ಕುಶಾಲನಗರ: ಮುಂದಿನ ದಿನಗಳಲ್ಲಿ ಕುಶಾಲನಗರ ಪಟ್ಟಣ ಟ್ರಾನ್ಸ್ಪೋರ್ಟ್ ಹಬ್ ಆಗಿ ಪರಿವರ್ತನೆಯಾಗಲಿದ್ದು, ಕೆ ಎಸ್ ಆರ್ ಟಿ ಸಿ ಸಂಸ್ಥೆಯ ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಚಿಂತಿಸಲಾಗಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕೆ ಎಸ್ ಆರ್ ಟಿ ಸಿ ಘಟಕದ ಕಾಮಗಾರಿ ವೀಕ್ಷಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರು ಕಡೆಯಿಂದ ಕುಶಾಲನಗರದ ಕಡೆಗೆ ಚತುಷ್ಪಥ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಅತಿ ವೇಗವಾಗಿ ಜಿಲ್ಲೆಯ ಪ್ರಗತಿ ಸಾಗುತ್ತಿದೆ. ಕುಶಾಲನಗರ ನೂತನ ಘಟಕ ಸದ್ಯದಲ್ಲಿಯೇ ಲೋಕಾರ್ಪಣೆಗೊಳಲಿದ್ದು ಕುಶಾಲನಗರ ಗ್ರಾಮೀಣ ವ್ಯಾಪ್ತಿಯಲ್ಲಿ ಹೆಚ್ಚಿನ ಬಸ್ ಸೌಲಭ್ಯ ಅಂತರ್ ರಾಜ್ಯ ಬಸ್ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ತೆರೆಯಲು ಚಿಂತನೆ ಹರಿಸಲಾಗುವುದು ಎಂದರು.ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಅಧಿಕಾರಿ ಹರಿಬಾಬು, ಜಯಶಾಂತ ಕುಮಾರ್, ವೆಂಕಟೇಶ್, ರಂಗರಾಜ್ ಮಂಜುನಾಥ್, ಗುತ್ತಿಗೆದಾರ ಚಂದ್ರೇಗೌಡ, ಯೋಜನಾ ಇಂಜಿನಿಯರ್ ಪವನ್ ಮತ್ತಿತರರು ಇದ್ದರು.