ನಾಳಿನ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ಕಣ್ಣು !

KannadaprabhaNewsNetwork | Published : Jun 3, 2024 12:31 AM

ಸಾರಾಂಶ

ಚುನಾವಣೆಯಲ್ಲಿ ಜೆಡಿಎಸ್‌ನೊಳಗೆ ಒಗ್ಗಟ್ಟು ಪ್ರದರ್ಶಿಸಿದ ಮಾದರಿಯಲ್ಲೇ ಕಾಂಗ್ರೆಸ್ಸಿಗರು ಅವಿರತರ ಶ್ರಮ ವಹಿಸಿ ಹೋರಾಟ ನೀಡಿದ್ದಾರೆ. ಎರಡೂ ಪಕ್ಷಗಳ ಮುಖಂಡರು-ಕಾರ್ಯಕರ್ತರು ಗೆಲುವಿನ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಅವರದ್ದೇ ಆದ ಲೆಕ್ಕಾಚಾರಗಳೊಂದಿಗೆ ವಿಶ್ಲೇಷಣೆ ಮಾಡಿಕೊಂಡು ಜಯ ನಮ್ಮದೇ ಎಂದು ಎದೆತಟ್ಟಿಕೊಂಡು ಹೇಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತೀವ್ರ ಕುತೂಹಲ ಕಾಯ್ದಿರಿಸಿಕೊಂಡಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಮಂಗಳವಾರ (ಜೂ.೪) ಪ್ರಕಟವಾಗಲಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಡುವೆ ಏರ್ಪಟ್ಟಿದ್ದ ಚುನಾವಣಾ ಸಮರದಲ್ಲಿ ವಿಜಯಮಾಲೆ ಯಾರ ಕೊರಳನ್ನು ಅಲಂಕರಿಸಲಿದೆ ಎನ್ನುವತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದಾರೆ. ಕಳೆದ ೨೫ ವರ್ಷಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಿನಿಮಾ ತಾರೆಯರಿಗೆ ಅವಕಾಶ ನೀಡುತ್ತಿದ್ದ ಕಾಂಗ್ರೆಸ್, ಈ ಬಾರಿ ಉದ್ಯಮಿ ಸ್ಟಾರ್ ಚಂದ್ರು ಅವರನ್ನು ಕಣಕ್ಕಿಳಿಸಿ ಹೊಸ ಪ್ರಯೋಗ ನಡೆಸಿದೆ.

ಚುನಾವಣೆಯಲ್ಲಿ ಜೆಡಿಎಸ್‌ನೊಳಗೆ ಒಗ್ಗಟ್ಟು ಪ್ರದರ್ಶಿಸಿದ ಮಾದರಿಯಲ್ಲೇ ಕಾಂಗ್ರೆಸ್ಸಿಗರು ಅವಿರತರ ಶ್ರಮ ವಹಿಸಿ ಹೋರಾಟ ನೀಡಿದ್ದಾರೆ. ಎರಡೂ ಪಕ್ಷಗಳ ಮುಖಂಡರು-ಕಾರ್ಯಕರ್ತರು ಗೆಲುವಿನ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಅವರದ್ದೇ ಆದ ಲೆಕ್ಕಾಚಾರಗಳೊಂದಿಗೆ ವಿಶ್ಲೇಷಣೆ ಮಾಡಿಕೊಂಡು ಜಯ ನಮ್ಮದೇ ಎಂದು ಎದೆತಟ್ಟಿಕೊಂಡು ಹೇಳುತ್ತಿದ್ದಾರೆ.

ಮೇಲ್ನೋಟಕ್ಕೆ ಕುಮಾರಸ್ವಾಮಿ ಗೆಲುವು:

ಚುನಾವಣೆ ಮುಗಿದು ಒಂದು ತಿಂಗಳು ಸಮೀಪಿಸುತ್ತಿದ್ದು ಈ ಹಂತದಲ್ಲಿ ಮತದಾನದ ಪ್ರಮಾಣ, ಜನಮಾನಸದಲ್ಲಿ ಕೇಳಿಬರುತ್ತಿರುವ ಮಾತಿನಂತೆ ಮೇಲ್ನೋಟಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಜಿಲ್ಲೆಗೆ ಹೊಸಮುಖ. ಜನರಿಗೆ ಅಷ್ಟೇನು ಪರಿಚಿತರಾಗಿಲ್ಲ. ಅವರಿಗೆ ಕಾಂಗ್ರೆಸ್ಸಿಗರೆಲ್ಲರೂ ಸೇರಿ ಚುನಾವಣೆ ವೇಳೆ ಹೆಚ್ಚಿನ ಬಲ ತುಂಬಿದ್ದರೂ ಲೋಕಸಭಾ ಕ್ಷೇತ್ರದ ಜನರು ಅವರನ್ನು ಒಪ್ಪಿಕೊಂಡು ಮತ ಹಾಕಿಲ್ಲ ಎಂದು ಹಲವರು ವಿಶ್ಲೇಷಿಸಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಯುವಕರು, ಮಹಿಳೆಯರಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಪರಿಚಿತರಾಗಿದ್ದಾರೆ. ಅವರನ್ನು ಹೊಸದಾಗಿ ಜಿಲ್ಲೆಯ ಜನರಿಗೆ ಪರಿಚಯಿಸಬೇಕಿರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿರುವ ಸಾಲ ಮನ್ನಾ, ರೈತರ ಆತ್ಮಹತ್ಯೆಗೆ ಸ್ಪಂದಿಸಿದ ರೀತಿ, ಋಣಮುಕ್ತ ಕಾಯ್ದೆ ಜಾರಿಗೆ ನಡೆಸಿದ ಪ್ರಯತ್ನ ಇದರ ಬಗ್ಗೆ ಜಿಲ್ಲೆಯ ಜನರು ಅಭಿಮಾನ ಹೊಂದಿದ್ದಾರೆ. ಅವರ ನಾಮಬಲವೊಂದೇ ಗೆಲುವಿಗೆ ಸಾಕು. ಅಲ್ಲದೇ, ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದ ಸಮಯದಲ್ಲಿ ಜೆಡಿಎಸ್‌ನವರು ಮಾಡಿಕೊಂಡ ಎಡವಟ್ಟುಗಳನ್ನು ಈ ಚುನಾವಣೆಯಲ್ಲಿ ಮಾಡಿಕೊಳ್ಳಲಿಲ್ಲ. ಮತದಾನದ ಪ್ರಮಾಣವೂ ಹೆಚ್ಚಾಗಿ ನಡೆದಿರುವುದರಿಂದ ಎಚ್.ಡಿ.ಕುಮಾರಸ್ವಾಮಿ ಗೆಲುವು ಬಹುತೇಕ ನಿಶ್ಚಿತ ಎನ್ನುವುದು ಜೆಡಿಎಸ್ ಪರವಿರುವವರ ಮಾತಾಗಿದೆ.

ಸ್ಟಾರ್ ಚಂದ್ರುಗೆ ಅದೃಷ್ಟದ ಗೆಲುವು:

ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಅಷ್ಟು ಸುಲಭವಾಗೇನೂ ಇಲ್ಲ. ಕಾಂಗ್ರೆಸ್ ನಾಯಕರೂ ಎಲ್ಲಿಯೂ ಭಿನ್ನಾಭಿಪ್ರಾಯ, ಅಪಸ್ವರಗಳಿಗೆ ಕಾರಣವಾಗದಂತೆ ಚುನಾವಣೆ ನಡೆಸಿದ್ದಾರೆ. ಮಹಿಳಾ ಮತದಾರರು ಹಾಗೂ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗ ಹಾಗೂ ಇತರೆ ಹಿಂದುಳಿದ ಜಾತಿಯವರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಒಕ್ಕಲಿಗ ಮತದಾರರಲ್ಲಿ ಶೇ.೭೦ರಷ್ಟು ಮತಗಳು ಜೆಡಿಎಸ್ ಕೈಹಿಡಿದು, ಶೇ.೩೦ರಷ್ಟು ಕಾಂಗ್ರೆಸ್ ಪರ ಚಲಾವಣೆಗೊಂಡಿದ್ದರೂ ಸಾಕು. ಹಿಂದುಳಿದ ವರ್ಗ ಮತ್ತು ಇತರೆ ಜಾತಿಯವರ ಮತಗಳು ಹೆಚ್ಚು ಕಾಂಗ್ರೆಸ್ ಕಡೆ ಚಲಾವಣೆಗೊಂಡಿರುವ ಸಾಧ್ಯತೆಗಳಿರುವುದರಿಂದ ಸ್ಟಾರ್ ಚಂದ್ರು ಗೆಲುವು ಸಾಧ್ಯವಾಲಿದೆ ಎನ್ನುವುದು ಕಾಂಗ್ರೆಸ್ಸಿಗರ ಮಾತಾಗಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರೇರಿತರಾಗಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿರುವುದರಿಂದಲೇ ಮತದಾನದ ಪ್ರಮಾಣ ಶೇ.೮೧ರಷ್ಟು ನಡೆದಿದೆ. ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳ ಅನುಕೂಲ ಹೆಚ್ಚಾಗಿ ದೊರಕಿರುವುದರಿಂದ ಮಹಿಳೆಯರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಹಾಗಾಗಿ ಗೆಲುವು ನಮ್ಮದೇ ಎನ್ನುವ ವಿಶ್ವಾಸದಲ್ಲಿದ್ದಾರೆ. ಈ ನಿರೀಕ್ಷೆಯಂತೆ ಮತಗಳು ಚಲಾವಣೆಗೊಂಡಿದ್ದ ಪಕ್ಷದಲ್ಲಿ ಸ್ಟಾರ್ ಚಂದ್ರು ಗೆಲುವು ಅದೃಷ್ಟದ ಗೆಲುವಾಗಲಿದೆ.

ಗುಪ್ತಗಾಮಿನಿಯಂತಿರುವ ಮತಗಳು!:

ಚುನಾವಣೆಯಲ್ಲಿ ಅಲ್ಪಸಂಖ್ಯಾತರು, ದಲಿತರು, ಕುರುಬರು, ಒಕ್ಕಲಿಗ ಸೇರಿದಂತೆ ಕೆಲವು ಜಾತಿಯ ಮತಗಳು ಈ ಪಕ್ಷದ ಕಡೆಗೇ ಹರಿದುಹೋಗಿರಬಹುದೆಂದು ಸುಲಭವಾಗಿ ಗುರುತಿಸಬಹುದು. ಆದರೆ, ಮಹಿಳಾ ಮತಗಳು, ಹಿಂದುಳಿದ ಹಾಗೂ ಇತರೆ ಹಿಂದುಳಿದ ಜಾತಿಯವರ ಮತಗಳು ಯಾವ ಕಡೆಗೆ ಹರಿದುಹೋಗಿವೆ ಎನ್ನುವುದನ್ನು ಸುಲಭಕ್ಕೆ ಗುರುತಿಸುವುದು ಕಷ್ಟ.

ಹಿಂದುಳಿದ ಮತ್ತು ಇತರೆ ಹಿಂದುಳಿದ ಜಾತಿಯ ಮತಗಳು ಒಮ್ಮೊಮ್ಮೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಉಂಟು. ಆದರೆ, ಒಕ್ಕಲಿಗರು ಸಂಪೂರ್ಣವಾಗಿ ಒಗ್ಗಟ್ಟು ಪ್ರದರ್ಶಿಸಿದಾಗ ಇತರೆ ಹಿಂದುಳಿದ ಜಾತಿಯವರ ಮತಗಳು ಗೌಣವಾಗಿದ್ದ ಚುನಾವಣೆಗಳೂ ಇವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಬಹುತೇಕ ಒಕ್ಕಲಿಗ ಮತಗಳು ಹರಿದುಹೋಗುವ ಕಡೆಗೆ ಹಿಂದುಳಿದ ಜಾತಿಯ ಮತಗಳು ಹಿಂಬಾಲಿಸಿರುವ ನಿದರ್ಶನಗಳೂ ಇವೆ.

೨೦೨೪ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ ಅನ್ನು ಹಿಂಬಾಲಿಸಿಕೊಂಡು ಹೋಗಿವೆ ಎಂದು ಹೇಳಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರೆ ಹಿಂದುಳಿದ ಜಾತಿಯ ಜನರೂ ಅನುಸರಿಸಿದ್ದರೆ ಕಾಂಗ್ರೆಸ್ ಗೆಲುವು ಕಷ್ಟವಾಗಬಹುದು. ಆ ಸಮಯದಲ್ಲಿ ಒಕ್ಕಲಿಗರೇ ನಿರ್ಣಾಯಕರಾಗಿರುತ್ತಾರೆ. ಆದರೆ, ಇತರೆ ಹಿಂದುಳಿದ ಜಾತಿಯವರು ಒಕ್ಕಲಿಗ ಮತದಾರರನ್ನು ಅನುಸರಿಸದೆ ಚುನಾವಣಾ ಸಮಯದಲ್ಲಿ ಓಲೈಕೆ ಮಾಡಿದವರನ್ನು ಅನುಸರಿಸಿದ್ದಲ್ಲಿ ಈ ಸಮುದಾಯದವರು ಒಲವು ತೋರಿದ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬಹುದು. ಆಗ ಹಿಂದುಳಿದ ಜಾತಿಯ ಮತಗಳು ನಿರ್ಣಾಯಕವಾಗುತ್ತವೆ.

ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಮೈತ್ರಿ ಅಭ್ಯರ್ಥಿ ನಡುವೆ ಬಿರುಸಿನ ಕದನ ಏರ್ಪಟ್ಟಿದೆ. ಗೆಲುವು ಯಾರಿಗೆ ಎನ್ನುವುದನ್ನು ನಿಖರವಾಗಿ ಹೇಳಲಾಗುತ್ತಿಲ್ಲ. ಯಾರೇ ಗೆದ್ದರೂ ಕಡಿಮೆ ಅಂತರದಲ್ಲಿ ಗೆಲ್ಲಬಹುದು. ಎರಡೂ ಪಕ್ಷಗಳು ಪ್ರತಿಷ್ಠೆಯನ್ನು ಪಣಕ್ಕಿಟ್ಟು ಮತಬೇಟೆಯಲ್ಲಿ ತೊಡಗಿದ್ದರಿಂದ ಫಲಿತಾಂಶ ಸಾಕಷ್ಟು ಕುತೂಹಲವನ್ನು ಕಾಯ್ದುಕೊಂಡಿದೆ.

Share this article