ಸಕಲೇಶಪುರ ತಾಲೂಕಿನ ಅಧಿಕಾರಿಗಳ ಬಗ್ಗೆಯೇ ಹೆಚ್ಚು ಭ್ರಷ್ಟಾಚಾರದ ಆರೋಪ: ಸಚಿವ ಶಿವಲಿಂಗೇಗೌಡ ಅಸಮಾಧಾನ

KannadaprabhaNewsNetwork |  
Published : Sep 20, 2026, 02:45 AM IST
19ಎಚ್ಎಸ್ಎನ್5 :  | Kannada Prabha

ಸಾರಾಂಶ

ತಾಲೂಕು ಸರ್ವೇ ಇಲಾಖೆ ಭ್ರಷ್ಟಾಚಾರದ ಕೂಪವಾಗಿದ್ದು, ಕಚೇರಿಯಲ್ಲಿ ಹಣವಿದ್ದವರಿಗೆ ನ್ಯಾಯ. ಇಲ್ಲಿ ಬಡವರ ಭೂಮಿಯನ್ನು ಶ್ರೀಮಂತರಿಗೆ ಹಂಚಲಾಗುತ್ತಿದೆ. ಆದ್ದರಿಂದ ಸರ್ವೇ ಕಚೇರಿಯಲ್ಲಿರುವ ಎಲ್ಲ ಸರ್ವೇಯರ್‌ಗಳನ್ನು ವರ್ಗಾಯಿಸಿ ಅಲ್ಲದೆ ಸರ್ವೇಯರ್ ಮನು ಎಂಬಾತ ತಪ್ಪುಮಾಡಿರುವುದು ಸಭೆಯಲ್ಲೆ ದೃಢಪಟ್ಟಿದೆ. ಆದ್ದರಿಂದ ಇವರನ್ನು ಸ್ಥಳದಲ್ಲೇ ಅಮಾನತುಪಡಿಸಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಕೊರತೆ ಎದ್ದುಕಾಣುತ್ತಿದ್ದು ಅಧಿಕಾರಿಗಳಿಂದ ಬಡವರಿಗೆ ಸಾಕಷ್ಟು ಅನ್ಯಾಯವಾಗಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಸಚಿವ ಶಿವಲಿಂಗೇಗೌಡರು ಬೇಸರ ವ್ಯಕ್ತಪಡಿಸಿದರು.

ಶನಿವಾರ ಕಂದಾಯ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಮಾತನಾಡಿ, ಬೇರಡೆ ಸಹ ಇಂತಹ ಸಭೆಗಳನ್ನು ನಡೆಸಿದ್ದೇನೆ. ಆದರೆ, ಸಕಲೇಶಪುರ ತಾಲೂಕಿನ ಕಂದಾಯ, ಸರ್ವೇ ಇಲಾಖೆ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪ ಬೇರೆ ಯಾವ ತಾಲೂಕಿನಲ್ಲೂ ಕೇಳಿಬಂದಿಲ್ಲ. ಅಧಿಕಾರಿಗಳು ತಮ್ಮ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ವಿನಃ ಕಾರಣ ಸಾರ್ವಜನಿಕರನ್ನು ಅಲೆಸುವುದು ತಪ್ಪು. ಕಾನೂನಿನೊಂದಿಗೆ ಮಾನವೀಯತೆಯನ್ನು ಬೆಳಸಿಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು. ದುಡ್ಡು ಪಡೆದು ಬಡವರಿಗೆ ಅನ್ಯಾಯ ಮಾಡಿದರೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ. ಹತ್ತಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಜನರಿಗೆ ೯೪ಸಿ ಅಡಿ ಹಕ್ಕುಪತ್ರ ನೀಡಲು ಡೀಮ್ಡ್ ನೇಪ ಹೇಳುವ ಮೂಲಕ ತೊಂದರೆ ನೀಡುತ್ತಿರುವುದು ತಪ್ಪು. ಆದ್ದರಿಂದ ಡೀಮ್ಡ್‌ ರದ್ದುಪಡಿಸಲು ಸರ್ಕಾರ ತುರ್ತು ತೀರ್ಮಾನ ಕೈಗೊಳ್ಳಲಿದೆ. ಇದರ ನಂತರ ೯೪ ಸಿ ಅರ್ಜಿಗಳು ವೇಗವಾಗಿ ವಿಲೇಯಾಗಲಿವೆ ಎಂದರು.

ಹಿಂದಿನ ಜನಸಂಪರ್ಕ ಸಭೆಯಂತೆ ಪ್ರಜಾಸೇವಾ ಆಂದೋಲನ ಸಭೆಯಲ್ಲ. ಇದಕ್ಕಾಗಿ ಒಂದು ಪ್ರತ್ಯೇಕ ಇಲಾಖೆಯೇ ಇದ್ದು ಪ್ರತಿ ಅರ್ಜಿಯನ್ನು ಸಮಸ್ಯೆ ಬಗೆಹರಿಸುವವರೆಗೂ ಗಮನಿಸಲಾಗುವುದು. ಆಂದೋಲನದ ವೇಳೆ ಅಧಿಕಾರಿಗಳು ನೀಡಿದ ಹೇಳಿಕೆಗೆ ಬದ್ಧರಾಗದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.

ಆಂದೋಲನದಲ್ಲಿ ೨೨೦ ಅರ್ಜಿಗಳು ಬಂದಿದ್ದು ಮಧ್ಯಾಹ್ನ ಕಳೆದರೂ ೩೦ ಅರ್ಜಿಗಳು ವಿಲೇವಾರಿಯಾಗದ ಹಿನ್ನೆಲೆ ಕಂದಾಯ, ಸರ್ವೇ ಕಚೇರಿಯ ಅರ್ಜಿಗಳನ್ನು ವಿಂಗಡಿಸಿ ಒಂದೇ ಬಗೆಯ ಅರ್ಜಿಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ನಂತರ ನಾನು ಮತ್ತೊಮ್ಮೆ ತಾಲೂಕಿಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದೇನೆ ಎಂದರು.

ಆತ್ಮಸಾಕ್ಷಿಗಾದರೂ ಹೆದರಬೇಕು:

ಕಂದಾಯ ಇಲಾಖೆಯಲ್ಲಿ ಯಾವುದೆ ಕೆಲಸವಾಗುವುದಿಲ್ಲ. ಕಳೆದ ೧೦ ವರ್ಷದಿಂದ ಕಂದಾಯ ಇಲಾಖೆ ಮೆಟ್ಟಿಲು ಹತ್ತಿ ನನಗೆ ಮಂಡಿ ನೋವು ಬಂದಿದೆ. ಆದರೂ ಕೆಲಸವಾಗಿಲ್ಲ ಎಂದು ನಡಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರೂ ದೂರಿದರೆ, ತಹಸೀಲ್ದಾರ್ ಉಡಾಪೆಯಿಂದ ವರ್ತಿಸುತ್ತಾರೆ. ಕಚೇರಿಗೆ ಹೋದರೆ ಕುರ್ಚಿ ಸಹ ಕೊಡುವುದಿಲ್ಲ ಎಂದು ಆದಿ ದ್ರಾವಿಡ ಸಂಘದ ಅಧ್ಯಕ್ಷ ಶಂಕರ್‌ ದೂರಿದರು. ೯೪ ಸಿ ಸೇರಿ ಯಾವುದೆ ಕೆಲಸಕ್ಕೂ ಹೋದರೂ ತಹಸೀಲ್ದಾರ್ ಕೆಲಸ ಮಾಡುವುದಿಲ್ಲ ಎಂಬ ವ್ಯಾಪಕ ದೂರು ಬಂದ ಹಿನ್ನೆಲೆ ಸಿಟ್ಟಾದ ಸಚಿವರು ತಹಸೀಲ್ದಾರ್ ಸುಪ್ರಿತಾ ಅವರನ್ನು ಉದ್ದೇಶಿಸಿ, ಏನ್ ಕೆಲಸ ಮಾಡುತ್ತೀರಿ ತಹಸೀಲ್ದಾರ್‌ರವರೆ, ಆತ್ಮಸಾಕ್ಷಿಗಾದರೂ ಹೆದರಿ ಕೆಲಸ ಮಾಡಿ. ಏನ್ರೀ ಸಮಸ್ಯೆ, ಎಲ್ಲರೂ ನಿಮ್ಮ ಮೇಲೆ ದೂರು ನೀಡುತ್ತಿದ್ದಾರೆ. ಆಯಕಟ್ಟಿನಲ್ಲಿರುವ ನೀವು ಚುರುಕಿನಿಂದ ಕೆಲಸ ಮಾಡಬೇಕು ಎಂದು ಬೇಸರ ಹೊರಹಾಕಿದರು.

ಇಲ್ಲಿಗ್ಯಾಕ್ರಿ ಬಂದ್ರಿ?:

ಕುಣಿಗಲ್‌ ಗ್ರಾಮದಲ್ಲಿರುವ ನಮ್ಮ ಜಮೀನನ್ನು ದುರಸ್ಥಿ ಪಡಿಸುವಂತೆ ಅರ್ಜಿ ಸಲ್ಲಿಸಿದರೆ ನಿಮ್ಮ ಜಮೀನಿನ ಕಡತವೆ ಇಲ್ಲ ಎಂದು ಸರ್ವೇ ಇಲಾಖೆಯಲ್ಲಿ ಹೇಳುತ್ತಾರೆ ಎಂದು ಕುಣಿಗಲ್‌ ಗ್ರಾಮದ ಪ್ರಸನ್ನ ದೂರಿದರು. ಇದರಿಂದ ಸಿಟ್ಟಾದ ಸಚಿವರು ಎಡಿಎಲ್‌ಆರ್‌ ಅವರನ್ನು ಉದ್ದೇಶಿಸಿ ಇದುವರೆಗೆ ಎಲ್ರೀ ಕೆಲಸ ಮಾಡುತ್ತಿದ್ದೀರಿ. ಚಿಕ್ಕಬಳ್ಳಾಪುರದಿಂದ ಇಲ್ಲಿಗ್ಯಾಕೆ ಬಂದ್ರಿ. ಇಲ್ಲಿ ಎಲ್ಲರೂ ರೈತರು, ಹಣ ಮಾಡಲಿಕ್ಕಾಗುವುದಿಲ್ಲ. ಬೆಂಗಳೂರು ಸುತ್ತಮುತ್ತ ಕೆಲಸ ಮಾಡುವುದಲ್ಲವಾ ಎಂದ ಸಚಿವರು, ಇನ್ನೂ ಹದಿನೈದು ದಿನಗಳ ಒಳಗಾಗಿ ದುರಸ್ಥಿ ಪಡಿಸಬೇಕು ಎಂದು ತಾಕೀತು ಮಾಡಿದರು.

ಎಡಿಎಲ್‌ಆರ್ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆ ಡಿಡಿಎಲ್‌ಆರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಹಾಸನದಲ್ಲೂ ಹೀಗೆ ಆಗಿದೆ. ಇಲ್ಲೂ ಹೀಗೆ ಆಗಿದೆ. ದುರಸ್ಥಿ ಸಂಬಂಧ ಆದಾಲತ್ ನಡೆಸಿ ದುರಸ್ಥಿ ನಡೆಸಿ ಸಮಸ್ಯೆ ಬಗೆಹರಿಸಿ ಎಂದರು.

ಭ್ರಷ್ಟಾಚಾರದ ಕೂಪ:

ತಾಲೂಕು ಸರ್ವೇ ಇಲಾಖೆ ಭ್ರಷ್ಟಾಚಾರದ ಕೂಪವಾಗಿದ್ದು, ಕಚೇರಿಯಲ್ಲಿ ಹಣವಿದ್ದವರಿಗೆ ನ್ಯಾಯ. ಇಲ್ಲಿ ಬಡವರ ಭೂಮಿಯನ್ನು ಶ್ರೀಮಂತರಿಗೆ ಹಂಚಲಾಗುತ್ತಿದೆ. ಆದ್ದರಿಂದ ಸರ್ವೇ ಕಚೇರಿಯಲ್ಲಿರುವ ಎಲ್ಲ ಸರ್ವೇಯರ್‌ಗಳನ್ನು ವರ್ಗಾಯಿಸಿ ಅಲ್ಲದೆ ಸರ್ವೇಯರ್ ಮನು ಎಂಬಾತ ತಪ್ಪುಮಾಡಿರುವುದು ಸಭೆಯಲ್ಲೆ ದೃಢಪಟ್ಟಿದೆ. ಆದ್ದರಿಂದ ಇವರನ್ನು ಸ್ಥಳದಲ್ಲೇ ಅಮಾನತುಪಡಿಸಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಸರ್ವೇಕಚೇರಿಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇನ್ನೊಂದು ತಿಂಗಳ ಒಳಗಾಗಿ ನಾನೇ ಮತ್ತೆ ತಾಲೂಕಿಗೆ ಆಗಮಿಸಲಿದ್ದೇನೆ ಎಂದರು.

ಹೊಸಕೊಪ್ಪಲು ಗ್ರಾಮದಲ್ಲಿ ಹಳೇ ಮನೆ ಬಿದ್ದಿರುವುದರಿಂದ ಗುಡಿಸಲಲ್ಲೇ ವಾಸಿಸುತ್ತಿದ್ದೇವೆ, ಮನೆ ಮಂಜೂರು ಮಾಡುವಂತೆ ಮನವಿ ಮಾಡಿ, ಅಧಿಕಾರಿಗಳು ಯಾವುದಕ್ಕೂ ಪ್ರಯೋಜವಾಗಿಲ್ಲ ಎಂದು ಗ್ರಾಮದ ಅಂಗವಿಕಲರೊಬ್ಬರು ದೂರಿದರು.

ಇದಕ್ಕೆತಾಪಂ ಇಒ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಾಚಿಕೆಯಾಗಬೇಕು ನಿಮಗೆ. ಮನುಷ್ಯತ್ವದಿಂದ ಕೆಲಸ ಮಾಡಿ, ಅಂಗವಿಕಲನನ್ನು ಅಲೆಸುವುದು ತಪ್ಪು. ನಾಳೆಯೇ ಮನೆ ನಿರ್ಮಾಣಕ್ಕೆ ನೀವೇ ಪೂಜೆ ಮಾಡಿ, ವರದಿ ನೀಡಬೇಕು ಎಂದು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಜಿ ರಾಮ್‌ ಜಿ’ ಅಡಿ ವಸತಿ ಯೋಜನೆಕೈಕೊಳ್ಳಲು ಕೇಂದ್ರ ಅವಕಾಶ: ಖಂಡ್ರೆ
ಭೂಗಳ್ಳನನ್ನು ಪಕ್ಕದಲ್ಲೇ ಕೂರಿಸಿಕೊಂಡು ಹಗರಣಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ: ಸಚಿವ