ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಿ: ಕೃಷ್ಣಾನಂದ ಭಟ್ಟ ಬಲ್ಸೆ

KannadaprabhaNewsNetwork |  
Published : Jul 22, 2025, 01:15 AM IST
ಪೊಟೋ ಪೈಲ್ : 21ಬಿಕೆಲ್3 | Kannada Prabha

ಸಾರಾಂಶ

ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ.

ಭಟ್ಕಳ: ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಬೇಕಿದೆ ಎಂದು ಕೃಷ್ಣಾನಂದ ಭಟ್ಟ ಬಲ್ಸೆ ಹೇಳಿದರು.

ಮುರುಡೇಶ್ವರದ ರಾಘವೇಶ್ವರ ಭಾರತಿ ಹವ್ಯಕ ಸಭಾಂಗಣದಲ್ಲಿ ಏರ್ಡಿಸಲಾದ ತಾಲೂಕು ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ೧೧ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ. ನಮ್ಮ ಬಟ್ಟೆ, ಆಹಾರ, ಭಾಷೆ ಪ್ರತಿಯೊಂದರಲ್ಲೂ ಸಂಸ್ಕೃತಿ ಅಡಗಿದೆ. ಇದನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಮೇಲಿನ ಗಂಟಿಗೆಯ ವಿದ್ವಾನ್ ಸುಬ್ರಹ್ಮಣ್ಯ ವಿಶ್ವೇಶ್ವರ ಭಟ್ಟ, ಕಲಿಯುಗದಲ್ಲಿ ಸಂಘ ಶಕ್ತಿಗೆ ಮಹತ್ವನ್ನು ನೀಡಲಾಗಿದೆ. ಸಂಘಟನೆಯನ್ನು ರಚಿಸಿಕೊಂಡು ನೌಕರರ ಕ್ಷೇಮ ಮತ್ತು ಅಭಿವೃದ್ಧಿಯನ್ನು ಬಯಸುತ್ತಿರುವ ಈ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.

ಇನ್ನೋರ್ವ ಮುಖ್ಯಅತಿಥಿ ಶಿರಾಲಿ ಜನತಾ ವಿದ್ಯಾಲಯದ ಪ್ರಾಂಶುಪಾಲ ಜಿ.ಎಸ್. ಹೆಗಡೆ ಮಾತನಾಡಿ, ಹವ್ಯಕರ ಜನ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನಮ್ಮಲ್ಲಿ ಮದುವೆಯ ವಯಸ್ಸು ಹೆಚ್ಚುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಪ್ರತಿ ತಂದೆ- ತಾಯಿಯರು ಯೋಚಿಸಬೇಕಾದ ಸಮಯ ಇದಾಗಿದೆ. ನಾವು ನಮ್ಮ ಉಡುಗೆ, ತೊಡುಗೆ, ಆಹಾರ, ವಿಚಾರದಲ್ಲಿ ನಮ್ಮ ತನವನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಇಂದು ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ತಾಲೂಕ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಎಂ.ವಿ. ಹೆಗಡೆ ವಹಿಸಿದ್ದರು.

ಸಲಹಾ ಸಮಿತಿ ಮಾರ್ಗದರ್ಶಕ ಶಂಭು ಎನ್. ಹೆಗಡೆ, ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು. ಸಂಘದ ಉಪಾಧ್ಯಕ್ಷರುಗಳಾದ ಸುಧಾ ಭಟ್ಟ ಹಾಗೂ ಜಿ.ಟಿ. ಭಟ್ಟ ಉಪಸ್ಥಿತರಿದ್ದರು. ಸನ್ಮಾನಿತರ ಪರವಾಗಿ ವಿದ್ವಾನ್ ನೀಲಕಂಠ ಯಾಜಿ, ಕೆ.ಜಿ. ಹೆಗಡೆ ಹಾಗೂ ಕಾರ್ತಿಕ್ ಹೆಡಗೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ೨೦೧೪ಕ್ಕೂ ಪೂರ್ವ ನಿವೃತ್ತರಾದ ನೌಕರರನ್ನು, ೨೦೨೪-೨೫ನೇ ಸಾಲಿನಲ್ಲಿ ನಿವೃತ್ತರಾದವರು, ವಿವಿಧ ಸಾಧನೆಗಾಗಿ ಜಿಲ್ಲಾ-ರಾಜ್ಯ ಮಟ್ಟದಲ್ಲಿ ಸನ್ಮಾನಿತರಾದವರನ್ನು ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು. ವಿದ್ಯಾ ಭಟ್ಟ ಪ್ರಾರ್ಥಿಸಿದರು. ಶಿಕ್ಷಕ ಐ.ವಿ.ಹೆಗಡೆ ಹಾಗೂ ಕೆ.ಬಿ. ಹೆಗಡೆ ನಿರ್ವಹಿಸಿದರು. ಶಿಕ್ಷಕ ಗಣೇಶ ಯಾಜಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಗಣಪತಿ ಶಿರೂರು ವಂದಿಸಿದರು.

PREV

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು