ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ ದೋಸ್ತಿ ಪಕ್ಷಗಳ ಮುಖಂಡರು ಕೆಂಗೇರಿಯ ಕೆಂಪಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಮುಂಜಾನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೈಸೂರಿಗೆ ತೆರಳಿ ಐತಿಹಾಸಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಹೀಗಾಗಿ, ದೇವರ ಆಶೀರ್ವಾದ ಪಾದಯಾತ್ರೆಗೆ ಮತ್ತಷ್ಟು ಶಕ್ತಿ ನೀಡಿದಂತಾಗಿತ್ತು.
ಕೆಂಗೇರಿಯ ಜೆ.ಕೆ.ಗ್ರೌಂಡ್ ಅರೆನಾ ಆವರಣದಲ್ಲಿ ನಡೆದ ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ವಿಶೇಷವಾಗಿ ಸಂಯೋಜಿಸಿದ್ದ ಮೈಸೂರು ಚಲೋ ಪಾದಯಾತ್ರೆ ಗೀತೆ ಲೋಕಾರ್ಪಣೆಗೊಳಿಸಿದರು. ಈ ಗೀತೆಯೇ ಪಾದಯಾತ್ರೆಯುದ್ದಕ್ಕೂ ಅನುರಣಿಸುತ್ತಿತ್ತು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ಡಾ। ರಾಧಾ ಮೋಹನ್ದಾಸ್ ಅಗರ್ವಾಲ್ ಮೊದಲಾದ ನಾಯಕರು ನಗಾರಿ ಬಾರಿಸುವ ಮುಖಾಂತರ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ಭರ್ಜರಿ ಚಾಲನೆ ನೀಡಿದರು. ಈ ವೇಳೆ ಕಲಾವಿದರು ಕಹಳೆ ಊದಿದರು. ನಗಾರಿ ಮತ್ತು ಕಹಳೆ ಸದ್ದಿಗೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಾಗಿ ಘೋಷಣೆ ಕೂಗಿದರು.
ಕಾರ್ಯಕರ್ತರಲ್ಲಿ ರಣೋತ್ಸಾಹ
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಉಭಯ ಪಕ್ಷಗಳ ಕಾರ್ಯಕರ್ತರು ಮಾರ್ಗದುದ್ದಕ್ಕೂ ತಮ್ಮ ನಾಯಕರಿಗೆ ಜಯ ಘೋಷಣೆ ಕೂಗಿದರು. ತಮಟೆ, ಬ್ಯಾಂಡ್ ಶಬ್ಧ, ಪಾದಯಾತ್ರೆ ಗೀತೆಗೆ ಕುಣಿದು ಕುಪ್ಪಳಿಸಿದರು. ಬಿಜೆಪಿ-ಜೆಡಿಎಸ್ ಬಾವುಟಗಳನ್ನು ಗಾಳಿಯಲ್ಲಿ ತೇಲಾಡಿಸಿ ಸಂಭ್ರಮಿಸಿದರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಅತ್ಯುತ್ಸಾಹದಲ್ಲಿ ಪಾದಯಾತ್ರೆಯಲ್ಲಿ ಸಾಗಿದರು. ಈ ವೇಳೆ ಬಿ.ವೈ.ವಿಜಯೇಂದ್ರ ಸ್ವಲ ದೂರು ಓಡುವ ಮುಖಾಂತರ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.ಕಿ.ಮೀ.ನಷ್ಟು ಉದ್ದಕ್ಕೆ ಸಂಚಾರ ದಟ್ಟಣೆ
ಎಕ್ಸ್ಪ್ರೆಸ್ ವೇ, ಸರ್ವಿಸ್ ರಸ್ತೆಯಲ್ಲಿ ಮೈಸೂರಿನಿಂದ ಬೆಂಗಳೂರು ಕಡೆಗೆ ಬಂದ ವಾಹನಗಳು ಹಾಗೂ ಬೆಂಗಳೂರು ಕಡೆಯಿಂದ ರಾಮನಗರ, ಮಂಡ್ಯ, ಬೆಂಗಳೂರು ಕಡೆಗೆ ತೆರಳುತ್ತಿದ್ದ ವಾಹನಗಳು ಸುಮಾರು ಒಂದು ತಾಸು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದವು. ದ್ವಿಮುಖ ರಸ್ತೆ ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ.ಗಳಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಹಿನ್ನೆಲೆಯಲ್ಲಿ ಉಂಟಾದ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹೈರಾಣಾದರು. ಏಕಕಾಲಕ್ಕೆ ಭಾರೀ ಸಂಖ್ಯೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿದ ಪರಿಣಾಮ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಗಳು ಇಲ್ಲದೆ ಪಾದಯಾತ್ರೆ ಕುಂಬಳಗೋಡು ಪ್ರವೇಶಿಸುವವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. ಈ ವೇಳೆ ಸಂಚಾರ ಪೊಲೀಸರು ಹಾಗೂ ನಾಗರಿಕ ಪೊಲೀಸರು ಕಾರ್ಯಕರ್ತರನ್ನು ಒಂದು ಕಡೆಗೆ ಚದುರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಲು ಸುಸ್ತು ಹೊಡೆದರು.ಭೋಜನ ವಿರಾಮ ಇಲ್ಲದೆ ಯಾತ್ರೆ
ಪಾದಯಾತ್ರೆ ಮಾರ್ಗ ಮಧ್ಯೆ ಕಾರ್ಯಕರ್ತರು ಟೀ ಸೇವಿಸಿ, ಬಿಸ್ಕೆಟ್, ಟೀ, ಸೌತೆಕಾಯಿ, ಕಡಲೆಕಾಯಿ ತಿಂದರು. ರಾತ್ರಿ ಬಿಡದಿ ವೆಂಕಟೇಶ್ವರ ದೇವಸ್ಥಾನದ ಬಳಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅನ್ನ, ರಾಗಿಮುದ್ದೆ, ಸಾಂಬಾರು, ಮೈಸೂರು ಪಾಕ್ ಸವಿಸಿದರು. ಬಳಿಕ ಎರಡನೇ ದಿನದ ಪಾದಯಾತ್ರೆಯಲ್ಲಿ ಮುಂದುವರೆಯುವ ಕಾರ್ಯಕರ್ತಯರಿಗೆ ಮಂಜುನಾಥ ಕನ್ವೆನ್ಷನ್ ಹಾಲ್ನಲ್ಲಿ ರಾತ್ರಿ ಮಲಗಲು ವ್ಯವಸ್ಥೆ ಮಾಡಲಾಗಿತ್ತು.ಕೈಕೈ ಹಿಡಿದು ಹಜ್ಜೆ ಹಾಕಿದ ರೆಡ್ಡಿ-ರಾಮುಲು
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಮುಖಂಡರು ತಮ್ಮ ನೆಚ್ಚಿನ ನಾಯಕರ ಜತೆಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ನಿಖಿಲ್ ಕುಮಾರಸ್ವಾಮಿ, ಶ್ರೀರಾಮುಲು, ಜನಾರ್ದನರೆಡ್ಡಿ ಸೇರಿದಂತೆ ಉಭಯ ಪಕ್ಷಗಳ ನಾಯಕರ ಜತೆಗೆ ಸೆಲ್ಫಿ, ಪೋಟೋ ತೆಗೆದುಕೊಂಡು ಸಂತಸಪಟ್ಟರು. ಅದರಲ್ಲೂ ಮಹಿಳಾ ಕಾರ್ಯಕರ್ತರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅತ್ಯುತ್ಸಾಹ ತೋರುತ್ತಿದ್ದ ದೃಶ್ಯಗಳು ಪಾದಯಾತ್ರೆ ವೇಳೆ ಕಂಡು ಬಂದಿತು.