ಜೋಯಿಡಾ ತಾಲೂಕಿನ ತ್ರೈಮಾಸಿಕ ಅಭಿವೃದ್ಧಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಜೋಯಿಡಾಅಧಿಕಾರಿಗಳಲ್ಲಿ ನಯ-ವಿನಯತೆ ಮತ್ತು ಕೆಲಸ ಮಾಡುವ ಗುಣಗಳಿರಬೇಕು. ಮೊದಲು ಮಾನವನಾಗಿ ಬದುಕಲು ಕಲಿಯಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತಾಲೂಕಿನ ತ್ರೈಮಾಸಿಕ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ತಾಲೂಕಿನ ಅಧಿಕಾರಿಗಳು ಹಿಂದಿನ ಸಭೆಯಲ್ಲಿ ಹೇಳಿದ್ದನ್ನೇ ಹೇಳುವುದಲ್ಲ, ಕೆಲಸ ಮಾಡಿದ ಪ್ರಗತಿ ಹೇಳಬೇಕು. ಸರ್ಕಾರ ಒಂದು ಕೆಲಸಕ್ಕೆ ಹಣ ನಿಗದಿಪಡಿಸಿದಾಗ ಸರಿಯಾದ ವೇಳೆಗೆ ಕೆಲಸ ಮುಗಿಸಬೇಕು. ಹಾಗಾಗಿ ತಹಶೀಲ್ದಾರ್ ಮತ್ತು ಇಒ ಅವರು ಪ್ರತಿ ತಿಂಗಳು ಎಲ್ಲ ಇಲಾಖೆಯವರೊಂದಿಗೆ ಸಭೆ ನಡೆಸಿ ಪ್ರಗತಿ ಸಾಧಿಸಬೇಕು ಸಣ್ಣ ಪುಟ್ಟ ಸಮಸ್ಯೆಗಳನ್ನು ಮುಂದಿನ ಸಭೆಯವರೆಗೂ ಎಳೆಯಬಾರದು, ಬರುವ ಅನುದಾನ ಬೇಗ ಬಳಕೆ ಮಾಡಿಕೊಳ್ಳಬೇಕು ಎಂದರು.
ಅರಣ್ಯ ಇಲಾಖೆಯವರು ಸ್ಥಳೀಯರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಇಲಾಖೆ, ಆರೋಗ್ಯ ಇಲಾಖೆಗಳು ಜನರಿಗೆ ಅಗತ್ಯ ಸೇವೆ ನೀಡುವಲ್ಲಿ ಮಾಡುವ ಕೆಲಸ ಸಮಾಧಾನಕರವಾಗಿಲ್ಲ. ನೀವು ಜನ ಮೆಚ್ಚುವ ಹಾಗೆ ಕೆಲಸ ಮಾಡಿದರೆ ಮಾತ್ರ ಸರ್ಕಾರಕ್ಕೆ, ನಮಗೆ ಹೆಸರು ಬರುತ್ತದೆ ಎಂದರು.ಈ ಹಿಂದೆ ಬರುತ್ತಿದ್ದ ಶಿರಸಿ-ಉಳವಿ ಬಸ್ ಈಗ ಯರಮುಖದವರೆಗೂ ಬರಲಿ ಮತ್ತು ರಾತ್ರಿ ತಮ್ಮಣಿಗೆಗೆ ಬರುವ ಬದಲಿಗೆ ಮಧ್ಯಾಹ್ನ ಬಸ್ ತಮ್ಮಣಿಗೆಗೆ ಬಿಡುವಂತೆ ದಾಂಡೇಲಿ ಡಿಪೋ ವ್ಯವಸ್ಥಾಪಕರಿಗೆ ತಿಳಿಸಿದರು.
ಗುಂದ ಗ್ರಾಪಂ ಅಧ್ಯಕ್ಷ ಅರುಣ ದೇಸಾಯಿ ಅವರ ಬೇಡಿಕೆಯಂತೆ ಗುಂದ ಆಸ್ಪತ್ರೆಗೆ ಕೂಡಲೇ ಡಾಕ್ಟರ್ರನ್ನು ನೇಮಿಸುವಂತೆ ಕಾರವಾರ ಡಿಎಚ್ಒಗೆ ತಿಳಿಸಿದಾಗ ಸಭೆ ಮುಗಿಯುವ ಮೊದಲೇ ನೇಮಕದ ಆದೇಶ ಶಾಸಕರಿಗೆ ತಲುಪಿತು. ಚರ್ಚೆಯಲ್ಲಿ ಪ್ರಮುಖರಾದ, ವಿನಯ್ ದೇಸಾಯಿ, ಅರುಣ ದೇಸಾಯಿ, ಮಂಗೇಶ್ ಕಾಮತ, ಸಂಜಯ ಹಣಬರ್, ಎಲ್ಲ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸಿದ್ದರು.