ಐರೋಡಿ ವೈಕುಂಠ ಹೆಬ್ಬಾರ್‌ ಕರ್ಮಯೋಗಿ: ಡಾ. ಪ್ರಭಾಕರ ಜೋಷಿ

KannadaprabhaNewsNetwork |  
Published : Oct 30, 2025, 02:30 AM IST
ಕಲ್ಬಾಗ್ ಗೋಪಾಲಕೃಷ್ಣ ಹೆಗಡೆಯವರಿಗೆ ೨೦೨೫ ರ “ಶ್ರೀ ವೈಕುಂಠ” ಪ್ರಶಸ್ತಿ ನೀಡಿ ಗೌರವಿಸಲಾಯಿತು | Kannada Prabha

ಸಾರಾಂಶ

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ವತಿಯಿಂದ ಇತ್ತೀಚೆಗೆ, ಕಲಾಕೇಂದ್ರದ ನಿಕಟಪೂರ್ವ ಅಧ್ಯಕ್ಷ, ರಂಗಭೂಮಿ ನಿರ್ದೇಶಕ ಐರೋಡಿ ವೈಕುಂಠ ಹೆಬ್ಬಾರ್‌ ಸಂಸ್ಮರಣೆ ಕಾರ್ಯಕ್ರಮ ನೆರವೇರಿತು.

ಹಂಗಾರಕಟ್ಟೆ: ವೈಕುಂಠ ಹೆಬ್ಬಾರ್ ಸಮರ್ಥ ನಾಟಕ ನಿರ್ದೇಶಕ, ಕಲಾವಿದರಾಗಿ ಮತ್ತು ಉದ್ಯಮಿಯಾಗಿ ಪ್ರಸಿದ್ಧಿ ಪಡೆದವರು. ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ಹೆಬ್ಬಾರರು ಶ್ರಮದಿಂದ ಮೇಲೆ ಬಂದವರು. ಬಡತನದಿಂದ ತನ್ನ ಬೌದ್ಧಿಕ, ದೈಹಿಕ ಶ್ರಮದಿಂದ ಮೇಲೆಬಂದ ಹೆಬ್ಬಾರರನ್ನು ಕರ್ಮಯೋಗಿ ಎನ್ನಬಹುದು ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅಭಿಪ್ರಾಯಪಟ್ಟಿದ್ದಾರೆ.

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ವತಿಯಿಂದ ಇತ್ತೀಚೆಗೆ, ಕಲಾಕೇಂದ್ರದ ನಿಕಟಪೂರ್ವ ಅಧ್ಯಕ್ಷ, ರಂಗಭೂಮಿ ನಿರ್ದೇಶಕ ಐರೋಡಿ ವೈಕುಂಠ ಹೆಬ್ಬಾರ್‌ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರೂಪರಂಗ, ಗೆಳೆಯರ ಬಳಗ ಹಂಗಳೂರು ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಬ್ಬಾರರು ಹಲವಾರು ನಾಟಕಗಳಿಗೆ ನಿರ್ದೇಶನ ನೀಡಿದವರು. ಹಂಗಾರಕಟ್ಟೆ- ಯಕ್ಷಗಾನ ಕಲಾಕೇಂದ್ರದ ಸದಸ್ಯರಾಗಿದ್ದು, ಅಧ್ಯಕ್ಷರಾಗಿ ಅದರ ಸರ್ವಾಂಗೀಣ ಪ್ರಗತಿಗೆ ಕಾರಣ ಪುರುಷರು, ಸಾರ್ವಜನಿಕವಾಗಿ ಗುರುತಿಸಿಕೊಂಡವರು. ಹಲವರ ಆರೋಗ್ಯ, ವಿದ್ಯಾಭ್ಯಾಸಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಆಧಾರ ಸ್ತಂಭವಾಗಿ ನಿಂತವರು ಎಂದು ಡಾ. ಜೋಷಿ ಸ್ಮರಿಸಿದರು.

ಕಲಾಕೇಂದ್ರದ ಅಧ್ಯಕ್ಷ ಆನಂದ್.ಸಿ.ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭಾಕಾರ್ಯಕ್ರಮದಲ್ಲಿ ಆಕಾಶವಾಣಿ ನಿವೃದ್ದ ಉದ್ಘೋಷಕಿ ನಾರಾಯಣೀ ದಾಮೋದರ್‌ ವೈಕುಂಠ ಹೆಬ್ಬಾರರ ಸಂಸ್ಮರಣಾ ಮಾತುಗಳನ್ನಾಡಿದರು. ಅಂತಾರಾಷ್ಟ್ರೀಯ ತಬಲಾ ವಾದಕ ಕಲ್ಬಾಗ್ ಗೋಪಾಲಕೃಷ್ಣ ಹೆಗಡೆ ಅವರಿಗೆ ೨೦೨೫ ರ ‘ಶ್ರೀ ವೈಕುಂಠ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿ.ಕೆ.ಹೆಗಡೆ ಹರಿಕೇರಿ ಅಭಿನಂದನಾ ಭಾಷಣ ಮಾಡಿದರು.

ಹೆಬ್ಬಾರ್ ಕುಟುಂಬದವರ ಪರವಾಗಿ ಐರೋಡಿ ನರಸಿಂಹ ಹೆಬ್ಬಾರ್ ಮತ್ತು ಡಾ. ಆದರ್ಶ ಹೆಬ್ಬಾರ್ ಉಪಸ್ಥಿತರಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಗುಂಡ್ಮಿ ರಾಮಚಂದ್ರ ಐತಾಳ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.ಸಭಾ ಕಾರ್ಯಕ್ರಮದ ಪೂರ್ವದಲ್ಲಿ ‘ಶಲ್ಯ ಭೇದನ’ ಮತ್ತು ಕಾರ್ಯಕ್ರಮದ ನಂತರ ‘ಶಲ್ಯ ಪರ್ವ’ ಯಕ್ಷಗಾನ ತಾಳಮದ್ದಲೆ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ