ಹುಬ್ಬಳ್ಳಿ: ನಾಡಿಗೆ ಅಮರಶಿಲ್ಪಿ ವಿಶ್ವಕರ್ಮ ಜಕಣಾಚಾರಿ ಕೊಡುಗೆ ಅಪಾರವಾಗಿದೆ ಎಂದು ತಹಸೀಲ್ದಾರ್ ಕಲಗೌಡ ಪಾಟೀಲ ಹೇಳಿದರು.
ಜಕಣಾಚಾರಿ ನಿರ್ಮಿಸಿರುವ ಐತಿಹಾಸಿಕ ದೇವಾಲಯಗಳ ಮೇಲಿನ ಸುಂದರ ಕೆತ್ತನೆಗಳು ಅವರ ಕಲಾ ನೈಪುಣ್ಯತೆಗೆ ಕನ್ನಡಿಯಾಗಿದೆ. ಇಂದಿನ ಯುವ ಪೀಳಿಗೆಯು ಅವರ ಹಿನ್ನೆಲೆಯನ್ನು ಅರಿಯುವುದು ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಭವನದಲ್ಲಿ ಜ.1ರಂದು ಬೆಳಗ್ಗೆ 11ಗಂಟೆಗೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತಿದ್ದು, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ಕಾರ್ಯಕ್ರಮದಲ್ಲಿ ಜಕಣಾಚಾರಿ ಅವರ ಕುರಿತು ಉಪನ್ಯಾಸ ನೀಡಲಾಗುವುದು. ವಿಶೇಷ ಸಾಧನೆಗೈದ ಶಿಲ್ಪಿಗಳಿಗೆ ಸನ್ಮಾನಿಸಲಾಗುವುದು ಎಂದರು.
ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ವಿವರಿಸಿದರು. ಸಮುದಾಯದ ಮುಖಂಡರಾದ ಎಸ್.ಎಂ. ಕಮ್ಮಾರ, ಮೌನೇಶ ಬಡಿಗೇರ, ವಿನೋದ ಬಡಿಗೇರ, ಸುರೇಶ ದ್ಯಾಮಣ್ಣವರ, ರವಿಕುಮಾರ ಕಮ್ಮಾರ, ರಾಜು ಆಲೂರು ಸೇರಿದಂತೆ ಹಲವರಿದ್ದರು.