ಭಾರತ ಸಂವಿಧಾನ ಕುರಿತು ಜಾಗೃತಿಗಾಗಿ ಪರೀಕ್ಷೆ

KannadaprabhaNewsNetwork | Published : Apr 22, 2025 1:50 AM

ಉದ್ಯೋಗ ಆಧಾರಿತ ಪರೀಕ್ಷೆಯನ್ನು ಪಠ್ಯಪುಸ್ತಕಕ್ಕೆ ಸೀಮಿತಗೊಳ್ಳುವ ಯುವ ಜನತೆ ಎಲ್ಲಾ ವಿಧದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಜ್ಞಾನದ ಆಳ ವಿಸ್ತಾರಗೊಳ್ಳಬೇಕು

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಭಾರತೀಯ ಸಂವಿಧಾನದ ಬಗ್ಗೆ ವಿದ್ಯಾವಂತ ಯುವ ಜನತೆಯಲ್ಲಿ ಜಾಗೃತಿ ಮೂಡಿಸಲು ಹಾಗೂ ಅದರ ಅಧ್ಯಯನದ ಅಸಕ್ತಿ ಮೂಡಿಸಲು ಭಾರತ ಸಂವಿಧಾನ ಕುರಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದೇವೆ ಎಂದು ಎವಿಎಸ್ಎಸ್ ಅಧ್ಯಕ್ಷ ತುಂಬಲ ರಾಮಣ್ಣ ತಿಳಿಸಿದರು.ಅಂಬೇಡ್ಕರ್ ಜಯಂತಿ ಅಂಗವಾಗಿ ಭಾನುವಾರ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸೇವಾ ಸಂಸ್ಥೆಯ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಅವರು ಮಾತನಾಡಿದರು.ಉದ್ಯೋಗ ಆಧಾರಿತ ಪರೀಕ್ಷೆಯನ್ನು ಪಠ್ಯಪುಸ್ತಕಕ್ಕೆ ಸೀಮಿತಗೊಳ್ಳುವ ಯುವ ಜನತೆ ಎಲ್ಲಾ ವಿಧದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಜ್ಞಾನದ ಆಳ ವಿಸ್ತಾರಗೊಳ್ಳಬೇಕು. ಭಾರತ ಸಂವಿಧಾನದ ಪರೀಕ್ಷೆಯನ್ನು ಬರೆದು, ಬಲ ಮತ್ತು ದೃಢವಾದ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಾಯೋಗಿಕವಾಗಿ ಕೆ.ಪಿ.ಎಸ್.ಸಿ ಮತ್ತು ಕೆಇಎ ಮಾದರಿಯಲ್ಲಿ ಈ ಪರೀಕ್ಷೆ ಆಯೋಜಿಸಿರುವುದಾಗಿ ಅವರು ತಿಳಿಸಿದರು.ಕಾಲೇಜಿನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಿತು. 18 ರಿಂದ 40 ರೊಳಗಿನ ವಯೋಮಾನದ 122 ಪರೀಕ್ಷಾರ್ಥಿಗಳು ಪರೀಕ್ಷೆ ಬರೆದರು.ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಅತಿ ಹೆಚ್ಚು ಅಂಕ ಪಡೆದ ಮೂವರಿಗೆ ನಗದು ಬಹುಮಾನ, ಸಂವಿಧಾನದ ಪುಸ್ತಕ ಹಾಗೂ ಪ್ರಸಂಶನಾ ಪತ್ರ ವಿತರಿಸಲಾಗುವುದು. ಪರೀಕ್ಷೆ ಬರೆದವರೆಲ್ಲರಿಗೂ ನೆನಪಿನ ಕಾಣಿಕೆ ನೀಡಲಾಗುವುದು ಎಂದು ಕಾರ್ಯದರ್ಶಿ ಜಗದೀಶ್ ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ. ಉದಯ್ ಕುಮಾರ್, ಎವಿಎಸ್ಎಸ್ ಉಪಾಧ್ಯಕ್ಷ ಡಿ.ಆರ್. ಪುಟ್ಟಸ್ವಾಮಿ, ನಿರ್ದೇಶಕ ಸಂಪತ್ ಕುಮಾರ್, ಕಚೇರಿ ಸಹಾಯಕಿ ಶಿಲ್ಪಾ, ಶಿಕ್ಷಕರಾದ ಎನ್. ಸುನಿಲ್ ಕುಮಾರ್, ಡಿ. ಸಿದ್ದರಾಜು, ಪ್ರಭು, ನಿಂಗರಾಜು, ವಿಜಯ್, ದಿವಾಕರ್, ಲೋಕೇಶ್, ಶಾಂತ ನಾಗರಾಜು ಇದ್ದರು.