- ಬೆಮ್ಮನೆ ದಯಾನಂದ್ ಸರ್ವಾಧ್ಯಕ್ಷ । 9 ಪುಸ್ತಕ ಬಿಡುಗಡೆ । ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ
ಫೆ.21 ರ ಶನಿವಾರ ಹಾಗೂ 22 ರ ಭಾನುವಾರ ಬೆಳ್ಳೂರಿನ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ನಡೆಯುವ 10 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರ ಜಾತ್ರೆಗೆ ಎಲ್ಲಾ ಸಾಹಿತ್ಯ ಆಸಕ್ತರು ಆಗಮಿಸುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ತಿಳಿಸಿದರು.
ಬುಧವಾರ ತಾಲೂಕು ಕಸಾಪದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.21ರ ಶನಿವಾರ ಬೆಳಿಗ್ಗೆ 9 ಗಂಟೆಗೆ ತಾಲೂಕು ದಂಡಾಧಿಕಾರಿ ಡಾ.ನೂರಲ್ ಹುದಾ ರಾಷ್ಟ್ರ ದ್ವಜ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪರಿಷತ್ತಿನ ಧ್ವಜ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ನಾಡ ದ್ವಜಾರೋಹಣ ಮಾಡಲಿದ್ದಾರೆ. ಮಧ್ಯಾಹ್ನ ಸಮ್ಮೇಳಾ ಧ್ಯಕ್ಷರ ಮೆರವಣಿಗೆಯನ್ನು ಅಮ್ಮ ಪೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ ಉದ್ಘಾಟಿಸುವರು.ಸಂಜೆ 4ಕ್ಕೆ ಕನ್ನಡ ಗಮಕ ಪ್ರವಚನಕಾರ ಮುನಿರಾಜ್ ರೆಂಜಾಳ ಕಾರ್ಯಕ್ರಮವನ್ನು, ಶಾಸಕ ಟಿ.ಡಿ.ರಾಜೇಗೌಡ ಪುಸ್ತಕ ಮಳಿಗೆ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು. 9 ಲೇಖಕರ ಪುಸ್ತಕಗಳನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. 9 ನೇ ಸಾಹಿತ್ಯ ಸಮ್ಮೇಳಾಧ್ಯಕ್ಷ ಅನಂತ ಪದ್ಮನಾಭ ಸರ್ವಾಧ್ಯಕ್ಷ ಬೆಮ್ಮನೆ ದಯಾನಂದ್ ಅವರಿಗೆ ಧ್ವಜ ಹಸ್ತಾಂತರಿಸಲಿದ್ದಾರೆ. ಸಂಜೆ 6ಕ್ಕೆ ಜಾನಪದ ಗೋಷ್ಠಿಯಲ್ಲಿ ವಿದ್ವಾಂಸ ಡಾ.ಬಸವರಾಜ್ ನಲ್ಲಿಸರ, ಹಾಸನ ಕಸಾಪ ಜಿಲ್ಲಾಧ್ಯಕ್ಷ ಡಾ.ಮಲ್ಲೇಶ ಗೌಡ, ಜಾನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಮುಖ್ಯ ಪಾಲ್ಗೊಳ್ಳುವರು.
ಸಂಜೆ ಲೇಖಕ ಗೋಪಾಲ್ ಎಸ್. ಯಡಗೆರೆ ಅವರಿಗೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ 10 ಜನ ಕನ್ನಡ ಭಾಷಾ ಸಾಧಕರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಲಿದ್ದಾರೆ. ದಿ.ಮಂಜುನಾಥ ಶೆಟ್ಟಿ ಕಣೇಬೈಲು ಪ್ರೇರಣಾ ಪ್ರಶಸ್ತಿಯನ್ನು 4 ವಿದ್ಯಾರ್ಥಿಗಳಿಗೆ ನೀಡಲಾಗು ವುದು. ಹೊಸನಗರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಪತಿ ಹಳಗುಂದ ಸಮಾರೋಪ ನುಡಿಆಡಲಿದ್ದಾರೆ ಎಂದು ವಿವರಿಸಿದರು.