ಬಿಸಿಯೂಟ ತಯಾರಿಕರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು: ರವೀಶ್‌

KannadaprabhaNewsNetwork | Published : Jan 13, 2024 1:30 AM

ಬಿಸಿಯೂಟ ಅಡುಗೆ ತಯಾರಕರು ಹಾಗೂ ಸಹಾಯಕರು ಅಡುಗೆ ಸಿದ್ಧಪಡಿಸುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಗ್ಯಾಸ್ ಬಳಸುವಾಗ ಬೆಂಕಿ ಅವಘಡಗಳನ್ನು ತಪ್ಪಿಸುವ ಬಗ್ಗೆ ಮಾಹಿತಿ ತಿಳಿದು ಕೊಳ್ಳಬೇಕಾದ ಅಗತ್ಯ ಇದೆ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೆ ರೀತಿ ಅಪಘಾತ ಸಂಭವಿಸಿದಾಗ ಅದಕ್ಕೆ ಪ್ರಥಮಚಿಕಿತ್ಸೆ ನೀಡುವ ಮಾಹಿತಿ ಪಡೆಯಬೇಕು ಎಂದು ತರಬೇತಿ ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್‌ ಹೇಳಿದರು.

- ಅಕ್ಷರ ದಾಸೋಹ ಮುಖ್ಯ ಅಡುಗೆಯವರು, ಸಹಾಯಕ ಅಡುಗೆಯವರಿಗೆ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಿಸಿಯೂಟ ಅಡುಗೆ ತಯಾರಕರು ಹಾಗೂ ಸಹಾಯಕರು ಅಡುಗೆ ಸಿದ್ಧಪಡಿಸುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್‌ ಹೇಳಿದರು.

ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸಹಯೋಗದಲ್ಲಿ ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಅಕ್ಷರದಾಸೋಹ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ಯಾಸ್ ಬಳಕೆ ಮಾಡುವಾಗ ಆಗುವ ಬೆಂಕಿ ಅವಘಡಗಳನ್ನು ತಪ್ಪಿಸುವ ಬಗ್ಗೆ ಮಾಹಿತಿ ತಿಳಿದು ಕೊಳ್ಳಬೇಕಾದ ಅಗತ್ಯ ಇದೆ ಎಂದ ಅವರು, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೆ ರೀತಿ ಅಪಘಾತ ಸಂಭವಿಸಿದಾಗ ಅದಕ್ಕೆ ಪ್ರಥಮಚಿಕಿತ್ಸೆ ನೀಡುವ ಕುರಿತು ತಿಳಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿಯೂ ಪಿಇಟಿ ಮಾಡಿಸುತ್ತೇವೆಂದರು.

ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯವಾಗಿದೆ. ಅಡುಗೆ ಕೋಣೆಯಲ್ಲಿ ತಾವುಗಳಿಗೆ ಸಮಸ್ಯೆ ಎದುರಾದಾಗ ಅದರಿಂದ ಪಾರಾಗುವ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಶಾಲಾ ಅವಧಿಯಲ್ಲಿ ಮಕ್ಕಳು ಅಡುಗೆ ಪಾತ್ರೆಯಲ್ಲಿ ಬೀಳದಂತೆ ಅದರಲ್ಲೂ ರಾಜ್ಯಾದಂತ ಈಗಾಗಲೇ ಆಗಿರುವ ಅವಘಡಗಳು ಪುನಃ ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ. ಅದಕ್ಕಾಗಿ ಈ ರೀತಿಯ ಕಾರ್ಯಾಗಾರಗಳು ಸಹಕಾರಿ ಎಂದರು.

ಜಿಲ್ಲಾ ಬಿಸಿಯೂಟ ತಯಾರಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ಮಾತನಾಡಿ, ಸರ್ಕಾರ ಕಳೆದ 23 ವರ್ಷಗಳಿಂದ ಹಲವಾರು ತರಬೇತಿ ಕಾರ್ಯಕ್ರಮ ರೂಪಿಸಿ, ಸುಸಜ್ಜಿತ ಅಡುಗೆ ತಯಾರಕರನ್ನಾಗಿ ಮಾಡಿದೆ. ಈ ಸಂಬಂಧ ಸರ್ಕಾರಕ್ಕೆ ಮನವಿ ನೀಡುವ ಸಂದರ್ಭದಲ್ಲಿ ಅಡುಗೆ ತಯಾರು ಮಾಡುವಾಗ ಏನೆಲ್ಲಾ ಸಮಸ್ಯೆಗಳು ನಿಭಾಯಿಸಬೇಕು, ನಿಗಧಿತ ಸಮಯಕ್ಕೆ ಊಟ ಬಡಿಸಬೇಕು ಎಂಬ ಬಗ್ಗೆ ಮತ್ತು ಶುಚಿ-ರುಚಿ ಕುರಿತು ತರಬೇತಿ ನೀಡುತ್ತಿರುವುದನ್ನು ಸ್ವಾಗತಿಸುತ್ತೇನೆಂದರು.

ಪ್ರಸ್ತುತ ಅಡುಗೆಯವರಿಗೆ ನೇರ ಅವರ ಖಾತೆಗೆ ಹಣ ಬರುತ್ತಿದೆ. ಮೊದಲು ಎಸ್‌ಡಿಎಂಸಿ ಅವರಿಂದ ಪಡೆಯಬೇಕಿತ್ತು. ಅಡುಗೆ ತಯಾರಕರಿಗೆ ಸುಟ್ಟ ಗಾಯಗಳಾದರೆ ತುರ್ತಾಗಿ 30 ಸಾವಿರ ರು. ಪರಿಹಾರ ನೀಡಲು ಅವಕಾಶವಿದೆ. ಇದೇ ಸಂದರ್ಭದಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದರು.

ಕುಕ್ಕರ್, ಅಗ್ನಿ ಅವಘಡಗಳಾಗುತ್ತಿವೆ. ಈ ಬಗ್ಗೆ ಹೆಣ್ಣು ಮಕ್ಕಳು ಮುನ್ನಚ್ಚರಿಕೆ ಕ್ರಮ ವಹಿಸಬೇಕು. ಸರ್ಕಾರ ಬಿಸಿಯೂಟ ಕಾರ್ಯಕರ್ತರಿಗೆ ವಾರ್ಷಿಕ 10 ರಜೆಗಳನ್ನು ನೀಡುತ್ತಿದ್ದು, ಸಂಘಟನೆ ಬಲವಾದ ಹೋರಾಟದಿಂದ ಈ ಜಿಲ್ಲೆಯಲ್ಲಿ ಸೌಲಭ್ಯ ದೊರೆಯುವ ಜೊತೆಗೆ ಪುರಸ್ಕಾರಗಳು ಬಂದಿವೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್ ಮಾತನಾಡಿ, ಬಿಸಿಯೂಟ ಕಾರ್ಯ ಕರ್ತರು ಬೆಂಕಿ ಅವಘಡಗಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಸರ್ಕಾರ ಇತ್ತೀಚಿಗೆ ವಿವಿಧ ಬಗೆ ಆಹಾರ ತಯಾರಿಕೆ ಬಗ್ಗೆ ಮೆನು ನೀಡಿದ್ದು, ಅದರಂತೆ ಬೆಳಗ್ಗೆ ಹಾಲು, ಮಧ್ಯಾಹ್ನ ಊಟ, ಬಾಳೇಹಣ್ಣು, ಮೊಟ್ಟೆ ಕೊಡುವ ಜೊತೆಗೆ ಸ್ವಚ್ಛತೆ ಕಡೆ ಗಮನಹರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷ ರಘು, ಸಮನ್ವಯಾಧಿಕಾರಿ ನಾಗರಾಜ್, ಇಂಧುಮತಿ, ದೇವೇಂದ್ರಪ್ಪ, ಅರವಿಂದ್, ಲಕ್ಷ್ಮಿ, ಶಾರದಮ್ಮ, ಲೋಕೇಶ್ ಉಪಸ್ಥಿತರಿದ್ದರು.

---ಬಾಕ್ಸ್---ಫೆ.11ಕ್ಕೆ ಜಿಲ್ಲಾಮಟ್ಟದ ಸಮಾವೇಶ ಮುಂದಿನ ಫೆ.11 ರಂದು ಚಿಕ್ಕಮಗಳೂರಿನ ರಂಗಣ್ಣನ ಛತ್ರದಲ್ಲಿ ಜಿಲ್ಲೆಯ ಎಲ್ಲಾ ಬಿಸಿಯೂಟ ಕಾರ್ಯಕರ್ತರ 5 ಶಾಸಕರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳನ್ನೊಳಗೊಂಡ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಬಿಸಿಯೂಟ ತಯಾರಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್‌ ತಿಳಿಸಿದರು.

ಈ ಸಮಾವೇಶದ ಉದ್ದೇಶ ಸರ್ಕಾರ 6ನೇ ಗ್ಯಾರಂಟಿಯಾಗಿ ಬಿಸಿಯೂಟ ಕಾರ್ಯಕರ್ತರಿಗೆ ಮಾಸಿಕ 6 ಸಾವಿರ ರು. ವೇತನ ನೀಡುವುದಾಗಿ ಭರವಸೆ ನೀಡಿದ್ದನ್ನು ಸ್ಮರಿಸಿದ ಅವರು, ಈ ಕುರಿತು ಜಿಲ್ಲೆ ಆಡಳಿತ ಪಕ್ಷದ 5 ಶಾಸಕರು ವಿಧಾನ ಸಭೆಯಲ್ಲಿ ಚರ್ಚಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

12 ಕೆಸಿಕೆಎಂ 1

ಚಿಕ್ಕಮಗಳೂರಿನ ಎಂಇಎಸ್‌ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ಅಕ್ಷರ ದಾಸೋಹ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ತರಬೇತಿ ಕಾರ್ಯಾಗಾರವನ್ನು ಬಿಇಒ ರವೀಶ್‌ ಉದ್ಘಾಟಿಸಿದರು. ಜಿ.ರಘು, ವಿಜಯಕುಮಾರ್‌, ಇಂಧುಮತಿ, ದೇವೇಂದ್ರಪ್ಪ ಇದ್ದರು.