ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆತಾಲೂಕಿನ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಜೂ. 27ರಂದು ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವುದಾಗಿ ತಾಲೂಕು ಘಟಕದ ಅಧ್ಯಕ್ಷ ಎಸ್. ರುದ್ರಪ್ಪ ತಿಳಿಸಿದರು. ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವುದಾಗಿ ಹೇಳಿದರು.ಬಸವ ಭವನಕ್ಕೆ ಸಚಿವ ಈಶ್ವರ ಖಂಡ್ರೆ ಮತ್ತು ಎಂ.ಬಿ. ಪಾಟೀಲ್ ಭೂಮಿ ಪೂಜೆ ನೆರೆವೇರಿಸುವರು. ಶಾಸಕ ಅನಿಲ್ ಚಿಕ್ಕಮಾದು, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಸಂಸದ ಸುನಿಲ್ ಬೋಸ್, ಶಾಸಕ ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.ಪಟ್ಟಣದ ಪಿಯು ಕಾಲೇಜು ಮೈದಾನದಿಂದ ಮೆರವಣಿಗೆ ಹೊರಟು ಬಸವ ಭವನದ ನಿವೇಶನದಲ್ಲಿ ನಿರ್ಮಿಸಿರುವ ಬೃಹತ್ ಶಾಮಿಯಾನದ ಅಡಿಯಲ್ಲಿ ಕಾರ್ಯಕ್ರಮ ನೆರೆವೇರಿಸಲಾಗುವುದು ಎಂದರು.ಬೆಳಗ್ಗೆ 7 ಗಂಟೆಗೆ ಧ್ವಜಾರೋಣವನ್ನು ಬೀಚನಹಳ್ಳಿಪುರ ಮಠದ ನಾಗೇಂದ್ರ ಸ್ವಾಮೀಜಿ ನೆರವೇರಿಸಲಿದ್ದು, ಬಸವೇಶ್ವರರ ಪುತ್ತಳಿ ಮೆರವಣಿಗೆಯನ್ನು ಹಂಚಿಪುರ ಅಧ್ಯಕ್ಷರಾದ ಶ್ರೀ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ಚಾಲನೆ ನೀಡುವರು. ನಂದಿಧ್ವಜ ಪೂಜೆಯೊಂದಿಗೆ ಬಸವೇಶ್ವರರ ಪುತ್ತಳಿಯನ್ನು ಲಿಂಗವಿರುವ ಬೆಳ್ಳಿ ಮಂಟಪದಲ್ಲಿ ಕೂರಿಸಿ ಶರಣರ ವಚನಗಳು ಅಲಂಕೃತ ಚಿತ್ರಗಳು, ವೀರಗಾಸೆ, ವೀರಭದ್ರ ನೃತ್ಯ, ಮಹಿಳಾ ಜಾನಪದ ನೃತ್ಯ, ನಗಾರಿ, ತಮಟೆ, ಬ್ಯಾಂಡ್ ಸೆಟ್, ಗಾಡಿಗೊಂಬೆ, ಡಿಜೆ ಹೀಗೆ ಜಾನಪದ ಕಲಾತಂಡಗಳೊಂದಿಗೆ ಮುಖ್ಯ ರಸ್ತೆಯ ಮೂಲಕ ಅದ್ಧೂರಿಯಾಗಿ ವೇದಿಕೆ ಅನುಭವ ಮಂಟಪವನ್ನು ಸೇರುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ದೇವಮಣಿ, ಮಹಾಸಭಾ ಜಿಲ್ಲಾ ನಿರ್ದೇಶಕ ಮೊತ್ತ ಬಸವರಾಜಪ್ಪ, ತೋಟದ ಬೆಳೆಗಾರರ ಸಂಘದ ಅಧ್ಯಕ್ಷ ಮಾದಾಪುರ ನಂದೀಶ್, ಮುಖಂಡರಾದ ಬ್ಯಾಂಕ್ ವೀರಪ್ಪ, ಸಿ.ಎನ್. ನಾಗಣ್ಣ, ಸುನಿತಾ ಮಹದೇವಸ್ವಾಮಿ, ಜಕ್ಕಳ್ಳಿ ಮಹದೇವಪ್ಪ, ಮಹಾಸಭಾ ಯುವ ಸಮಿತಿ ಅಧ್ಯಕ್ಷ ಸತೀಶ್, ಶಿವಕುಮಾರ್ ಇದ್ದರು.