ನರೇಗಲ್ಲ: ನರೇಗಲ್ಲಗೆ ಸಮೀಪದ ಹಾಲಕೆರೆಯ ಅನ್ನದಾನೇಶ್ವರ ಮಠದ ಆವರಣದಲ್ಲಿ ಜ.೧೩ರಂದು ಬೆಳಗ್ಗೆ ೧೦ಕ್ಕೆ ಅಕ್ಷರ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಸಾನಿಧ್ಯವನ್ನು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ನಂದವಾಡಗಿ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸುವರು.ಸಮ್ಮುಖವನ್ನು ಕರೇಗುಡ್ಡ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು, ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಮಹಾಸ್ವಾಮಿಗಳು, ಹೊಸಪೇಟೆಕೆಂಪಿನಮಠದ ಚಂದ್ರಶೇಖರ ದೇವರುಹಳಿಂಗಳಿ ಕಮರಿಮಠದ ಶಿವಾನಂದ ದೇವರು, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ವಹಿಸಲಿದ್ದಾರೆ.
ಮಧ್ಯಾಹ್ನ ೧೨ ಗಂಟೆಗೆ ಮಹಾಗಣಾರಾಧನೆ ಜರುಗಲಿದೆ, ಮಧ್ಯಾಹ್ನ ೨.೩೦ಕ್ಕೆ ಪೂಜ್ಯದ್ವಯರ ಪುಣ್ಯ ಸ್ಮರಣೋತ್ಸವ ಹಾಗೂ ಅಕ್ಷರ ಎಂಬ ವಿನೂತನ ಉತ್ಸವ ಉದ್ಘಾಟನಾ ಸಮಾರಂಭ ಜರುಗಲಿದೆ. ಇದರ ವಿಶೇಷ ಆಶೀರ್ವಚನವನ್ನು ಗದಗ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮೀಜಿ ವಹಿಸಲಿದ್ದು, ಸಮ್ಮುಖವನ್ನು ಸೇಡಂನ ಸದಾಶಿವ ಮಹಾಸ್ವಾಮಿಜಿ ವಹಿಸುವರು. ಉದ್ಘಾಟನೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್. ಕೆ. ಪಾಟೀಲ ನೆರವೇರಿಸುವರು. ಶ್ರೀ ಅನ್ನದಾನೇಶ್ವರ ವಿಜ್ನಾನ ಪ ಪೂ ಮಹಾವಿದ್ಯಾಲಯ ಗದಗ ಇದರ ಅಕ್ಷರ ಎಂಬ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ಯುವಜನ ಸೇವೆ, ಕ್ರೀಡೆ ಮತ್ತು ಪರಿಶೀಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ನಾಗೇಂದ್ರ ನೆರವೇರಿಸಲಿದ್ದಾರೆ. ಅನ್ನದಾನೇಶ್ವರ ನಗರದ ಉದ್ಘಾಟನೆಯನ್ನು ರೋಣ ಶಾಸಕ ಜಿ.ಎಸ್. ಪಾಟೀಲ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಉಪನ್ಯಾಸಕ ಎನ್.ಎಸ್. ಹೊನ್ನೂರ ರಚಿತ ಕೃಷಿಯಕ್ಷರ ಯೋಗಿ ಎಂಬ ಕವನ ಸಂಕಲನವನ್ನು ಮಾಜಿ ಸಚಿವ ಕಳಕಪ್ಪ ಬಂಡಿ ಬಿಡುಗಡೆಗೊಳಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ.ಸಂಜೆ ೭ಕ್ಕೆ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದ್ದು, ಅಧ್ಯಕ್ಷತೆಯನ್ನು ಖೇಳಗಿ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು, ಸಮ್ಮುಖವನ್ನು ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಜಿಗೇರಿ ಹಿರೇಮಠದ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ, ಸಂಗನಹಾಲ ಅನ್ನದಾನೇಶ್ವರ ಮಠದ ಶಿವಲಿಂಗ ದೇಶಿಕರು ವಹಿಸಲಿದ್ದಾರೆ ಅಭಿನವ ಬೀಚಿ ಎಂದೇ ಪ್ರತಿತಿ ಹೊಂದಿದ ಗಂಗಾವತಿಯ ಬಿ. ಪ್ರಾಣೇಶ, ಬಸವರಾಜ ಮಹಾಮನಿ ಹಾಗೂ ನರಸಿಂಹ ಜೋಶಿ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ನೆರವೇರಲಿದೆ. ನ.೧೪ರಂದು ಬೆಳಗ್ಗೆ ೫ರಿಂದ ೭ ಗಂಟೆಯವರೆಗೆ ಪೂಜ್ಯತ್ರಯರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರುತಿ ಜರುಗುವುದು. ಬೆಳಗ್ಗೆ ೧೦ಕ್ಕೆ ಜಂಗಮೋತ್ಸವ ಕಾರ್ಯಕ್ರಮವನ್ನು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು ನೆರವೇರಿಸುವರು. ಸಂಜೆ ೫ಕ್ಕೆ ಶ್ರೀ ಅನ್ನದಾನೇಶ್ವರರ ಮಹಾರಥೋತ್ಸವ ಜರುಗುವದು.
ಸಂಜೆ ೬ ಗಂಟೆಗೆ ಶ್ರೀ ಅನ್ನದಾನೇಶ್ವರ ಕಾರ್ತಿಕೋತ್ಸವ, ಸಂಜೆ ೬.೩೦ಕ್ಕೆ ಶಿವಾನುಭವಗೋಷ್ಠಿ ನಡೆಯಲಿದೆ. ಶಿವಾನುಭವ ಗೋಷ್ಟಿಯ ಸನ್ನಿಧಾನವನ್ನು ಹಾವೇರಿ ಹುಕ್ಕೇರಿ ಮಠದ ಸದಾಶಿವ ದೇವರು ವಹಿಸುವರು.ಅಧ್ಯಕ್ಷತೆಯನ್ನು ಮಣಕವಾಡ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಶ್ರೀಗಳು, ಸಮ್ಮುಖವನ್ನು ದರೂರಿನ ಕೊಟ್ಟೂರು ಮಹಾಸ್ವಾಮಿಗಳು, ಕುರಗೋಡದ ನಿರಂಜನ ದೇಶೀಕರು, ಸೋಮಸಮುದ್ರದ ಸಿದ್ದಲಿಂಗ ದೇಶಿಕರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಬೂದಗುಂಪಾದ ಸಿದ್ದೇಶ್ವರ ದೇಶಿಕರು, ಅಡ್ನೂರಿನ ವಿಶ್ವೇಶ್ವರ ದೇವರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಎಂಜಿನಿಯರ್ ಆರ್.ಬಿ. ಪಾಟೀಲ, ಸಿಂಧನೂರಿನ ಡಾ. ಬಿ.ಎನ್. ಪಾಟೀಲ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಸಿದ್ದಣ್ಣ ಬಂಡಿ ಭಾಗವಹಿಸಲಿದ್ದಾರೆ.ಎರಡು ದಿನಗಳಕಾಲ ಜರುಗುವ ಕಾರ್ಯಕ್ರಮದಲ್ಲಿ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿ ವಿವಿಧ ಅಂಗಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.