ಕನ್ನಡಪ್ರಭ ವಾರ್ತೆ ಮಂಗಳೂರು ‘ನನ್ನ ಮಣ್ಣು ನನ್ನ ದೇಶ’ಅಮೃತ ಕಳಶ ಯಾತ್ರೆಯ ಅಂಗವಾಗಿ ದ.ಕ.ಜಿಲ್ಲೆಯ 14 ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಅಮೃತ ಕಳಶಗಳನ್ನು ರಾಷ್ಟ್ರ ಮಟ್ಟದ ಕಾರ್ಯಕ್ರಮಕ್ಕೆ ಕಳುಹಿಸಲು ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿಯಲ್ಲಿ ಅ.30 ಮತ್ತು 31ರಂದು ಕಾರ್ಯಕ್ರಮ ನಡೆಯಲಿದ್ದು, ದ.ಕ.ಜಿಲ್ಲೆಯ ಪವಿತ್ರ ಸ್ಥಳಗಳಿಂದ ಸಂಗ್ರಹಿಸಿದ ಹಿಡಿ ಮಣ್ಣನ್ನು ಮಕ್ಕಳು ದೆಹಲಿಗೆ ತಲುಪಿಸಲಿದ್ದಾರೆ. ದ.ಕ.ಜಿಲ್ಲೆಯ ವಿವಿಧ ಶಾಲೆಗಳ 14 ಮಕ್ಕಳು ಗುರುವಾರ ಮಂಗಳೂರಿನಿಂದ ಹೊರಟು ಶುಕ್ರವಾರ ಬೆಂಗಳೂರು ತಲುಪಲಿದ್ದಾರೆ. ಅಲ್ಲಿಂದ ರೈಲಿನಲ್ಲಿ ದೆಹಲಿಗೆ ತೆರಳಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿ, ತವರು ಜಿಲ್ಲೆಯ ಸಾಂಸ್ಕೃತಿಕತೆಯನ್ನು ಬಿಂಬಿಸಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದ ನಂತರ ನ.1ರಂದು ಊರಿಗೆ ಮರಳಲಿದ್ದಾರೆ. ದ.ಕ.ಜಿಲ್ಲೆಯ ಬಜಪೆ, ಬಂಟ್ವಾಳ, ಬೆಳ್ತಂಗಡಿ, ಕಡಬ, ಕಿನ್ನಿಗೋಳಿ, ಕೋಟೆಕಾರ್, ಮಂಗಳೂರು, ಮೂಡುಬಿದಿರೆ, ಮೂಲ್ಕಿ, ಪುತ್ತೂರು, ಸೋಮೇಶ್ವರ, ಸುಳ್ಯ, ಉಳ್ಳಾಲ ಹಾಗೂ ವಿಟ್ಲ ಸ್ಥಳೀಯಾಡಳಿತಗಳಿಂದ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಮಂಗಳೂರು ಕೆಂಜಾರು ಶ್ರೀದೇವಿ ಕಾಲೇಜ್ ಆಫ್ ಫಾರ್ಮಸಿಯ ರಕ್ಷಿತ್, ಮೊಡಂಕಾಪು ಕಾರ್ಮೆಲ್ ಕಾಲೇಜಿನ ಜಸ್ವಿತಾ ಜೋಸ್ನಾ ಕೊಯೆಲೊ, ಬೆಳ್ತಂಗಡಿ ಸರ್ಕಾರಿ ಪಿಯು ಕಾಲೇಜಿನ ಕಿಶೋರ್, ಕಡಬ ಸರ್ಕಾರಿ ಪಿಯು ಕಾಲೇಜಿನ ಸಂದೀಪ್, ತಲಪಾಡಿ ಪೊಂಪೈ ಪಿಯು ಕಾಲೇಜಿನ ರೋಲ್ವಿನ್ ವಿನ್ಸನ್ ಡಿಸೋಜಾ, ಹೆಬಿಕ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಷನ್ನ ವಿಕಾಸ್, ಮಂಗಳೂರು ಡೊಂಗರಕೇರಿ ಕೆನರಾ ಕಾಲೇಜಿನ ರವಿಶಂಕರ್, ಮೂಡುಬಿದಿರೆ ಜೈನ್ ಪಿಯು ಕಾಲೇಜಿನ ಸಾಯಿನಾಥ್ ಪೂಜಾರಿ, ಮೂಲ್ಕಿ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಜ್ವಲ್, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸುದರ್ಶನ್, ಸೋಮೇಶ್ವರ ಪರಿಜ್ಞಾನ ಪಿಯು ಕಾಲೇಜಿನ ಗಗನ್, ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲೋಹಿತ್, ಉಳ್ಳಾಲ ಅಲೇಕಲ ಸಯ್ಯದ್ ಮದನಿ ಪಿಯು ಕಾಲೇಜಿನ ಮುಬಾಸಿರ್ ಹಾಗೂ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ದರ್ಶನ್ ಈ ವಿದ್ಯಾರ್ಥಿಗಳು ದೆಹಲಿಗೆ ತೆರಳಿದ್ದಾರೆ.