮೆ. ಇಲ್ಲಿ ಎಲ್ಲಾ ಆಚರಣೆಗಳು ಪ್ರಕೃತಿಯ ಆರಾಧನೆ ಮಾಡಲಾಗುತ್ತದೆ. ಯುವ ಜನಾಂಗ ಪ್ರಕೃತಿಯ ಮಹತ್ವ ತಿಳಿದುಕೊಂಡು ಪ್ರಕೃತಿ ಸ್ನೇಹಿಯಾಗಿ ಬದುಕಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೋಭಾ ಮಾತನಾಡಿ, ಎಲ್ಲಾ ಆಚರಣೆಗಳಲ್ಲಿ ಸಸ್ಯಪರಿಕರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಸಸ್ಯಗಳ ಜಾಗದಲ್ಲಿ ಒಂದು ನಾವು ಪ್ಲಾಸ್ಟಿಕ್ ಬಳಕೆ ಕಾಣುತ್ತಿದ್ದೇವೆ.ಎಲ್ಲಾ ಸಸ್ಯಗಳನ್ನು ಬಳಸಲು ಸಾಧ್ಯವಿಲ್ಲ. ಏಕೆಂದರೆ ಕೆಲವು ಸಸ್ಯಗಳು ವಿಷಕಾರಿಯಾಗಿರುತ್ತದೆ.ಸಸ್ಯಗಳು ಕ್ರಮೇಣ ಕಡಿಮೆಯಾಗುತ್ತಾ ಇದೆ. ಸಸ್ಯಗಳನ್ನು ಕಂಡರೆ ನಮಗೆ ಅಸಡ್ಡೆಯಾಗಿದೆ. ಹಾಗಾಗಿ ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಧ. ಮಂ. ಕಾಲೇಜಿನ ಪರೀಕ್ಷಾ ಮೌಲ್ಯಮಾಪನಾಧಿಕಾರಿ ಗಣೇಶ್ ನಾಯಕ್ ಪ್ರಕೃತಿಯ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು.‘ತುಳುವಪ್ಪೆ ಮೆಟ್ಟಿಲ್’ ಸಾಕ್ಷ್ಯ ಚಿತ್ರ ತೋರಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕಮ ನಡೆಸಲಾಯಿತು. ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಕುಂತಲಾ ಸ್ವಾಗತಿಸಿದರು. ಸಂಜನಾ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.