10ನೇ ಮೇ ಸಾಹಿತ್ಯ ಮೇಳದ ಕರಪತ್ರ, ಆಮಂತ್ರಣ ಪತ್ರಿಕೆ ಬಿಡುಗಡೆ
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ದೇಶಕ್ಕಾಗಿ ರೂಪಿಸಿದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಧಕ್ಕೆ ಎದುರಾಗಿದ್ದು, ಅವುಗಳ ರಕ್ಷಣೆಗಾಗಿ ಇಡೀ ನಾಡಿನ ಪ್ರಗತಿಪರರೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕರೆ ನೀಡಿದರು.
ಕೊಪ್ಪಳದಲ್ಲಿ ಮೇ ೨೫ ಮತ್ತು ೨೬ರಂದು ೧೦ನೇ ಮೇ ಸಾಹಿತ್ಯ ಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಅಶೋಕ ವೃತ್ತದ ಬಳಿ ಇರುವ ಸಾಹಿತ್ಯ ಭವನದ ಹೊರ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಹಾಗೂ ಡಾ. ವಿ.ಬಿ. ರಡ್ಡೇರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಯ ಪ್ರಯತ್ನದ ಭಾಗವಾಗಿ ಕೊಪ್ಪಳದಲ್ಲಿ ಹತ್ತನೇ ಮೇ ಸಾಹಿತ್ಯ ಮೇಳ ನಡೆಯುತ್ತಿದೆ. ಕೊಪ್ಪಳದಲ್ಲಿ ದೇಶದ ಅರಿವಿನ ಮಹಾಸ್ಫೋಟವಾಗಿದ್ದು, ಅಂತಹ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯೋಗೋಣ ಬನ್ನಿ ಎಂದು ಮನವಿ ಮಾಡಿದರು.ಸರ್ವಾಧಿಕಾರದ ವಿರುದ್ಧ ಎಲ್ಲರೂ ಹೋರಾಡಬೇಕಾಗಿದೆ. ಸರ್ವಾಧಿಕಾರದ ಶಕ್ತಿಗಳನ್ನು ಸಾಮಾನ್ಯ ಜನ ನಿಲ್ಲಬೇಕಿದೆ. ಸರ್ವಾಧಿಕಾರದ ವಿರುದ್ಧ ಹೋರಾಡುವ ಮೂಲಕ ನಮಗೆ ದಕ್ಕಿರುವ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಿದೆ. ಮೇ ಸಾಹಿತ್ಯ ಮೇಳ ಈ ನೆಲೆಯಲ್ಲಿ ಕೆಲಸ ಮಾಡುತ್ತಿದೆ. ಜರೂರಾಗಿ ಸಂವಿಧಾನ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೊಪ್ಪಳದಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳ ಎಲ್ಲರ ಧ್ವನಿಯಾಗಲಿದೆ ಎಂದು ಡಾ. ವಿ.ಬಿ. ರಡ್ಡೇರ್ ಹೇಳಿದರು.
ಬಸವರಾಜ್ ಶೀಲವಂತರ್ ಪ್ರಾಸ್ತಾವಿಕವಾಗಿ ಮಾತಾಡಿದರು. ಡಿ.ಎಂ. ಬಡಿಗೇರ ಮೇ ಸಾಹಿತ್ಯ ಮೇಳದ ಆಶಯಗಳನ್ನು ಹಂಚಿಕೊಂಡರು. ಕಾಸಿಂಸಾಬ ಸರ್ದಾರ್, ಗಾಳೆಪ್ಪ ಮುಂಗೋಲಿ, ಎಸ್.ಎ. ಗಫಾರ್, ರುದ್ರಪ್ಪ ಭಂಡಾರಿ, ಶರಣು ಶೆಟ್ಟರ್, ಲಕ್ಷ್ಮಣ ಪೀರಗಾರ, ಎಂ.ಕೆ. ಸಾಹೇಬ್, ಕಾಶಪ್ಪ ಚಲವಾದಿ, ಮಹಾಂತೇಶ ನೆಲಗಣಿ, ಸಂಜಯದಾಸ ಕೌಜಗೇರಿ, ಬಸವರಾಜ್ ಸೂಳಿಬಾವಿ, ಎಚ್.ವಿ. ರಾಜಾಬಕ್ಷಿ, ಸಿರಾಜ್ ಬಿಸರಳ್ಳಿ, ಕಾಶಪ್ಪ ಚಲವಾದಿ ಉಪಸ್ಥಿತರಿದ್ದರು.