ಆಳ್ವಾಸ್ ಸಹಕಾರ ಸಂಘ: 3.55 ಕೋಟಿ ರು. ನಿವ್ವಳ ಲಾಭ, ಶೇ 17 ಲಾಭಾಂಶ

KannadaprabhaNewsNetwork |  
Published : Sep 10, 2025, 01:05 AM IST
ಆಳ್ವಾಸ್ ಸಹಕಾರ ಸಂಘದ 9ನೇ ವಾರ್ಷಿಕ ಮಹಾಸಭೆ3.55 ಕೋಟಿ ನಿವ್ವಳ ಲಾಭ, ಶೇ 17 ಲಾಭಾಂಶ | Kannada Prabha

ಸಾರಾಂಶ

ಮೂಡುಬಿದಿರೆ ಆಳ್ವಾಸ್ ಕೃಷಿಸಿರಿ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಸಹಕಾರಿ ಸಂಘದ 2024-25 ನೇ ಸಾಲಿನ 9ನೇ ವಾರ್ಷಿಕ ಮಹಾಸಭೆ ಸಂಪನ್ನಗೊಂಡಿತು.

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ 3.55 ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ 17 ಲಾಭಾಂಶ ಘೋಷಿಸಿದೆ.ಆಳ್ವಾಸ್ ಕೃಷಿಸಿರಿ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಶನಿವಾರ ನಡೆದ ಸಂಘದ 2024-25 ನೇ ಸಾಲಿನ 9ನೇ ವಾರ್ಷಿಕ ಮಹಾಸಭೆಯಲ್ಲಿ ಈ ಮಾಹಿತಿ ಪ್ರಕಟಿಸಲಾಯಿತು.

ವಾರ್ಷಿಕ ವರದಿ ವಾಚಿಸಿದ ಸಂಘದ ಕಾರ್ಯ ನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ, ಸಂಘವು ಈ ಸಾಲಿನಲ್ಲಿ 170 ಕೋಟಿ ರು. ವ್ಯವಹಾರ ನಡೆಸಿದ್ದು, ಕಳೆದ ವಿತ್ತೀಯ ವರ್ಷಕ್ಕಿಂತ ಈ ವರ್ಷ 19 ಲಕ್ಷದಷ್ಟು ಹೆಚ್ಚಿನ ಲಾಭ ಗಳಿಸಿದೆ. ಶೇ 99.62 ಸಾಲ ವಸೂಲಾತಿ ಮಾಡಿದೆ ಎಂದು ಮಾಹಿತಿ ನೀಡಿದರು.

ಆಳ್ವಾಸ್ ಸಹಕಾರಿ ಸಂಘದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ನಮ್ಮ ಆಳ್ವಾಸ್ ಸಹಕಾರಿ ಸಂಘ ಮುಂದಿನ ವರ್ಷ ತನ್ನ ದಶಮಾನೋತ್ಸವದ ಹಿರಿಮೆಯ ಮೈಲಿಗಲ್ಲು ತಲುಪಲಿದೆ. ದಶಮಾನೋತ್ಸವದ ಸಂಭ್ರಮವನ್ನು ಹೊಸ ಯೋಜನೆಗಳು ಮತ್ತು ಸದಸ್ಯರ ಹೆಚ್ಚಿನ ಪಾಲ್ಗೊಳ್ಳಿಕೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಸಂಘ ಹೊಸ ಮೊಬೈಲ್ ಆ್ಯಪ್‌ನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ ಎಂದರು.

ಮುಂದಿನ ವರ್ಷಕ್ಕೆ 100 ಕೋಟಿ ರು. ಠೇವಣಿ ಸಂಗ್ರಹಿಸಿ, ಬ್ಯಾಂಕಿನ ವ್ಯವಹಾರವನ್ನು 195 ಕೋಟಿ ರು.ಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದರು.

2024-25ನೇ ಸಾಲಿನ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಟಾಪರ್‌ಗಳಾದ ಆಳ್ವಾಸ್ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ, ಪ್ರಸ್ತುತ ಪ.ಪೂ ಕಾಲೇಜಿನಲ್ಲಿ ಓದುತ್ತಿರುವ ಪಾವನಾ ಶರಣಾ ಬಸಪ್ಪ ಮೇಗೂರ್, ಹರೀಶ ಬಡಿಗೇರ್, ರಿಯಾ ವಿಧ್ಯಾದರ್ ಕಾಮ್ಟೆ, ವಿನಯ, ಮಾನ್ಯ, ಐತ್ಯಾ, ಚಿನ್ಮಯ್ ಹಾಗೂ ದ್ವಿತೀಯ ಪದವಿಪೂರ್ವ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವೈಷ್ಣವಿ ಪ್ರಸಾದ ಭಟ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರು. ನಗದಿನೊಂದಿಗೆ ಅಭಿನಂದಿಸಲಾಯಿತು.ಸಹಕಾರ ಶಿಕ್ಷಣ ನಿಧಿಯ 3,19,821 ಲಕ್ಷದ ಚೆಕ್‌ನ್ನು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿಗೆ ಮೂಡುಬಿದಿರೆಯ ಸಹಕಾರಿ ತರಬೇತಿ ಸಂಸ್ಥೆಯ ಉಪನ್ಯಾಸಕಿ ಬಿಂದು ಬಿ ನಾಯರ್ ಮೂಲಕ ಹಸ್ತಾಂತರಿಸಲಾಯಿತು.

ಸಂಘದ ಉಪಾಧ್ಯಕ್ಷ ಎ ಮೋಹನ್ ಪಡಿವಾಳ್, ನಿರ್ದೇಶಕರಾದ ಶ್ರೀಪತಿ ಭಟ್, ಜಯಶ್ರೀ ಅಮರನಾಥ್ ಶೆಟ್ಟಿ, ನಾರಾಯಣ ಪಿಎಂ, ವಿವೇಕ್ ಆಳ್ವ, ರಾಮಚಂದ್ರ ಮಿಜಾರು, ಪ್ರಕಾಶಿನಿ ಹೆಗ್ಡೆ, ಅಶ್ವಿನ್ ಜೊಸ್ಸಿ ಪಿರೇರಾ, ಮೀನಾಕ್ಷಿ ಇದ್ದರು.

ನಿರ್ದೇಶಕ ಜಯರಾಮ್ ಕೋಟ್ಯಾನ್ ಸ್ವಾಗತಿಸಿದರು. ಆಳ್ವಾಸ್ ಪ.ಪೂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕೆ.ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ