ಬೆಳ್ತಂಗಡಿ : 1976ರಲ್ಲಿ ಆರಂಭಿಸಲ್ಪಟ್ಟ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇದೀಗ ಸುವರ್ಣ ಸಂಭ್ರಮ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಸಂಭ್ರಮದಲ್ಲಿ ಸದಸ್ಯರೆಲ್ಲರೂ ತನು-ಮನ-ಧನದ ಮೂಲಕ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ರಾಕೇಶ್ ಹೆಗ್ಡೆ ಮನವಿ ಮಾಡಿದರು. ಅಳದಂಗಡಿ ನಮನ ಸಭಾಭವನದಲ್ಲಿ ನಡೆದ ಸಂಘದ 49ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಬಾರಿ ಡಿವಿಡೆಂಡ್ ಶೇ. 15ರಷ್ಟು ನೀಡಲಾಗುವುದು. ಇದರಲ್ಲಿ ಸದಸ್ಯರ ಒಪ್ಪಿಗೆಯ ಮೇರೆಗೆ ಶೇ. 2 ರಷ್ಟನ್ನು ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಮೀಸಲಾಗಿಡಲಾಗುವುದು. ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಂಘವು ಸದಸ್ಯರ ಎಲ್ಲ ರೀತಿಯ ಏಳಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಆಡಳಿತವು ಕಾನೂನಿನ ಚೌಕಟ್ಟಿನೊಳಗೆ ಪಾರದರ್ಶಕತೆಯಿಂದ ನಡೆಯುತ್ತಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ಸಂಘದ ಉಪಾಧ್ಯಕ್ಷ ಜನಾರ್ದನ, ನಿರ್ದೇಶಕರಾದ ಗುರುಪ್ರಸಾದ್, ಹೇಮಂತ್, ದೇವಿಪ್ರಸಾದ ಶೆಟ್ಟಿ, ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ, ಕೊರಗಪ್ಪ, ಸುಂದರಿ, ಮಮತಾ, ಧರ್ಣಪ್ಪ, ಸುದರ್ಶನ್ ಎಸ್ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸುದರ್ಶನ್ ಉಪಸ್ಯಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರಾ ವರದಿ ಮಂಡಿಸಿದರು. ನಿರ್ದೇಶಕ ವಿಶ್ವನಾಥ ಹೊಳ್ಳ ಸ್ವಾಗತಿಸಿದರು.