ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ: ವೈಯಕ್ತಿಕ ಸೌಂದರ್ಯ, ಆರೈಕೆ ಕ್ಷೇತ್ರ ನಾಲ್ಕು ಉದ್ದಿಮೆ ಆರಂಭ

KannadaprabhaNewsNetwork | Published : Apr 9, 2025 12:48 AM

ಸಾರಾಂಶ

ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ, ಪೋಲಿಶ್- ನೈಲ್ಸ್ ಆ್ಯಂಡ್ ಬ್ಯೂಟಿ, ಹೆಲ್ದೀ ಸಿಪ್ ಹಾಗೂ ಲ್ಯಾಕ್ಟೇಶನ್ ಕನ್‌ಸಲ್ಟೇನ್ಸಿ ಸರ್ವೀಸಸ್ ಅನ್ನು ಮೂಡುಬಿದಿರೆಯ ಆಳ್ವಾಸ್ ಆ್ಯಸ್ಥೇಟಿಕ್ ರಿಜುವನೇಶನ್ ಸೆಂಟರ್ ಆವರಣದಲ್ಲಿ ಯುಗಾದಿಯಂದು ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯ ಸುತ್ತಮುತ್ತಲಿನ ಪರಿಸರದಲ್ಲಿ ಮೊಟ್ಟ ಮೊದಲ ಬಾರಿಗೆ ವೈಯಕ್ತಿಕ ಸೌಂದರ್ಯ ಹಾಗೂ ಆರೈಕೆ ಕ್ಷೇತ್ರಕ್ಕೆ ಸಂಬಂದಿಸಿದ ನಾಲ್ಕು ಉದ್ದಿಮೆ ಆರಂಭವಾಗಿದೆ.

ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ, ಪೋಲಿಶ್- ನೈಲ್ಸ್ ಆ್ಯಂಡ್ ಬ್ಯೂಟಿ, ಹೆಲ್ದೀ ಸಿಪ್ ಹಾಗೂ ಲ್ಯಾಕ್ಟೇಶನ್ ಕನ್‌ಸಲ್ಟೇನ್ಸಿ ಸರ್ವೀಸಸ್ ಅನ್ನು ಮೂಡುಬಿದಿರೆಯ ಆಳ್ವಾಸ್ ಆ್ಯಸ್ಥೇಟಿಕ್ ರಿಜುವನೇಶನ್ ಸೆಂಟರ್ ಆವರಣದಲ್ಲಿ ಯುಗಾದಿಯಂದು ಉದ್ಘಾಟಿಸಲಾಯಿತು.

ಮಂಗಳೂರಿನ ಕಾಸ್ಮೆಟಿಕ್ ಸ್ತ್ರೀರೋಗ ತಜ್ಞೆ ಹಾಗೂ ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್‌ ಖ್ಯಾತಿಯ ಡಾ. ನಿಶಿತಾ ಶೆಟ್ಟಿಯಾನ್ ಫರ್ನಾಂಡಿಸ್ ಲೋಕಾರ್ಪಣೆಗೊಳಿಸಿದರು.ಅವರು ಮಾತನಾಡಿ, ಮೇಕಪ್ ಕಲೆ ಸಾಮಾನ್ಯವಾಗಿ ಮಹಿಳೆಯರಿಗೆ ಮಾತ್ರ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಈ ಕಲೆಯು ಲಿಂಗಭೇದ ಮೀರಿ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಮೂಡುಬಿದಿರೆ ಪರಿಸರದಲ್ಲಿ ಯಾವುದರ ಅಗತ್ಯ ವಿದೆಯೋ ಅಂತಹವುಗಳನ್ನು ಪೂರೈಸುವ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಾಂಗವಾಗಿ ಮಾಡುತ್ತಾ ಬಂದಿದೆ ಎಂದರು.

ಪೋಲಿಶ್ ನೇಲ್ಸ್ ಅಂಡ್ ಬ್ಯೂಟಿ:

ಮೂಡುಬಿದಿರೆಯ ಪರಿಸರದಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತಮ ಗುಣಮಟ್ಟದ ಪರಿಣಿತ ತಾಂತ್ರಿಕ ತಂಡದೊಂದಿಗೆ ನೇಲ್ಸ್ ಅಂಡ್ ಬ್ಯೂಟಿ ಕ್ಷೇತ್ರದ ವೈವಿಧ್ಯಮಯ ಸೇವೆಗಳನ್ನು ಒದಗಿಸಲಾಗುತ್ತದೆ. ಜೆಲ್ ನೇಲ್ ಪಾಲಿಷ್, ನೇಲ್ ಆರ್ಟ್ ಮತ್ತು ಎಕ್ಸ್‌ಟೆನ್ಶನ್‌, ಮ್ಯಾನಿಕ್ಯೂರ್ ಹಾಗೂ ಪೆಡಿಕ್ಯೂರ್ ಸೇವೆಗಳು ಲಭ್ಯವಿವೆ.

ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ:

ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ ಮೂಲಕ ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪ್ರಸಿದ್ಧ ಸೆಲೆಬ್ರಿಟಿ ಮೆಕಪ್ ತಜ್ಞ ವಿಜಿಲ್ಸ್ ಅವರ ಮೆಕಪ್ ಮಾಸ್ಟರ್ ಕ್ಲಾಸ್ ಆಯೋಜನೆಗೊಂಡಿದ್ದು, ಆಸಕ್ತ ಉದಯೋನ್ಮಖ ಮೇಕಪ್ ಆರ್ಟಿಸ್ಟ್‌ಗಳಿಗೆ ಸಹಕಾರಿಯಾಗಲಿದೆ. ವಿಶೇಷವಾಗಿ, ಪಾರಂಪರಿಕ ವಧು ಮೇಕಪ್, ಕೂದಲು ಶೈಲಿ ಹಾಗೂ ಸೀರೆ ಧರಿಸುವ ಕಲೆ ಕುರಿತಾದ ವಿಶಿಷ್ಟ ಕಾರ್ಯಾಗಾರಗಳು ನಡೆಯಲಿವೆ.

ಹೆಲ್ದೀ ಸಿಪ್ – ಶೋಭಾ ಕ್ಯಾಂಟೀನ್:

ಆಳ್ವಾಸ್ ಹೆಲ್ತ್ ಸೆಂಟರ್ ಆವರಣದಲ್ಲಿರುವ ಶೋಭಾ ಕ್ಯಾಂಟೀನ್ ತನ್ನ 15 ವರ್ಷಗಳ ಪರಂಪರೆ ಮುಂದುವರಿಸುತ್ತಾ, ಇದೀಗ ಹೊಸ ರೂಪದಲ್ಲಿ ಸೇವೆಗೆ ಲಭ್ಯವಾಗಲಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಶೇ. 100 ಶುದ್ಧ ಸಸ್ಯಾಹಾರಿ, ರಾಸಾಯನಿಕಮುಕ್ತ, ಸಕ್ಕರೆ ರಹಿತ ಹಾಗೂ ಪೌಷ್ಟಿಕತೆಯಿಂದ ಸಮೃದ್ಧವಾದ ಹಣ್ಣು-ತರಕಾರಿ ಜ್ಯೂಸ್‌ಗಳನ್ನು ಒದಗಿಸಲಿದೆ.

ಸ್ತನ್ಯಪಾನದ ಮಾರ್ಗದರ್ಶಿ ಸೇವೆಗಳು:

ಸ್ತನ್ಯಪಾನ ವಿಚಾರದಲ್ಲಿ ಅಂತಾರಾಷ್ಟ್ರೀಯ ಪ್ರಮಾಣಿತ ಸ್ತನ್ಯಪಾನ ಸಲಹೆಗಾರರ ಮಂಡಳಿಯಿಂದ ಕೋರ್ಸ್‌ ಪೂರ್ಣಗೊಳಿಸಿದ ಪ್ರೊ. ಜೆನ್ವಿವ್ ಕವಿತ್ ಡಿ’ಸಿಲ್ವಾ ಮಾರ್ಗದರ್ಶನ ನೀಡಲಿದ್ದಾರೆ. ತಾಯಂದಿರ ಮತ್ತು ಶಿಶುವಿನ ಉತ್ತಮ ಆರೋಗ್ಯಕ್ಕಾಗಿ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ಸಮಗ್ರ ಮಾರ್ಗದರ್ಶನ ಇಲ್ಲಿ ಪಡೆಯಬಹುದಾಗಿದೆ.

ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲ್‌ದೀಪ್ ಎಂ, ಜಯಶ್ರೀ ಅಮರನಾಥ್ ಶೆಟ್ಟಿ, ಮೀನಾಕ್ಷಿ ಆಳ್ವ, ವೈಯಕ್ತಿಕ ಸೌಂದರ್ಯ ಹಾಗೂ ಆರೈಕೆ ಕ್ಷೇತ್ರದ ಉದ್ದಿಮೆಗಳ ರೂವಾರಿಗಳಾದ ಡಾ ಹನಾ ಶೆಟ್ಟಿ, ಡಾ ಗ್ರೀಷ್ಮಾ ಆಳ್ವ, ಆಳ್ವಾಸ್ ಆ್ಯಸ್ಥೇಟಿಕ್ ರಿಜುವನೇಶನ್ ಸೆಂಟರ್‌ನ ಡಾ ಸುಷ್ಮಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ದೀಕ್ಷಾ ಕರ‍್ಯಕ್ರಮ ನಿರೂಪಿಸಿ, ವಂದಿಸಿದರು.

Share this article