ಚಿಕ್ಕಮಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶ ಕಂಡ ಒಬ್ಬ ಅಪರೂಪದ ಮಹಾನ್ ನಾಯಕ. ಅವರು ದಲಿತ ಸಮುದಾಯಕ್ಕೆ ಸೀಮಿತರಾಗದೆ ಎಲ್ಲಾ ವರ್ಗದ ಶೋಷಿತರಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ ತಿಳಿಸಿದರು.ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನು ಅರ್ಪಿಸಿ ಮಾತನಾಡಿದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಕುಟುಂಬದ ಪತ್ನಿ ಸೇರಿದಂತೆ ಮಕ್ಕಳು ಮೃತಪಟ್ಟಿದ್ದನ್ನು ಲೆಕ್ಕಿಸದೆ, ಇಡಿ ದೇಶದ ಜನತೆ ನನ್ನ ಕುಟುಂಬ ಎಂದು ಭಾವಿಸಿ ಇತರೆ ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಿ ಭಾರತಕ್ಕೆ ಅಗತ್ಯ ಇರುವ ಸಂವಿಧಾನವನ್ನು ಜಾರಿ ಮಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂಬ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು.ಬಿಎಸ್ಪಿ ರಾಜ್ಯ ಸಹ ಸಂಯೋಜಕ ಕೆ.ಟಿ.ರಾಧಾಕೃಷ್ಣ ಮಾತನಾಡಿ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಲು ಮೂಲ ಕಾರಣ ನ್ಯಾಯಾಧೀಶರು. ನಿಷ್ಠಾವಂತ, ಗೌರವಾನ್ವಿತ ನ್ಯಾಯಾಧೀಶರು ಸಾಮಾನ್ಯ ಜನರಂತೆ ಜನರೊಂದಿಗೆ ಬೆರೆಯುತ್ತಿರುವ ಅವರ ಗುಣಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕೆಂಬ ಅಗತ್ಯ ಇದೆ ಎಂದರು.ಡಾ.ಬಿ.ಆರ್.ಅಂಬೇಡ್ಕರ್ ರವರ ಕಾಲಘಟ್ಟದಲ್ಲಿ ನಡೆದ ನೋವಿನ ಘಟನೆ ಬಗ್ಗೆ ಅವರ ಪತ್ನಿ ರಮಾಬಾಯಿ ಅವರಿಗೆ ಬರೆದ ಪತ್ರದಲ್ಲಿ ಈಗೆ ತಿಳಿಸಲಾಗಿತ್ತು, ನಾನು ಏಕಾಂಗಿ ಹೋರಾಟ ಮಾಡಿ ಎಲ್ಲವನ್ನು ಕೊಡಿಸಿದೆ ಆದರೆ ಇದನ್ನು ಪಡೆದ ವಿದ್ಯಾವಂತರು, ಅಧಿಕಾರ ಶಾಹಿಗಳು ಕೂಡ ನಾನು ಎಳೆದ ರಥಕ್ಕೆ ಕೈಜೊಡಿಸಲಿಲ್ಲ ಬದಲಾಗಿ ಹಿಂದಕ್ಕೆ ಎಳೆಯಲು ಪ್ರಯತ್ನಿಸಿದರು ಎಂದು ಸಮಾಜದಲ್ಲಿ ಅವರಿಗೆ ಆದ ನಿಂದನೆಗಳ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿಸಿದರು.ಸ್ವಾತಂತ್ರ್ಯ ದೊರೆತು 78 ವರ್ಷಗಳು ಕಳೆದರು ಇಂದಿಗೂ ಅದೇ ರೀತಿಯಲ್ಲಿ ಮುಂದುವರಿದುಕೊಂಡು ಬಂದಿದೆ. ಅಧಿಕಾರ ಹೀನ ಜನ ಬೇಡುವ ಜನಾಂಗವಾಗಿ ಪರಿವರ್ತನೆಗೊಂಡಿದೆ. ಬಹುಸಂಖ್ಯಾತ ವರ್ಗ ಬೇಡುತ್ತಿದ್ದರೆ ಅಲ್ಪಸಂಖ್ಯಾತ ವರ್ಗ ಆಳ್ವಿಕೆ ನಡೆಸುತ್ತಿದೆ ಇದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು.ಬಹುಸಂಖ್ಯಾತ ವರ್ಗ ಆಳ್ವಿಕೆ ನೆಡೆಸಲು ಪರಿವರ್ತರಾಗಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರು ಪ್ರತಿಜ್ಞೆ ಮಾಡಿ ಅದೇ ದಾರಿಯಲ್ಲಿ ಸಾಗಿದಾಗ ಮಾತ್ರ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸನ್ನು ನನಸಾಗಿಸಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನ, ಮುಖಂಡರುಗಳಾದ ವಕೀಲ ಅನಿಲ್ ಕುಮಾರ್, ಮರ್ಲೆ ಅಣ್ಣಯ್ಯ, ಹಿರೇಮಗಳೂರು ರಾಮಚಂದ್ರ, ಸಮಾಜ ಕಲ್ಯಾಣ ಇಲಾಖೆಯ ರಮೇಶ್, ಎಚ್.ಡಿ.ರೇವಣ್ಣ, ನಗರದ ಹಿರಿಯ ನಾಗರೀಕರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಉಪಸ್ಥಿತರಿದ್ದರು.