ಕನಕಗಿರಿ: ಯುವ ಸಮೂಹ ಅಂಬೇಡ್ಕರರ ಚಿಂತನೆಗಳಿಗಿಂತ ಅವರ ಪೂಜೆ, ಹೊಗಳುವಿಕೆಯಲ್ಲಿ ತೊಡಗಿ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆರಕ್ಷಕ ನಿರೀಕ್ಷಕ ವಿ.ನಾರಾಯಣ ಕಳವಳ ವ್ಯಕ್ತಪಡಿಸಿದರು.
ದಿನದ ಎಲ್ಲ ತಾಸುಗಳನ್ನು ಗ್ರಂಥಾಲಯದಲ್ಲಿ ಕಳೆಯುತ್ತಿದ್ದ ಅಂಬೇಡ್ಕರ್ ತನ್ನ ಜೀವನದ ಬಗ್ಗೆ ಎಂದಿಗೂ ಚಿಂತಿಸಿರಲಿಲ್ಲ. ಸಮಾಜದ ಒಳತಿಗಾಗಿ ೬೮ ದೇಶಗಳಿಗೆ ಸಂಚರಿಸುವ ಮೂಲಕ ವಿಶ್ವಕ್ಕೆ ಮಾದರಿಯಾಗುವಂತಹ ಸಂವಿಧಾನ ರಚಿಸಿ ದೇಶಕ್ಕೆ ಅರ್ಪಣೆ ಮಾಡಿದ್ದಾರೆ.ಮೇಧಾವಿ ಅಂಬೇಡ್ಕರರ ವಿಚಾರಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಅವರ ಹಾಕಿಕೊಟ್ಟ ಹಾದಿಯಲ್ಲಿ ನಡೆದು ದೇಶಕ್ಕೆ ಮತ್ತಷ್ಟು ಶಕ್ತಿ ನೀಡುವ ಮೂಲಕ ಭಾರತಮಾತೆ ಪರಮ ವೈಭದೆಡೆಗೆ ಮುಂದಾಗಬೇಕೆಂದು ತಿಳಿಸಿದರು.
ನಂತರ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಕುರಿತಾಗಿ ಗಂಗಾವತಿಯ ಎಸ್.ಕೆ.ಎನ್.ಜಿ ಕಾಲೇಜಿನ ಉಪನ್ಯಾಸಕ ಮಣಿಕಂಠ ಅಂಗಲ ಮಾತನಾಡಿ, ಅಂದಿನ ದಿನಗಳಲ್ಲಿ ಜ್ಞಾನದ ಹಸಿವು ಹೆಚ್ಚಿತ್ತು. ಇಂದು ಆ ಹಸಿವು ಸಮಾಜದಲ್ಲಿ ಕಾಣುತ್ತಿಲ್ಲ. ಕೆಕೆ, ಶಿಳ್ಳೆ, ಡಿಜೆ ಹಾಕಿ ಕುಣಿಯುವುದಕ್ಕಿಂತ ಅಂಬೇಡ್ಕರರ ಚಿಂತನೆ ಮುಖ್ಯವಾಗಿವೆ. ಅಂಬೇಡ್ಕರರನ್ನು ದಲಿತ ನಾಯಕ, ಕೆಳವರ್ಗದ ಪರವಾಗಿ ಹೋರಾಟ ಮಾಡಿದವರು ಎನ್ನುವುದಕ್ಕಿಂತ ಅವರೊಬ್ಬ ರಾಷ್ಟ್ರೀಯವಾದಿ ಉತ್ತಮ ಕೆಲಸ ಮಾಡಿದ್ದಾರೆ. ಇನ್ನೂ ರಾಜ್ಯದ ಐದು ಗ್ಯಾರಂಟಿಗಳಿಗೆ ಎಸ್ಸಿ ಹಾಗೂ ಎಸ್ಟಿ ಅನುದಾನ ಬಳಸಿಕೊಂಡಿರುವುದು ಸಂವಿಧಾನ ವಿರೋಧಿಯಾಗಿದೆ. ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವ ಕುರಿತು ಕಾಂಗ್ರೆಸ್ಸಿನ ಶಾಸಕ, ಸಂಸದರು ಧ್ವನಿ ಎತ್ತದೆ ಸಮುದಾಯಗಳ ವಿರೋಧಿ ನಡೆ ಕಾರಣವಾಗಿದ್ದಾರೆ ಎಂದು ಟೀಕಿಸಿದರು.ಪಪಂ ಅಧ್ಯಕ್ಷೆ ತನುಶ್ರೀ ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದಕ್ಕೂ ಮೊದಲು ಅಂಬೇಡ್ಕರ ವೃತ್ತಕ್ಕೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಭಾವಚಿತ್ರದ ಮೆರವಣಿಗೆ ಇಂದಿರಾ ನಗರ, ವಾಲ್ಮೀಕಿ ವೃತ್ತದ ಮಾರ್ಗವಾಗಿ ಕನಕಾಚಲಪತಿ ದೇವಸ್ಥಾನದವರೆಗೆ ನಡೆಯಿತು.
ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ: ಮೆರವಣಿಗೆ ಸಾಗುವ ರಸ್ತೆಯಲ್ಲಿ ಸ್ವಚ್ಛಗೊಳಿಸದೇ ಇರುವುದು ಹಾಗೂ ನೀರು ಹಾಯಿಸದೆ ಇರುವುದಕ್ಕೆ ಪಪಂ ಮುಖ್ಯಾಧಿಕಾರಿ ವಿರುದ್ಧ ಸದಸ್ಯ ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡದ ಆಕ್ರೋಶ ವ್ಯಕ್ತಪಡಿಸಿದರು. ಬೇಜವಾಬ್ದಾರಿ ತೋರಿದ ಮುಖ್ಯಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ಇದಕ್ಕೆ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ತಹಸೀಲ್ದಾರರು ನೋಟಿಸ್ ನೀಡಲಾಗುವುದು ಎಂದು ಸಮಜಾಯಿಷಿ ನೀಡುತ್ತಿದ್ದಂತೆ ಕಾರ್ಯಕ್ರಮ ಆರಂಭಗೊಂಡಿತು.