ಶಿವಕುಮಾರ ಕುಷ್ಟಗಿ
ಅಬಕಾರಿ ನಿಯಮಗಳ ಪ್ರಕಾರ ಬೆಳಗ್ಗೆ 10 ಗಂಟೆಯ ಮೊದಲು ಮದ್ಯ ಮಾರಾಟ ಮಾಡುವಂತಿಲ್ಲ. ಆದರೆ ಗದುಗಿನಲ್ಲಿ ಬೆಳಗ್ಗೆ 6ಕ್ಕೇ ಮದ್ಯದ ವ್ಯಾಪಾರ ಶುರುವಾಗುತ್ತಿದೆ. ಇದು ಕರ್ನಾಟಕ ಅಬಕಾರಿ (ಪರವಾನಗಿಗಳ ಸಾಮಾನ್ಯ ನಿಬಂಧನೆಗಳು) ನಿಯಮಗಳು 1967ರ ಅಡಿಯಲ್ಲಿ ಸಮಯದ ಮಿತಿಯ ಸ್ಪಷ್ಟ ಉಲ್ಲಂಘನೆಯಾಗಿದೆ.
ನಿಗದಿತ ಪರವಾನಗಿ ಇಲ್ಲದ ಸ್ಥಳಗಳಲ್ಲಿ (ಚಹಾ ಅಂಗಡಿಗಳಲ್ಲಿ) ಮದ್ಯ ಮಾರಾಟ ಮಾಡುವುದು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 15ರ ಅಡಿಯಲ್ಲಿ ಜಾಮೀನು ರಹಿತ ಅಪರಾಧವಾಗಿದೆ. ಸೇಲ್ಸ್ ಹೆಚ್ಚಿಸುವ ನೆಪದಲ್ಲಿ ಅಬಕಾರಿ ಅಧಿಕಾರಿಗಳೇ ಮದ್ಯದ ಅಂಗಡಿಗಳ ಮೇಲೆ ಒತ್ತಡ ಹೇರುತ್ತಿರುವುದು, ಪರೋಕ್ಷವಾಗಿ ಅಕ್ರಮ ಸಾಗಾಟಕ್ಕೆ ಪ್ರಚೋದನೆ ನೀಡಿದಂತಾಗುತ್ತಿದೆ.ವ್ಯತಿರಿಕ್ತ ಪರಿಣಾಮ: ಬೆಳ್ಳಂಬೆಳಗ್ಗೆ ಮದ್ಯ ಸಿಗುತ್ತಿರುವುದರಿಂದ ಕಾರ್ಮಿಕ ವರ್ಗದವರು ಮತ್ತು ಯುವಜನತೆ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ದಿನದ ಕೂಲಿಯನ್ನು ಬೆಳಗ್ಗೆಯೇ ಮದ್ಯಕ್ಕೆ ಸುರಿಯುತ್ತಿರುವುದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಕೌಟುಂಬಿಕ ಕಲಹಗಳು ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ.
ಅಧಿಕಾರಿಗಳ ಮೌನ ಸಮ್ಮತಿ: ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಈ ಎಲ್ಲ ಅಕ್ರಮಗಳ ಮಾಹಿತಿ ಇದ್ದರೂ ಆದಾಯ ಸಂಗ್ರಹದ ನೆಪವೊಡ್ಡಿ ಮೌನಕ್ಕೆ ಶರಣಾಗಿದ್ದಾರೆ. ಸಾರ್ವಜನಿಕರು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾ ನುಣುಚಿಕೊಳ್ಳುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಘಾಟು ಹರಡುತ್ತಿರುವುದು ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿದೆ. ಇನ್ನಾದರೂ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಅಕ್ರಮ ಮದ್ಯದ ಜಾಲಕ್ಕೆ ಮತ್ತು ಸಮಯ ಮೀರಿ ನಡೆಯುವ ವ್ಯವಹಾರಕ್ಕೆ ಬ್ರೇಕ್ ಹಾಕಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 169 ಮದ್ಯ ಮಾರಾಟದ ಮಳಿಗೆಗಳಿವೆ. ಅದರಲ್ಲಿ 133 ನಗರ ಪ್ರದೇಶದ ವ್ಯಾಪ್ತಿಯಲ್ಲಿವೆ. ಉಳಿದ 36 ಅಂಗಡಿಗಳು ಗ್ರಾಮೀಣ ಪ್ರದೇಶದಲ್ಲಿವೆ. ಅದೇ ರೀತಿ ಅಬಕಾರಿ ಇಲಾಖೆಯ ಒಟ್ಟು ಗಸ್ತು ಮಾರ್ಗಗಳು 34 ಇವೆ.