ಕೇಂದ್ರ ಗೃಹ ಸಚಿವ ಅಮಿತ್ ಶಾ, ಬುಧವಾರ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಮತಯಾಚಿಸಿದರು.
ರಾಣಿಬೆನ್ನೂರು/ಹುಬ್ಬಳ್ಳಿ : ಮೇ 7ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬುಧವಾರ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಮತಯಾಚಿಸಿದರು. ಇದಕ್ಕೂ ಮೊದಲು ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬೃಹತ್ ರೋಡ್ ಶೋ ನಡೆಸಿದರು.
ಸಂಜೆ 5ರ ಸುಮಾರಿಗೆ ರಾಣಿಬೆನ್ನೂರಿಗೆ ಆಗಮಿಸಿದ ಶಾ, ಸುಮಾರು ಒಂದು ಕಿ.ಮೀ.ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಮತ ಯಾಚಿಸಿದರು. ಈ ವೇಳೆ, ದಾರಿಯುದ್ದಕ್ಕೂ ಅಪಾರ ಜನಸಾಗರ ಸೇರಿತ್ತು. ಪ್ರಾರಂಭದಿಂದ ಕೊನೆಯವರೆಗೂ ಅಮಿತ್ ಶಾ ಅವರು ಜನರತ್ತ ಗುಲಾಬಿ ಹೂಗಳನ್ನು ಎಸೆದು ಹುರಿದುಂಬಿಸಿದರು. ಜನರ ಕೈಯಲ್ಲಿ ಕೇಸರಿ, ಜೆಡಿಎಸ್ ಬಾವುಟಗಳು ಹಾರಾಡುತ್ತಿದ್ದವು. ಜನರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಅಮಿತ್ ಶಾ ಫೋಟೋ ಕ್ಲಿಕ್ಕಿಸುತ್ತಾ ಅವರ ಬಗ್ಗೆ ತಮಗಿರುವ ಅಭಿಮಾನ ಪ್ರದರ್ಶಿಸಿದರು. ಎಲ್ಲ ಕಡೆ ಜೈ ಶ್ರೀರಾಮ್, ಅಮಿತ್ ಶಾ, ಮೋದಿ ಮೋದಿ ಘೋಷಣೆಗಳು ಕೇಳಿ ಬಂದವು. ಯಾತ್ರೆಯ ಕೊನೆಯಲ್ಲಿ 5 ನಿಮಿಷ ಮಾತನಾಡಿ, ಕಮಲದ ಬಟನ್ ಒತ್ತಿ, ಬೊಮ್ಮಾಯಿಗೆ, ಮೋದಿಗೆ ಓಟ್ ಹಾಕಿದಂತಾಗುತ್ತದೆ ಎಂದು ಮನವಿ ಮಾಡಿದರು ಬಸವರಾಜ ಬೊಮ್ಮಾಯಿ, ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮತ್ತಿತರರು ಶಾಗೆ ಸಾಥ್ ನೀಡಿದರು.
ಬಳಿಕ, ಹುಬ್ಬಳ್ಳಿಗೆ ಆಗಮಿಸಿ, ನಗರದ ನೆಹರು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಜೋಶಿ ಪರ ಮತಯಾಚಿಸಿದರು. ಬಡೇ ನೇತಾ ಪ್ರಹ್ಲಾದ್ ಜೀ.. ಎಂದು ಸಂಭೋದಿಸಿ ಭಾಷಣ ಆರಂಭಿಸಿದ ಶಾ, ತಿರಂಗಾ ಹೋರಾಟದ (ಈದ್ಗಾ ಮೈದಾನ) ಮೂಲಕ ರಾಜಕೀಯಕ್ಕೆ ಬಂದ ನೇತಾ ಜೋಶಿ ಅವರು ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಅಭಿವೃದ್ಧಿ ಮಾಡಿದ್ದಾರೆ. ಕರೋನಾ ಸಂದರ್ಭದಲ್ಲಿ ನಮ್ಮೊಂದಿಗೆ ಜಗಳವಾಡಿ ಕರ್ನಾಟಕಕ್ಕೆ ಹೆಚ್ಚಿನ ಲಸಿಕೆ ತಂದುಕೊಟ್ಟ ಆಪದ್ಭಾಂದವ ಪ್ರಹ್ಲಾದ ಜೋಶಿ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ದಿಲ್ಲಿಗೆ ಕಳುಹಿಸಿ. ನರೇಂದ್ರ ಮೋದಿ ಸಂಪುಟದಲ್ಲಿ ಜೋಶಿಯವರು ದೊಡ್ಡ ಹುದ್ದೆ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದರು. ಈ ವೇಳೆ, ಮೋದಿ ಮೋದಿ, ಜೋಶಿ ಜೋಶಿ, ಜೈ ಶ್ರೀರಾಮ ಜೈ ಶ್ರೀರಾಮ ಎಂಬ ಘೋಷಣೆಗಳು ಕೇಳಿ ಬಂದವು.