ಗಂಗಾವತಿ: ಸಮೀಪದ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಮತಿಹೀನ ಮಹಿಳೆಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿ, ಸಚಿವ ಶಿವರಾಜ ತಂಗಡಗಿ ಮತ್ತು ಮಾಜಿ ಶಾಸಕ ಬಸವರಾಜ ದಡೇಸ್ಗೂರು ಬ್ಯಾನರುಗಳನ್ನು ಕಿತ್ತಿಹಾಕಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸುದ್ದಿ ತಿಳಿಯುತ್ತಲೇ ದಲಿತ ಪರ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಈ ಕೃತ್ಯ ಯಾರು ಮಾಡಿದ್ದಾರೆಂದು ಸಿಸಿ ಕ್ಯಾಮೇರಾ ಮೂಲಕ ಪತ್ತೆ ಹಚ್ಚುವ ಕಾರ್ಯ ಪೊಲೀಸರು ನಡೆಸಿದರು. ಕೊನೆಗೆ ಗ್ರಾಮದಲ್ಲಿದ್ದ ಮತಿಹೀನ ಮಹಿಳೆ ಶರಣಮ್ಮ ಎನ್ನುವಾಕೆ ಈ ಕೃತ್ಯ ನಡೆಸಿದ್ದಾರೆಂದು ಗೊತ್ತಾಗಿದ್ದರಿಂದ ಗ್ರಾಮಸ್ಥರು ಮತ್ತು ದಲಿತ ಪರ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಸಮಜಾಯಿಸಿದರು.ಹುಚ್ಚಾಟ: ಗ್ರಾಮದಲ್ಲಿ ಕೃತ್ಯ ನಡೆದಿರುವದು ಬೆಳಕಿಗೆ ಬರುತ್ತಿದ್ದಂತೆ ಮತಿಹೀನ ಮಹಿಳೆ ಶರಣಮ್ಮ ಹುಚ್ಚಾಟ ನಡೆಸಿ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ಗ್ರಾಮಸ್ಥರಿಗೆ ತಿರುಗಿ ತಿರುಗಿದ್ದಾಳೆ, ಪೊಲೀಸರು ಸಹ ಕೃತ್ಯಕ್ಕೆ ಭಯ ಭೀತರಾಗಿದ್ದಾರೆ. ನಂತರ ಪೊಲಿಸರೇ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.