ಬಸ್‌ಗಳ ಸಮಸ್ಯೆಯಿಂದ ತರಗತಿಗಳೆಲ್ಲ ತಪ್ಪುತ್ತಿವೆ ಎಂದು ವಿದ್ಯಾರ್ಥಿಗಳ ಅಳಲು

KannadaprabhaNewsNetwork | Published : Oct 18, 2024 12:21 AM

ಸಾರಾಂಶ

ಮಲೇಬೆನ್ನೂರು ಭಾಗದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸೂಕ್ತ ಸಮಯದಲ್ಲಿ ಬಸ್ ಬಾರದೇ ತರಗತಿಗೆ ಹಾಜರಾಗೋದು ದುಸ್ತರವಾಗಿದೆ. ಪರಿಣಾಮ ಶಾಲೆಗೆ ಚಕ್ಕರ್ ಮನೇಗೆ ಹಾಜರ್ ಎನ್ನುವಂತಾಗಿದೆ.

- ವಿಜಯದಶಮಿ ನಂತರ ಸಕಾಲದಲ್ಲಿ ನಿಲ್ದಾಣಕ್ಕೆ ಬಾರದ ಕೆಎಸ್‌ಆರ್‌ಟಿಸಿ ಬಸ್‌ಗಳು - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಮಲೇಬೆನ್ನೂರು ಭಾಗದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸೂಕ್ತ ಸಮಯದಲ್ಲಿ ಬಸ್ ಬಾರದೇ ತರಗತಿಗೆ ಹಾಜರಾಗೋದು ದುಸ್ತರವಾಗಿದೆ. ಪರಿಣಾಮ ಶಾಲೆಗೆ ಚಕ್ಕರ್ ಮನೇಗೆ ಹಾಜರ್ ಎನ್ನುವಂತಾಗಿದೆ. ಉಚಿತ ಭಾಗ್ಯದಿಂದಾಗಿ ಮಹಿಳೆಯರ ಪ್ರಯಣ ಹೆಚ್ಚಿದೆ. ಅಲ್ಲದೇ, ವಿಜಯದಶಮಿ ನಂತರ ಕರ್ನಾಟಕ ರಸ್ತೆ ಸಾರಿಗೆ ಬಸ್‌ಗಳು ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಬರುತ್ತಿಲ್ಲ. ಸೋಮವಾರ, ಮಂಗಳವಾರ ಸಮೀಪದ ಕುಂಬಳೂರು ಮತ್ತು ನಂದಿತಾವರೆ ಗ್ರಾಮಗಳಿಂದ ಹರಿಹರ ಮತ್ತು ದಾವಣಗೆರೆಗೆ ವಿದ್ಯಾಭ್ಯಾಸಕ್ಕೆ ತೆರಳುವ ನೂರಾರು ವಿದ್ಯಾರ್ಥಿಗಳು ಬಸ್‌ಗಳಿಗಾಗಿ ಕಾಯುತ್ತಿದ್ದರು. ಬಸ್‌ಗಳು ಸಕಾಲಕ್ಕೆ ಬಾರದೇ ಶಾಲಾ- ಕಾಲೇಜುಗಳ ತರಗತಿಗಳನ್ನು ತಪ್ಪಿ, ಮನೆಗೆ ಮರಳಿದರು.

ಹಬ್ಬದ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ ಕಡಿಮೆ ಎಂದು ಹೇಳಲಾಗಿದೆ. ಇರುವ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರೇ ಹೆಚ್ಚಾಗಿರುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸ್ಥಳವೇ ಇರುವುದಿಲ್ಲ. ನಿಲ್ಲಿಸುವ ಬಸ್‌ಗಳಲ್ಲಿ ಕೆಲವರು ಮಾತ್ರ ಹತ್ತಿದರೂ ಬಸ್‌ಗಳು ಭರ್ತಿಯಾಗುತ್ತಿವೆ. ಉಳಿದ ವಿದ್ಯಾರ್ಥಿಗಳು ನಿಲ್ದಾಣದಲ್ಲೇ ಉಳಿಯುವಂತಾಗಿದೆ. ಕುಂಬಳೂರಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆ ಹೊತ್ತಿಗೆ ಬಸ್‌ಗಾಗಿ ಕಾದು, ೧೦.೩೦ ಗಂಟೆಯಾದರೂ ಸಹ ಬಸ್‌ಗಳು ಸಿಗಲಿಲ್ಲ. ಪರಿಣಾಮ ಬೇರೆ ವಾಹನದಲ್ಲಿ ಕಾಲೇಜ್‌ಗೆ ತೆರಳಿದೆ. ತರಗತಿಗೆ ತಡವಾದ ಕಾರಣ ಮನೆಗೆ ವಾಪಸ್‌ ಬಂದೆ ಎಂದು ವಿದ್ಯಾರ್ಥಿ ವೈಭವ್ ಸಮಸ್ಯೆ ಹೇಳಿಕೊಂಡರು.

ಇತ್ತ ಬಸ್‌ಗಳ ನಿಲುಗಡೆ ಆದೇಶವೂ ವ್ಯರ್ಥವಾಗಿದ್ದು, ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಈ ಬಗ್ಗೆ ಹರಿಹರ ಡಿಪೋ ಅಧಿಕಾರಿಗಳಿಂದ ಮಾಹಿತಿ ಬಯಸಿ, ಸಂಪರ್ಕಿಸಿದಾಗ ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್‌ಗಳ ಸಂಚಾರ ವ್ಯವಸ್ಥೆ ಸುಧಾರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

- - - -೧೬-ಎಂಬಿಆರ್೧: ಬಸ್‌ಗಳ ಆಗಮನ ನಿರೀಕ್ಷೆಯಲ್ಲಿ ನಿಂತಿರುವ ವಿದ್ಯಾರ್ಥಿಗಳು.

Share this article