ದಲಿತ ಸಾಹಿತ್ಯ ಪರಿಷತ್ ವತಿಯಿಂದ ಕವಿಗೋಷ್ಠಿ
ಕವಿತೆಯ ಹುಟ್ಟಿಗೆ ಕವಿ ಮನಸ್ಸು ಬೇಕು, ಕವಿತೆ ಎನ್ನುವುದು ಹುಟ್ಟುವುದೇ ಹೊರತು ಅದನ್ನ ಕಟ್ಟಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಕವಿ ಮನಸ್ಸಿರಬೇಕು ಎಂದು ಸಾಹಿತಿ ಮದ್ದೂರು ದೊರೆಸ್ವಾಮಿ ಹೇಳಿದರು.
ದಲಿತ ಸಾಹಿತ್ಯ ಪರಿಷತ್, ಸಾಹಿತ್ಯ ಮಿತ್ರಕೂಟದ ವತಿಯಿಂದ ಮುಳ್ಳೂರು ಶಿವಮಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿ, ಇಂದು ಕೊಳ್ಳೇಗಾಲ ಮತ್ತು ಮುಳ್ಳೂರು ಶಿವ ಮಲ್ಲು ಅಭಿಮಾನಿ ಬಳಗ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇಂದಿನ ಯುವ ಕವಿಗಳು ಗೋಷ್ಠಿಯಲ್ಲಿ ತಮ್ಮ ಅಂತರಾಳದ ಭಾವನೆಗೆ ನುಡಿ ಕೊಟ್ಟಿವೆ, ಕವಿ ಹೃದಯವನ್ನು ಅರಳಿಸಿದ ಇಂತಹ ಆಚರಣೆ ಅನುಕರಣ ಯೋಗ್ಯವಾದುದು ಎಂದು ಹೇಳಿದರು.ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಗುರುರಾಜ ಜರಗನಹಳ್ಳಿ ಮಾತನಾಡಿ, ಮುಳ್ಳೂರು ಶಿವಮಲ್ಲು ಅವರು ವಿದ್ಯಾಭ್ಯಾಸದ ದಿನದಿಂದಲೂ ಹೋರಾಟಗಳಲ್ಲಿ ಮುಂಚೂಣಿ ನಾಯಕತ್ವ ವಹಿಸಿ ಅನೇಕರಿಗೆ ನ್ಯಾಯ ದೊರಕಿಸಿಕೊಟ್ಡಿದ್ದಾರೆ, ಅವರೊಬ್ಬ ರಾಜಕಾರಣಿಯಾಗಿ ತುಳಿತಕ್ಕೆ ಒಳಗಾದವರ ಹಾಗೂ ದುಡಿಯುವ ಮನಸ್ಸುಳ್ಳವರು. ಇವರಿಗೆ ಎಲ್ಲ ಕಡೆಯಿಂದಲೂ ಅವಕಾಶ ವಂಚನೆಯಾಗಿದೆ. ಇಂತಹ ಅವಕಾಶ ವಂಚಿತ ನಾಯಕನಿಗೆ ಅವಕಾಶ ನೀಡದಿರುವುದು ವ್ಯವಸ್ಥೆಯ ದೌರ್ಬಲ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಪಳನಿಸ್ವಾಮಿ ಜಾಗೇರಿ, ಶೇಷಗಿರಿ, ಪ್ರೇಮಕುಮಾರಿ, ಕೋಮಲಾ ಸುರೇಶ್, ಕಾತ್ಯಾಯಿನಿ, ಮಹದೇವ ನಿಟ್ರೆ, ಕಾಳಿಂಗ ಸ್ವಾಮಿ, ಶಂಕರ ಅಂಕಣಶೆಟ್ಟಿ ಪುರ, ಶುಭಾಷ್ ಮಡ್ರಳ್ಳಿ, ವಿಶ್ವನಾಥ್ ಮುಂತಾದವರು ಪಾಲ್ಗೊಂಡು ಕವಿತೆ ವಾಚಿಸಿ ಗಮನ ಸೆಳೆದರು. ಮೈಸೂರಿನ ಜನಪದ ನಕ್ಷತ್ರಗಳು ತಂಡದಿಂದ ಕ್ರಾಂತಿ ಗೀತೆಗಳು ಗಾಯನ ಕಾರ್ಯಕ್ರಮ ನೆರೆದಿದ್ದವರನ್ನು ಆಕರ್ಷಿಸಿತು.
ಶಿವಮಲ್ಲು ಅಭಿಮಾನಿ ಬಳಗದ ಅಧ್ಯಕ್ಷ ನಿತಿನ್ ಕುಮಾರ್, ರಾಚಪ್ಪಾಜಿ, ಪ್ರಸನ್ನ, ದೊಡ್ಡ ಲಿಂಗೇಗೌಡ, ಸುಂದರೇಶ್, ಶಿಕ್ಷಕ ಆನಂದರಾಜು ಇತರರಿದ್ದರು.