ಈ ಸರ್ಕಾರದಲ್ಲೇ ಹೆಚ್ಚು ಕಮಿಷನ್‌ ವಸೂಲಿ: ಗುತ್ತಿಗೆದಾರರ ಸಂಘದ ಮಂಜುನಾಥ

KannadaprabhaNewsNetwork |  
Published : Feb 19, 2026, 01:30 AM IST
18ಕೆಡಿವಿಜಿ8, 9-ದಾವಣಗೆರೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹಿಂದಿನ ಬಿಜೆಪಿ ಸರ್ಕಾರಕ್ಕಿಂತಲೂ ಈಗಿನ ಕಾಂಗ್ರೆಸ್ ಸರ್ಕಾರದಲ್ಲೇ ಕಮಿಷನ್‌ ಪಡೆಯುವುದು ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದಿನ ಬಿಜೆಪಿ ಸರ್ಕಾರಕ್ಕಿಂತಲೂ ಈಗಿನ ಕಾಂಗ್ರೆಸ್ ಸರ್ಕಾರದಲ್ಲೇ ಕಮಿಷನ್‌ ಪಡೆಯುವುದು ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ ಆರೋಪಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 3-4 ವರ್ಷದಿಂದ ಬಾಕಿ ಇರುವ ಹಣ ನೀಡಲು ಕಮೀಷನ್, ಪರ್ಸೆಂಟೇಜ್ ಕೇಳಲಾಗುತ್ತಿದೆ. ಇಂತಿಷ್ಟೇ ಪರ್ಸೆಂಟೇಜ್ ಅಂತೇನೂ ಹೇಳಲಿಕ್ಕಾಗುವುದಿಲ್ಲ ಎಂದರು.

ಕೆಂಪಯ್ಯ ಇದೇ ರೀತಿ ಹೇಳಿ, ಭಾರೀ ಸಮಸ್ಯೆ ಎದುರಿಸಿದ್ದರು. ಸಾವಿರಾರು ಗುತ್ತಿಗೆದಾರರ ಹಿತದೃಷ್ಟಿಯಿಂದ ಇಷ್ಟೇ ಕಮೀಷನ್, ಪರ್ಸೆಂಟೇಜ್ ಅಂತಾ ನಾವು ಹೇಳುವುದಿಲ್ಲ. ಆದರೆ, ಕಳೆದ ಸರ್ಕಾರಕ್ಕಿಂತಲೂ ಹೆಚ್ಚಾಗಿದೆ ಅಂತಷ್ಟೇ ಹೇಳಬಹುದು ಎಂದು ತಿಳಿಸಿದರು.

ಮೂರು ವರ್ಷದವರೆಗೆ ಹಣಕ್ಕಾಗಿ ಕಾಯುವ ಸಣ್ಣ ಪುಟ್ಟ ಕಾಮಗಾರಿಗಳನ್ನಷ್ಟೇ ರಾಜ್ಯದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಸಿದ್ಧವಾದ ಅನುದಾನದ ಕಾಮಗಾರಿಗಳ ಪ್ಯಾಕೇಜ್‌ಗಳನ್ನು ಹೊರ ರಾಜ್ಯದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎಂದು ದೂರಿದರು.

ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗಳಲ್ಲಿ ಕೆಲವಾರು ಗುತ್ತಿಗೆದಾರರೇ ಇದ್ದು, ಅಂತಹವರೆ ಯಾರಿಗೆ ಟೆಂಡರ್‌, ಯಾರಿಗೆ ಹಣ ನೀಡಬೇಕೆಂಬುದನ್ನೂ ನಿರ್ಧರಿಸುತ್ತಾರೆ. ಮಧ್ಯವರ್ತಿಗಳ ಮೂಲಕ ನಗರಾಭಿವೃದ್ಧಿ ಇಲಾಖೆಯನ್ನು ನಡೆಸಲಾಗುತ್ತಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತ್ರ ಗುತ್ತಿಗೆದಾರರಿಗೆ ಸ್ಪಂದಿಸುತ್ತಾರೆ ಎಂದು ಹೇಳಿದರು.

ಹಿಂದೆ 2013-18ರಲ್ಲಿ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾಲ ತಂದು, ಗುತ್ತಿಗೆದಾರರ ಬಾಕಿ ನೀಡಿದ್ದರು. ಆಗ ಗುತ್ತಿಗೆದಾರರಿಗೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯನವರು ಈಗ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಒಂದೇ ಒಂದು ಅಧಿಕೃತ ಸಭೆಯನ್ನೂ ಗುತ್ತಿದಾರರೊಂದಿಗೆ ಈ‍ರೆಗೆ ಮಾಡಿಲ್ಲ ಎಂದರು.

ಮಾ.5ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ:

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡ 37 ಸಾವಿರ ಕೋಟಿ ರು.ಗಳನ್ನು ಒಂದೇ ಕಂತಿನಲ್ಲಿ ಬಿಡುಗಡೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ.5ರಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಮಂಜುನಾಥ ತಿಳಿಸಿದರು.

ಕಳೆದ 3 ವರ್ಷದಿಂದ ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರು. ಬಾಕಿ ಉಳಿಸಿಕೊಂಡಿದ್ದು, ಅದನ್ನು ಒಂದೇ ಕಂತಿನಲ್ಲಿ ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಹೋರಾಟದಲ್ಲಿ ರಾಜ್ಯದ ಸುಮಾರು 25 ಸಾವಿರಕ್ಕೂ ಅಧಿಕ ಗುತ್ತಿಗೆದಾರರು ತಮ್ಮ ಎಲ್ಲಾ ರೀತಿಯ ಕೆಲಸ, ಕಾರ್ಯ ಸ್ಥಗಿತಗೊಳಿಸಿ, ಪಾಲ್ಗೊಳ್ಳಲಿದ್ದಾರೆ ಎಂದರು.

ಕೆಲಸ ಮಾಡಿದ ಬಾಕಿ ಹಣವನ್ನು ನಾವು ಕೇಳುತ್ತಿದ್ದೇವೆಯೇ ಹೊರತು, ಬಡ್ಡಿ ಮತ್ತೇ ಏನನ್ನೋ ಕೇಳುತ್ತಿಲ್ಲ. ಬಾಕಿ ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ಸರ್ಕಾರದ್ದೆಂದು ಹೇಳಿಕೆ ನೀಡುತ್ತಾರೆ. ಅಧಿಕಾರಕ್ಕೆ ಬಂದ ನಂತರ ಆ ಸರ್ಕಾರದ್ದು, ಈ ಸರ್ಕಾರದ್ದು ಅಂತೆಲ್ಲಾ ಹೇಳಲಿಕ್ಕೆ ಬರುವುದಿಲ್ಲ. ಈವರೆಗೆ ಸಿಎಂ ಸಿದ್ದರಾಮಯ್ಯ ಒಂದೇ ಒಂದು ಅಧಿಕೃತ ಸಭೆ ಸಹ ಕರೆದಿಲ್ಲ ಎಂದು ದೂರಿದರು.

ಸಂಘದ ಪದಾಧಿಕಾರಿಗಳು ಜನವರಿಯಲ್ಲಿ ಪತ್ರಿಕಾಗೋಷ್ಟಿ ಮಾಡಿ, ಗುತ್ತಿಗೆದಾರರ ಬಿಲ್‌ಗಳ ಬಾಕಿ ಹಣ ತಕ್ಷಣ ಬಿಡುಗಡೆ ಮಾಡಬೇಕು. ಜೇಷ್ಟತೆಯನ್ನು ಕಾಪಾಡಬೇಕು. ಆದ್ಯತೆ ಮೇರೆಗೆ ಒಂದೇ ಕಂತಿನಲ್ಲ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಇಲ್ಲದಿದ್ದರೆ ರಾಜ್ಯಾದ್ಯಂತ ಹಾಲಿ ಚಾಲ್ತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವ ಘೋಷಣೆ ಮಾಡಿದ್ದರೂ ಸರ್ಕಾರ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ನಿರುತ್ತರವಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಸಂಘದ ಪದಾಧಿಕಾರಿಗಳಾದ ಲಕ್ಷ್ಮೀಪತಿ, ಸುಬ್ರಹ್ಮಣ್ಯ ದೇವನಹಳ್ಳಿ, ಜಿ.ಆರ್.ಜಗದೀಶ, ಕೆ.ಎಸ್.ನಾಗರಾಜ, ಹೇಮಂತ, ದೇವರಾಜ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಗಿ ಬೇಡಿಕೆ, ಬೆಲೆ ಹೆಚ್ಚಾಗಲಿದೆ: ಸುರೇಶ್‌ಗೌಡ ವಿಶ್ವಾಸ
ಸರ್ವ ಜನಾಂಗದ ಶಾಂತಿಯ ತೋಟ ಪಾಲನಹಳ್ಳಿ ಮಠ