ರಸ್ತೆ ಮಾರ್ಜಿನ್ ನಿಂದ 30 ಅಡಿ ಬಿಟ್ಟು ಮನೆ ಕಟ್ಟಲು ಅನುಮತಿಸಿ: ಖಾತೆದಾರರ ಆಗ್ರಹ

KannadaprabhaNewsNetwork |  
Published : Aug 20, 2026, 01:30 AM IST
ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಸ್ತೆ ಅಗಲೀಕರಣ ಖಾತೆದಾರರ ಸಭೆಯಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್ ಮಾತನಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರಬುಧವಾರ ಪ.ಪಂಯಲ್ಲಿ ಸಭಾಂಗಣದಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಅಗಲೀಕರಣ ವ್ಯಾಪ್ತಿಗೆ ಬರುವ ಖಾತೆದಾರರ ಸಭೆಯಲ್ಲಿ ರಸ್ತೆ ಅಗಲೀಕರಣ ನಂತರ ರಸ್ತೆ ಮಾರ್ಜಿನ್ ನಿಂದ 30 ಅಡಿಗೆ ಖಾತೆದಾರರರಿಗೆ ಮನೆ ಕಟ್ಟಿಕೊಳ್ಳಲು ಲೈಸನ್ಸ್ ನೀಡಬೇಕು ಎಂದು ಸಭೆಯಲ್ಲಿದ್ದ ಖಾತೆದಾರರು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ರಸ್ತೆ ಅಗಲೀಕರಣ ಖಾತೆದಾರರ ಸಭೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಬುಧವಾರ ಪ.ಪಂಯಲ್ಲಿ ಸಭಾಂಗಣದಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಅಗಲೀಕರಣ ವ್ಯಾಪ್ತಿಗೆ ಬರುವ ಖಾತೆದಾರರ ಸಭೆಯಲ್ಲಿ ರಸ್ತೆ ಅಗಲೀಕರಣ ನಂತರ ರಸ್ತೆ ಮಾರ್ಜಿನ್ ನಿಂದ 30 ಅಡಿಗೆ ಖಾತೆದಾರರರಿಗೆ ಮನೆ ಕಟ್ಟಿಕೊಳ್ಳಲು ಲೈಸನ್ಸ್ ನೀಡಬೇಕು ಎಂದು ಸಭೆಯಲ್ಲಿದ್ದ ಖಾತೆದಾರರು ಆಗ್ರಹಿಸಿದರು.

ಸಭೆಯಲ್ಲಿದ್ದ ಖಾತೆದಾರ ಎಚ್.ಎನ್.ರವಿಶಂಕರ್ ಮಾತನಾಡಿ ಈ ಹಿಂದಿನ ಸಭೆಗಳಲ್ಲಿ ರಸ್ತೆ ಮಾರ್ಜಿನ್ ನಿಂದ 30 ಅಡಿಗೆ ಮನೆಕಟ್ಟಿಕೊಳ್ಳಲು ಒಪ್ಪಿಗೆ ನೀಡಲಾಗಿತ್ತು. ಈಗ 70 ಅಡಿಗೆ ಮಾತ್ರ ಮನೆ ಕಟ್ಟಿಕೊಳ್ಳಲು ಲೈಸನ್ಸ್ ನೀಡ ಲಾಗುವುದು ಎಂದು ಪಟ್ಟಣ ಪಂಚಾಯಿತಿಯವರು ಹೇಳುತ್ತಿದ್ದಾರೆ. ರಸ್ತೆ ಮಾರ್ಜಿನ್‌ನಿಂದ 70 ಅಡಿ ಜಾಗ ಬಿಟ್ಟು ಮನೆ ನಿರ್ಮಾಣ ಮಾಡಿ ಎಂದರೆ ಹೇಗೆ? ಕೆಲವರಿಗೆ ಕೇವಲ 80 ರಿಂದ 90 ಅಡಿ ಮಾತ್ರ ಜಾಗವಿದೆ. 70 ಅಡಿ ಬಿಟ್ಟರೆ ಉಳಿದ ಸ್ವಲ್ಫ ಜಾಗದಲ್ಲಿ ಹೇಗೆ ಮನೆ ನಿರ್ಮಾಣ ಮಾಡಬೇಕು. ಬಡವರೆಲ್ಲರೂ ಬೀದಿ ಪಾಲಾಗುತ್ತಾರೆ ಎಂದರು.

ಪ.ಪಂ. ಮಾಜಿ ಅಧ್ಯಕ್ಷೆ ಜುಬೇದಾ ಮಾತನಾಡಿ 30 ಅಡಿ ಜಾಗ ಬಿಡಲು ಖಾತೆದಾರರು ಸಿದ್ಧರಿದ್ದಾರೆ. 70 ಅಡಿ ಜಾಗ ಬಿಟ್ಟರೆ ಅವರಿಗೆ ಜಾಗವೇ ಇಲ್ಲದಂತಾಗುತ್ತದೆ. ಆದ್ದರಿಂದ 30 ಅಡಿಗೆ ಮನೆ ಕಟ್ಟಿಕೊಳ್ಳಲು ಲೈಸನ್ಸ್ ನೀಡಬೇಕು ಎಂದರು.

ಮುಖಂಡ ಸಿಗ್ಬತ್ತುಲ್ಲ ಮಾತನಾಡಿ ನಮಗೆ ರಸ್ತೆ ಅಗಲೀಕರಣಕ್ಕೆ ವಿರೋಧವಿಲ್ಲ. ಆಕ್ಷೇಪಣೆಯೂ ಇಲ್ಲ. ಆದರೆ, ಪ್ರವಾಸಿ ಮಂದಿರದ ಬಳಿ ಬಾಬಾ ಬುಡನ್ ಗಿರಿ ಜಾಗವೆಂದು ಅಲ್ಲಿನ ವಾಸಿಗಳಿಗೆ ಖಾತೆಯೇ ಮಾಡಿಕೊಟ್ಟಿಲ್ಲ. ಹಿಂದೆ ಅವರಿಗೆ ಪ.ಪಂ. ಇಂದ ಎಲ್ಲಾ ಮೂಲ ಸೌಕರ್ಯ ನೀಡಲಾಗಿದೆ. ಈಗ ಖಾತೆ ಇಲ್ಲ ಹಾಗೂ ಆ ಜಾಗಕ್ಕೆ ಫಲಾನುಭವಿಗಳಿಗೆ ಹಕ್ಕಿಲ್ಲ ಎಂದು ಅವರಿಗೆ ಪರಿಹಾರ ನೀಡದಿದ್ದರೆ ಹೇಗೆ ? ಅಧಿಕಾರಿಗಳು ಹಿಂದೆ ಮಾಡಿದ ತಪ್ಪಿಗೆ ಬಡವರು ನಿರ್ಗತಿಕರಾಗ ಬೇಕಾ ಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಗಲೀಕರಣಕ್ಕೆ ಖಾತೆದಾರರು ಈಗಾಗಲೇ ಮನೆಗಳನ್ನು ತೆರವುಗೊಳಿಸಿಕೊಟ್ಟಿದ್ದಾರೆ. ಆಗ 30 ಅಡಿ ಜಾಗ ಬಿಡಿ ಎಂದು ಭರವಸೆ ನೀಡಿ ಈಗ 70 ಅಡಿ ಜಾಗ ಬಿಟ್ಟರೆ ಮಾತ್ರ ಪರವಾನಗಿ ನೀಡುತ್ತೇವೆ ಎನ್ನುತ್ತಿದ್ದಾರೆ. ಇದಕ್ಕೆ ಎಲ್ಲರ ಆಕ್ಷೇಪಣೆ ಇದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್ ಮಾತನಾಡಿ ದೇಶಕ್ಕೆ ಒಂದೇ ಭೂ ಸ್ವಾಧೀನ ಕಾಯ್ದೆ ಇರುತ್ತದೆ. ಅದರಡಿ ಎಲ್ಲದಕ್ಕೂ ಕಾನೂನಿನಲ್ಲಿ ಅವಕಾಶಗಳಿರುತ್ತವೆ. ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ. ಖಾತೆ ದಾರರ ಜಾಗ ಸ್ವಾಧೀನಪಡಿಸಿಕೊಳ್ಳುವಾಗ ಮಾತ್ರ ಈ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತೇವೆ. ಬೇರೆ ಜಾಗಗಳಿಗೆ ಅನ್ವಯಿಸುವುದಿಲ್ಲ. ಇನ್ನು 30 ಅಡಿ, 70 ಅಡಿ ಜಾಗ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಚರ್ಚೆ ಬಗ್ಗೆ ಪ.ಪಂ. ನಿರ್ಧರಿಸಬೇಕು. ಭೂಸ್ವಾಧೀನಾಧಿಕಾರಿಗಳಾದ ನಮಗೆ ವ್ಯಾಪ್ತಿಗೆ ಬರುವುದಿಲ್ಲ. ಜನಪ್ರತಿನಿಧಿಗಳೊಂದಿಗೆ ಕುಳಿತುಕೊಂಡು ಚರ್ಚಿಸಿ ಸಮಸ್ಯೆ ಬಗೆಹರಿ ಸಿಕೊಳ್ಳಬೇಕು. ಭೂಸ್ವಾಧೀನದ ಬಗ್ಗೆ ಆಕ್ಷೇಪಣೆಗಳು, ಸಲಹೆ, ಚರ್ಚೆಗಳಿದ್ದರೆ ತಿಳಿಸಿದರೆ ಮಾತ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ದಾಖಲೆಗಳು ಸರಿ ಇರುವ ಹಾಗೂ ರಸ್ತೆ ಅಗಲೀಕರಣ ಸಂಬಂಧ ಆಸ್ತಿ ನಮಗೆ ನೋಂದಣಿ ಮಾಡಿದವರಿಗೆ ಈ -ಸ್ವತ್ತು ವಿತರಿಸಲು ಕ್ರಮ ಕೈಗೊಳ್ಳಿ ಎಂದು ಪಪಂ ಅಧಿಕಾರಿಗೆ ಸೂಚಿಸಿದರು.

ಪ.ಪಂ. ಅಧಿಕಾರಿ ವಿಜಯಕುಮಾರ್ ಮಾತನಾಡಿ ಪಟ್ಟಣದ ಕೆಲವು ಖಾತೆದಾರರ ದಾಖಲೆಗಳ ಸಮಸ್ಯೆ ಹಾಗೂ ಕೆಲವು ತಾಂತ್ರಿಕ ದೋಷಗಳಿಂದ ಇ-ಸ್ವತ್ತು ವಿತರಣೆ ವಿಳಂಬವಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಪಿ.ಡಬ್ಲೂಡಿದೆ ಎಂಜಿನಿಯರ್ ದಿನೇಶ್, ಎಸಿ ಕಛೇರಿ ಸಿಬ್ಬಂದಿ ಹಾಗೂ ರಸ್ತೆ ಅಗಲೀಕರಣ ವ್ಯಾಪ್ತಿಗೆ ಬರುವ ಖಾತೆದಾರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗದಿರಲಿ: ಶಾಸಕ ಸಿ.ಬಿ.ಸುರೇಶ್‌ಬಾಬು
ಬೆಳಿಗ್ಗೆ 6ರ ನಂತರವೇ ಬಿರಿಯಾನಿ ಮಾರಾಟಕ್ಕೆ ಸೂಚನೆ