ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮೈತ್ರಿ ಅಭ್ಯರ್ಥಿ ವಿವೇಕಾನಂದರ ಪರ ಅಲೆ ಇದ್ದು ಅವರು ಪ್ರಬುದ್ಧ ಮತದಾರರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಶಾಸಕ ಎಸ್. ಬಾಲರಾಜು ಹೇಳಿದರು.ಕೊಳ್ಳೇಗಾಲದ ಹಲವು ಕಾಲೇಜುಗಳಿಗೆ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ವಿವೇಕಾನಂದರ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಹಿಂದೆ ಆರಿಸಿ ಬಂದಿದ್ದವರಿಗೆ ಹೆಚ್ಚು ಅವಕಾಶವಿದ್ದರೂ ಅಭಿವೃದ್ಧಿ ಕೆಲಸ ಮಾಡಿಲ್ಲ, ಹಾಗಾಗಿ ಹೊಸ ಮುಖವಾಗಿರುವ ವಿವೇಕಾನಂದರನ್ನು ಈ ಬಾರಿ ಬೆಂಬಲಿಸುವ ವಿಶ್ವಾಸವಿದೆ. ಅವರಲ್ಲಿ ಸಮಸ್ಯೆ ಬಗೆಹರಿಸುವ ಚಾಕಚಕ್ಯತೆಯೂ ಇದೆ. ಮತದಾರರು ಅವರನ್ನು ಮೊದಲ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸಬೇಕು ಎಂದರು.
ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ, ಹೊಸ ಶಿಕ್ಷಣ ನೀತಿಗೆ ಶಕ್ತಿ ತುಂಬಲು ಮೈತ್ರಿ ಅಭ್ಯರ್ಥಿಯಾದ ವಿವೇಕಾನಂದರನ್ನು ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದರು.ಎಲ್ಲೆಲ್ಲಿ ಮತಯಾಚನೆ?:ದಕ್ಷಿಣ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಪರವಾಗಿ ಗುರುವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು, ಜಿಲ್ಲಾ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್ ಅವರು ಜಂಟಿಯಾಗಿ ವಿವಿಧೆಡೆ ಮತಯಾಚನೆ ಮಾಡಿದರು.
ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆ, ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಬಿ.ಎಂ.ಹೆಚ್.ಪಿ ಶಾಲೆ, ವಾಸವಿ ಕಾಲೇಜು, ಜಿ.ವಿ.ಗೌಡ ಕಾಲೇಜು, ಎಂಜಿಎಸ್ವಿ ಪಿಯು ಕಾಲೇಜು, ವಸಂತಕುಮಾರಿ ಕಾಲೇಜು, ಅಸ್ಸಿಸಿ ಕಾಲೇಜು, ಕಾರ್ನರ್ ಸ್ಟೋನ್ ಕಾಲೇಜು ಸೇರಿದಂತೆ ಮುಂತಾದ ಕಾಲೇಜುಗಳಿಗೆ ತೆರಳಿ ಮತಯಾಚಿಸಿದರು. ಈ ವೇಳೆ ಬಿಜೆಪಿ ನಗರಮಂಡಲ ಅಧ್ಯಕ್ಷ ಪರಮೇಶ್ವರಯ್ಯ, ಮಾನಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜು, ನಗರಸಭೆ ಸದಸ್ಯರಾದ ನಾಶೀರ್ ಷರೀಪ್, ಚಿಂತು ಪರಮೇಶ್, ಪ್ರಕಾಶ್, ಮುಖಂಡ ಜಗದೀಶ್ ಶಂಕನಪುರ, ಸತೀಶ್, ಸೋಮಣ್ಣ ಉಪ್ಪಾರ ಇನ್ನಿತರರಿದ್ದರು.