- ಇಡೀ ಮೈದಾನವೇ ತ್ಯಾಜ್ಯಮಯ । ಸ್ವಚ್ಛತಾ ಅಭಿಯಾನಕ್ಕೆ ಅಪವಾದ
ನೆಮ್ಮಾರ್ ಅಬೂಬಕರ್.ಕನ್ನಡಪ್ರಭ ವಾರ್ತೆ, ಶೃಂಗೇರಿ
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ, ಐತಿಹಾಸಿಕ, ಪ್ರವಾಸಿ ಕ್ಷೇತ್ರಗಳಲ್ಲಿ ಒಂದಾದ ಶೃಂಗೇರಿಗೆ ದೇಶದ ವಿವಿಧೆಡೆಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಕ್ಷೇತ್ರ ಇದೀಗ ತ್ಯಾಜ್ಯದ ಸಮಸ್ಯೆ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ತುಂಗಾ ನದಿ ಸೇರುತ್ತಿರುವ ಈ ತ್ಯಾಜ್ಯದಿಂದ ನೀರು ಕಲುಷಿತಗೊಳ್ಳುತ್ತಿದ್ದರೂ ಇದರ ತಡೆಗೆ ಯಾರೂ ಕ್ರಮ ವಹಿಸದಿರುವುದು ನಿಜಕ್ಕೂ ದುರಂತ.ಸುಮಾರು 3925 ಜನಸಂಖ್ಯೆಯ ಶೃಂಗೇರಿ ಪಟ್ಟಣ 11 ವಾರ್ಡಗಳನ್ನು ಹೊಂದಿದೆ. ವರ್ಷಕ್ಕೆ 80 ಲಕ್ಷ ದಿಂದ 1 ಕೋಟಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಪ್ರಮುಖ ಸಂಪರ್ಕ, ಜನ ನಿಬಿಡ, ವಾಹನ ನಿಲುಗಡೆ ಸ್ಥಳವಾದ ಗಾಂಧಿ ಮೈದಾನ ಪ್ರದೇಶ ಕಸಕಡ್ಡಿ, ಪ್ಲಾಸ್ಟಿಕ್, ತ್ಯಾಜ್ಯಗಳಿಂದ ಸಂಪೂರ್ಣ ಕಲುಷಿತಗೊಂಡು ಸ್ವಚ್ಛತೆ ಕಾಣದೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಅಪವಾದವಾಗಿದೆ.
ಶೃಂಗೇರಿಗೆ ಬರುವ ಪ್ರವಾಸಿ ವಾಹನಗಳೆಲ್ಲ ಗಾಂಧಿ ಮೈದಾನದಲ್ಲೆ ನಿಲ್ಲುತ್ತವೆ. ಇನ್ನೊಂದೆಡೆ ರಾಶಿ ರಾಶಿ ಕಸದ ಗುಡ್ಡೆಗಳು, ವಿಸ್ತಾರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಎಸೆದಿರುವ ಪ್ಲಾಸ್ಟಿಕ್ ಬಾಟಲಿಗಳು, ವಿಧವಿಧದ ತ್ಯಾಜ್ಯದಿಂದ ಇಡೀ ಮೈದಾನವೇ ತುಂಬಿ ಹೋದಂತಾಗಿದೆ. ಇಲ್ಲಿ ತ್ಯಾಜ್ಯ ವಿಲೆವಾರಿಯಾಗದೇ ಬಹಳ ಸಮಯಗಳೇ ಆಗಿದೆ.ತುಂಗಾನದಿ ದಡದ ಸಮೀಪವೇ ಈ ಮೈದಾನದ ಕಸ ಮಳೆ ಬಂದರೆ ತುಂಗೆ ಒಡಲಿಗೆ ಸೇರುತ್ತಿದೆ. ಗಂಗಾ ಸ್ನಾನಂ, ತುಂಗಾ ಪಾನ ಎಂಬ ನಾಣ್ಣುಡಿಯಂತೆ ಶೃಂಗೇರಿಗೆ ಕುಡಿಯಲು ತುಂಗಾ ನದಿ ನೀರೆ ಆಧಾರ. ಪಶ್ಚಿಮ ಘಟ್ಟ ಸಹ್ಯಾದ್ರಿ ಪರ್ವತ ಗಳ ತಪ್ಪಲಲ್ಲಿ ಹುಟ್ಟಿ ಕೆರೆಕಟ್ಟೆ, ಶೃಂಗೇರಿ ಮೂಲಕ ಶಿವಮೊಗ್ಗ ಹರಿಹರ ತುಂಗಾಭದ್ರಾ ಜಲಾಶಯಕ್ಕೆ ಸೇರುವ ತುಂಗಾನದಿ ಮಲೆನಾಡಿನ ಜೀವನದಿ. ಆದರೆ ಶೃಂಗೇರಿ ಗಾಂಧಿ ಮೈದಾನದ ತ್ಯಾಜ್ಯ, ಪಟ್ಟಣದ ಡ್ರೈನೇಜ್ ಸಹಿತ ಕೊಳಚೆ ನೀರು ಎಲ್ಲವೂ ತುಂಗಾ ನದಿಗೆ ಸೇರುತ್ತಿರುವುದರಿಂದ ಪರಿಸರ, ಆರೋಗ್ಯದ ಮೇಲೆಯೂ ಪರಿಣಾಮ ಉಂಟಾಗಿದೆ.
ಎಲ್ಲೆಡೆ ಪರಿಸರ ಸ್ವಚ್ಛತೆ, ಪರಿಸರ ಜಾಗೃತಿ ಬಗ್ಗೆ ಅಭಿಯಾನಗಳು ನಡೆಯುತ್ತಿದ್ದರೂ ಗಾಂಧಿ ಮೈದಾನ ಮಾತ್ರ ತ್ಯಾಜ್ಯಗಳಿಂದ ಮುಕ್ತವಾಗಿಲ್ಲ. ಎಲ್ಲೆಲ್ಲೂ ಕಸ, ತ್ಯಾಜ್ಯಗಳ ರಾಶಿಯೇ ಎದ್ದು ಕಾಣುತ್ತಿದೆ.ಇದೇ ಮೈದಾನದಲ್ಲಿರುವ ಒಂದು ಪಾರ್ಕ್ ಕುಡುಕರು, ಸೋಮಾರಿಗಳ ಅಡ್ಡೆಯಾಗಿದೆ. ಇದು ಕೂಡ ಸಂಪೂರ್ಣ ಕಸದಿಂದ ತುಂಬಿದ್ದು. ಪಾರ್ಕ್ ಒಳಗೂ ಪ್ಲಾಸ್ಟಿಕ್, ಬಾಟಲ್ಗಳ ರಾಶಿಯೇ ಬಿದ್ದಿದೆ. ಇಡೀ ಪರಿಸರವೇ ಗಬ್ಬುನಾರುತ್ತಿದೆ. ಪಾರ್ಕ್ ದುರಸ್ಥಿ ಕಾಣದೇ ಹಲವು ವರ್ಷಗಳೇ ಕಳೆದಿವೆ. ಸ್ವಚ್ಛ ಪರಿಸರಕ್ಕೆ ಅಪವಾದವಾದಂತಿದೆ.
ಗಾಂಧಿ ಮೈದಾನದಲ್ಲೇ ಭಾರತೀ ಬೀದಿ, ಕುರುಬಗೇರಿ ಸಂಪರ್ಕ ಬೈಪಾಸ್ ರಸ್ತೆ ಹಾದು ಹೋಗಿದ್ದು ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ಬಿದ್ದಿವೆ. ಅದರ ವಿಲೇವಾರಿ ಮಾಡುವವರೇ ಇಲ್ಲ. ಮಳೆ ಬಂದರೆ ತುಂಗೆ ಮಡಿಲಿಗೆ ತ್ಯಾಜ್ಯ ಹಾಗೂ ಕಲುಷಿತ ನೀರು ಸೇರುತ್ತದೆ. ಪ್ರವಾಹದಲ್ಲಿ ತುಂಗೆಯ ಪಾಲಾಗುತ್ತದೆ. ಒಟ್ಟಾರೆ ಗಾಂಧಿ ಮೈದಾನದ ಪರಿಸರವೇ ಅಸ್ವಚ್ಛತೆಯಿಂದ ಕೂಡಿ ದ್ದರೂ ಇದರ ಸ್ವಚ್ಛತೆಯತ್ತ ಯಾರೂ ಗಮನ ಹರಿಸುತ್ತಿಲ್ಲ. ಹಾಗಾಗಿ ಸಾಂಕ್ರಮಿಕ ರೋಗ ರುಜಿನಗಳಿಗೂ ಕಾರಣವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿದಿಗಳು ಎಚ್ಚೆತ್ತುಕೊಳ್ಳಬೇಕಿದೆ.ಕೆಲ ತಿಂಗಳ ಹಿಂದೆ 2-3 ಬಾರಿ ತ್ಯಾಜ್ಯ ಸಂಗ್ರಹಿಸಿ ವಿಲೆವಾರಿ ಮಾಡಲಾಗಿತ್ತು. ಆದರೆ ಈ ಕರಾಬು ಪ್ರದೇಶವೆಂದು ಘೋಷಿಸಿ ದ್ದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಪಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಾಲೂಕು ಆಡಳಿತ ಈ ಬಗ್ಗೆ ಮೌನವಹಿಸಿದೆ.
--ಬಾಕ್ಸ್--ಯಾವ ಆಡಳಿತ ವಿದ್ದರೂ ಸ್ವಚ್ಛತೆ ಮರೀಚಿಕೆ
ಈ ಹಿಂದೆ ಗಾಂಧಿ ಮೈದಾನ ಪಟ್ಟಣ ಪಂಚಾಯಿತಿ ಸುಪರ್ದಿಯಲ್ಲಿತ್ತು. ಆಗ ತ್ಯಾಜ್ಯ ಸಂಗ್ರಹ, ವಿಲೇವಾರಿ ನಡೆದರೂ ಮತ್ತೆ ಮತ್ತೆ ಕಸ ಸೇರುತ್ತಿತ್ತು. ಒಂದೆಡೆ ವಿಲೇವಾರಿಯಾದರೂ ಇನ್ನೊಂದೆಡೆ ಸಂಗ್ರಹ ವಾಗುತ್ತಿತ್ತು. ಕಸದ ಸಮಸ್ಯೆ ನಿರ್ವಹಣೆಗೆ ಹೆಚ್ಚಿನ ಗಮನ ಕೊಟ್ಟು ಸ್ವಚ್ಛ ಪರಿಸರ ಕಾಪಾಡಿರಲಿಲ್ಲ. ಇಲ್ಲಿ ಕಸ ಹಾಕಲು ಯಾವುದೇ ವ್ಯವಸ್ಥೆ ಮಾಡದಿದ್ದ ಪಟ್ಟಣ ಪಂಚಾಯ್ತಿ ಕನಿಷ್ಠ ಕಸದ ಬುಟ್ಟಿಯನ್ನು ಮೈದಾನದ ಅಲ್ಲಲ್ಲಿ ಇಡುವ, ಕಸ ಹಾಕದಂತೆ ಅಥವಾ ನಿರ್ದಿಷ್ಟ ಸ್ಥಳದಲ್ಲಿ ಕಸ ಹಾಕುವಂತೆ ಸೂಚನೆ ನೀಡುವ ಫಲಕ ಅಳವಡಿಸುವ ಗೋಜಿಗೂ ಹೋಗಿರಲಿಲ್ಲ. ಮೈದಾನದಲ್ಲಿ ಅಂಗಡಿ, ಹೋಟೇಲು ಮಳಿಗೆಗಳು ಇದ್ದಿದ್ದರಿಂದ ಬೀಳುತ್ತಿದ್ದ ತ್ಯಾಜ್ಯ ವಿಲೇವಾರಿಯೂ ಸರಿಯಾಗಿ ಆಗುತ್ತಿರಲಿಲ್ಲ. ಕಳೆದ ವರ್ಷ ಗಾಂಧಿ ಮೈದಾನ ತುಂಗಾ ನದಿ ಹೊಳೆ ಕರಾಬು ಪ್ರದೇಶ ಎಂಬ ಕಾರಣದಿಂದ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿತು. ಜಿಲ್ಲಾಡಳಿತ ಕಳೆದ ಕೆಲ ತಿಂಗಳ ಹಿಂದೆ ಹೊಳೆ ಕರಾಬು ಪ್ರದೇಶದ ಮೈದಾನದ ಎಲ್ಲಾ ಅಂಗಡಿ ಹೋಟೇಲು ಗಳನ್ನು ನೆಲಸಮಗೊಳಿಸಿ ತೆರವುಗೊಳಿಸಿತು. ಅದರ ತ್ಯಾಜ್ಯಗಳನ್ನು ಮಾತ್ರ ಇಲಾಖೆ ಸ್ವಚ್ಛಗೊಳಿಸಿಲ್ಲ.ಇತ್ತ ಪಟ್ಟಣ ಪಂಚಾಯಿತಿ ತಮ್ಮ ಸುಪರ್ದಿಗೆ ಸೇರಲ್ಲವೆಂದು ತ್ಯಾಜ್ಯ ಸಂಗ್ರಹ, ವಿಲೇವಾರಿ ನಿಲ್ಲಿಸಿದೆ. ಅತ್ತ ತಾಲೂಕು ಆಡಳಿತ ತನ್ನ ವ್ಯಾಪ್ತಿಯಲ್ಲಿದ್ದರೂ ತ್ಯಾಜ್ಯ ನಿರ್ವಹಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಗಾಂಧೀ ಮೈದಾನದಲ್ಲಿ ಮಾತ್ರ ದಿನೇ ದಿನೇ ತ್ಯಾಜ್ಯ ರಾಶಿ ಸಂಗ್ರಹ ವಾಗುತ್ತಿದೆ. ಯಾವುದೇ ಅಧಿಕಾರಿಯಾಗಲೀ, ಜನಪ್ರತಿನಿಧಿ ಯಾಗಲೀ ಗಾಂಧೀ ಮೈದಾನದ ಸ್ವಚ್ಛತೆ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ.--ಕೋಟ್--
ಕಳೆದ ಹಲವು ಸಮಯಗಳಿಂದ ಗಾಂಧಿ ಮೈದಾನದಲ್ಲಿ ತ್ಯಾಜ್ಯದ ರಾಶಿಯೇ ಸಂಗ್ರಹವಾಗಿದ್ದರೂ ವಿಲೇವಾರಿ ಮಾಡದೇ ಇರುವುದರಿಂದ ಇಡೀ ಪರಿಸರವೇ ಹಾಳಾಗುತ್ತಿದೆ. ಸ್ವಚ್ಛ ಪರಿಸರದ ದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಸ್ವಚ್ಛ ಮಾಡಬೇಕು.- ಅಜಿತ್. ಸ್ಥಳಿಯ ನಿವಾಸಿ.--
ಪಟ್ಟಣ ಪಂಚಾಯಿತಿಯೋ, ತಾಲೂಕು ಆಡಳಿತವೋ, ಕರಾಬು ಪ್ರದೇಶವೋ ಎಂಬುದೆಲ್ಲ ಮುಖ್ಯವಲ್ಲ. ಪರಿಸರ ಸ್ವಚ್ಛತೆ ಮುಖ್ಯ. ಈ ಸಮಸ್ಯೆ ನಿವಾರಿಸಿ ಸ್ವಚ್ಛತೆ ಆದ್ಯತೆ ನೀಡಲು ಮುಂದಾಗಬೇಕು-ರಾಮಣ್ಣ.ಸ್ಥಳೀಯ ನಿವಾಸಿ.
14 ಶ್ರೀ ಚಿತ್ರ 1-ಶೃಂಗೇರಿ ಗಾಂಧಿ ಮೈದಾನದ ತುಂಗಾ ನದಿ ದಡದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ರಾಶಿ.14 ಶ್ರೀ ಚಿತ್ರ 2-ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ, ಕಸದ ರಾಶಿ.