ಕನ್ನಡಪ್ರಭ ವಾರ್ತೆ ಮಡಿಕೇರಿ
ಹಸಿರೂರ ಸಿಂಗಾರಿ ಹೊಂಬಣ್ಣ ತಳೆದಾಗ ನಮ್ಮೂರ ನವಿಲುಗಳು ಆಡುತ್ತಾವೋ ನಲಿದಾಡುತಾವೋ.. ಎಂದು ಮಡಿಕೇರಿಯ ರಾಧಿಕಾ ವಿಶ್ವನಾಥ್ ಕವನ ವಾಚಿಸಿದರೆ ಗೊಟ್ಟೆಯ ಹಣ್ಣಿನ ಮರವು ಬಿಟ್ಟಿದೆ. ಗೊಂಚಲು ಗೊಂಚಲು ಹಣ್ಣುಗಳ ತಿನ್ನಲು ಬಂದವು ವಿವಿಧ ಹಕ್ಕಿಗಳು ಮಧುರ ಸ್ವರದಲ್ಲಿ ಹಾಡುತ್ತಾ.. ಎಂದು ಭಾಗಿರಥಿ ಹುಲಿತಾಳ ಕವನ ವಾಚಿಸಿದರು.
ಚಿಕ್ಕ ಅಳುವಾರಿನ ರಾಜೇಶ್, ಕಗ್ಗೋಡ್ಲುವಿನ ಅಪರ್ಣ ಹುಲಿತಾಳ , ಪೇರಿಯ೦ಡ ಯಶೋಧ, ಕೋಂಪುಳಿರ ಇಂದಿರಾವತಿ , ಮುಕ್ಕಾಟಿ ಹರಿಣಿ ಗಿರೀಶ್, ಉಳುವಂಗಡ ಕಾವೇರಿ, ಪ್ರಗತಿಕೇಡನ ಕವಿತ ಕೆ.ಎನ್, ರಜಿತ ಕಾರ್ಯಪ್ಪ, ಗೀತಾಂಜಲಿ, ವಿಮಲಾ ದಶರಥ, ಮಧುರ ಪಾರೆರ, ರಂಜಿತ ಪಾಲೊದರ ಶಿವದೇವಿ ಅವನಿಶಚಂದ್ರ ಡಾ. ಎ. ಎನ್. ಗಾಯತ್ರಿ ವೈಲೇಶ್ ಸುಶೀಲ ಕುಶಾಲಪ್ಪ ಸೇರಿದಂತೆ 25 ಮಂದಿ ಕವಿಗಳು ಕವನ ವಾಚಿಸಿದರು. ಕವನವಾಚನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷ ಸಿ. ಎಸ್. ಸುರೇಶ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹದವಾಗಿ ಮಳೆ ಬಂದು ಭೂಮಿಯಲ್ಲಿ ನೀರು ಇಂಗಿ ಜಲ ನೆಲ ಪರಿಸರ ಸಂಪತ್ ಭರಿತವಾಗುವುದು ಸಾಮಾನ್ಯವಾಗಿತ್ತು. ಇದೀಗ ಮಳೆ ದೂರವಾಗಿದೆ. ಸಾಹಿತ್ಯವು ಜನಮಾನಸದಿಂದ ದೂರವಾಗುತ್ತಿದೆ. ಕತೆ, ಕವನ ಕಾದಂಬರಿ, ವಿಭಿನ್ನ ಸಾಹಿತ್ಯ ಪ್ರಕಾರಗಳು ಬದುಕನ್ನು ಶ್ರೀಮಂತ ಗೊಳಿಸುತ್ತಿದ್ದವು. ಕುವೆಂಪು ಬೇಂದ್ರೆ ಪುತಿನ.. ಸೇರಿದಂತೆ ಹಲವು ಕನ್ನಡ ಕವಿಗಳು ಕನ್ನಡದ ಕಂಪನ್ನು ಹೊರ ಸೂಸಿದರು. ಕಾವ್ಯ ಬದುಕಿನ ಜೀವಾಳವಾಗಿದೆ. ಗಟ್ಟಿಯಾದ ಸಮೃದ್ಧವಾದ ಕಾವ್ಯರಚನೆಯಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಬೇಕು ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರಧಾನ ಕಾರ್ಯದರ್ಶಿ, ಬಬ್ಬಿರ ಸರಸ್ವತಿ ಮಾತನಾಡಿ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಪರಿಷತ್ತು ರೂಪಿಸುವ ಕಾರ್ಯಕ್ರಮಗಳ ಮೂಲಕ ಬಾಂಧವ್ಯ ಗಟ್ಟಿಯಾಗಬೇಕು ಎಂದರು.
ಸಮಿತಿ ಸದಸ್ಯರಾದ ಸುಶೀಲ ಕುಶಾಲಪ್ಪ, ತಮ್ಮಯ್ಯ, ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಅತ್ಯುತ್ತಮ ಮೂರು ಕವನಗಳು : ರಾಧಿಕಾ ವಿಶ್ವನಾಥ್ ಹಸಿರೂರ ಸಿಂಗಾರಿ ಕವನವಾಚನದ ಮೂಲಕ ಪ್ರಥಮ ಬಹುಮಾನ ಗಳಿಸಿದರು. ಸುಕೃತವು ನಮ್ಮದು ಕವನ ವಾಚಿಸುವುದರ ಮೂಲಕ ವೈಲೇಶ್ ಪಿ .ಎಸ್ ದ್ವಿತೀಯ ಸ್ಥಾನ ಪಡೆದರು. ಪರಿಸರದ ರಕ್ಷಣೆ ಕವನದ ಮೂಲಕ ಸುಶೀಲ ಕುಶಾಲಪ್ಪ ತೃತೀಯ ಸ್ಥಾನ ಪಡೆದರು. ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕವಿ- ಕವಯತ್ರಿಯರಿಗೆ ಪ್ರಶಂಸನಾ ಪತ್ರ ಹಾಗು ಸ್ಮರಣಿಕೆ ವಿತರಿಸಲಾಯಿತು.
ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹಕಾರ್ಯದರ್ಶಿ ಚಂದನ್ ನಂದರಬೆಟ್ಟು, ಮಕ್ಕಳ ಪ್ರಕಾರ ಪ್ರಮುಖ್ ಹೇಮಂತ್ ಪಾರೇರ, ಜಿಲ್ಲಾ ಸಮಿತಿ ಸದಸ್ಯರಾದ ಜಾನಕಿ ಮಾಚಯ್ಯ, ಕಡ್ಲೇರ ಆಶಾ ಧರ್ಮಪಾಲ್, ಪ್ರೀತಿ ಡಿಸೋಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.