ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ವ್ಯಾಪ್ತಿಯ ಹದಿನೈದನೇ ವಾರ್ಡ್ಗೆ ಸೇರಿದ ಕುವೆಂಪು ನಗರದ ಉದ್ಯಾನವನದಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತ ಕಟ್ಟಡ ನಿರ್ಮಿಸಿದ್ದಾರೆ. ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ರಜಾ ದಿನಗಳನ್ನು ದುರುಪಯೋಗಪಡಿಸಿಕೊಂಡು ರಾತ್ರೋರಾತ್ರಿ ಕಟ್ಟಡ ತಲೆಎತ್ತುವಂತೆ ಮಾಡಿದ್ದಾರೆ.ಉದ್ಯಾನವನದೊಳಗೆ ನಿಯಮಾನುಸಾರ ಯಾವುದೇ ಕಟ್ಟಡ ನಿರ್ಮಾಣಕ್ಕೆ ಕಾನೂನು ವ್ಯಾಪ್ತಿಯೊಳಗೆ ಅವಕಾಶವಿಲ್ಲ. ಉದ್ಯಾನದ ಜಾಗವನ್ನು ಉದ್ಯಾನವನದ ಅಭಿವೃದ್ಧಿಗಷ್ಟೇ ಸೀಮಿತವಾಗಿಡಬೇಕೆಂಬ ನಿಯಮವಿದೆ. ಆದರೂ ಕುವೆಂಪು ನಗರದ ಉದ್ಯಾನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವವರು ಪ್ರಭಾವಿಗಳಾಗಿರುವುದರಿಂದ ಅವರನ್ನು ಎದುರಿಸಲಾಗದೆ ನಗರಸಭೆ ಅಧಿಕಾರಿಗಳು ಮೌನ ವಹಿಸಿದ್ದು, ರಾಜಕೀಯ ಪ್ರಭಾವಕ್ಕೆ ಮಣಿದಿರುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಮೂರು ದಿನಗಳ ರಜಾ ಅವಧಿಯಲ್ಲಿ ಕಟ್ಟಡದ ಆರ್ಸಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿರುವುದು ಕಂಡುಬಂದಿದೆ. ರಜಾ ದಿನಗಳನ್ನು ನೋಡಿಕೊಂಡೇ ಕಳೆದೊಂದು ವರ್ಷದಿಂದ ಹಂತ ಹಂತವಾಗಿ ಕಾಮಗಾರಿಯನ್ನು ನಡೆಸುತ್ತಾ ಬರಲಾಗುತ್ತಿದೆ. ಸದ್ಯ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಕಾಮಗಾರಿಯನ್ನು ಮುಂದುವರೆಸದಂತೆ ಅವರಿಗೆ ಸೂಚನೆ ನೀಡಿದ್ದಾರೆ.ಉದ್ಯಾನವನದೊಳಗೆ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ವಾರ್ಡ್ನ ಸದಸ್ಯೆ ವೈ.ಜೆ.ಮೀನಾಕ್ಷಿ ಅವರು ೫ ಸೆಪ್ಟೆಂಬರ್ ೨೦೨೪ರಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಪಿಲ್ಲರ್ ಹಾಕಲು ತೆಗೆಯಲಾಗಿದ್ದ ಗುಂಡಿಗಳನ್ನೆಲ್ಲಾ ನಗರಸಭೆಯವರು ಮುಚ್ಚಿಸಿದ್ದರು. ಮತ್ತೆ ೪ ಏಪ್ರಿಲ್ ೨೦೨೫ರಂದು ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ನಿರ್ಮಿಸಲು ಜೆಸಿಬಿಯನ್ನು ಬಳಕೆ ಮಾಡಿ ಗುಂಡಿ ತೆಗೆದಿದ್ದು ಇದನ್ನು ಗಮನಿಸಿ ಕಾಮಗಾರಿ ನಿರ್ಬಂಧಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದಾಗ ಅಭಿಯಂತರ ರಾಜೇಗೌಡ ಸ್ಥಳಕ್ಕೆ ಆಗಮಿಸಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ್ದರೂ ಮತ್ತೆ ಮರುದಿನದಿಂದ ಕಾಮಗಾರಿ ನಿರಾತಂಕವಾಗಿ ಮುಂದುವರೆದಿತ್ತು. ಈ ಸಮಯದಲ್ಲಿ ಯಾರೊಬ್ಬರೂ ನಿಯಮಬಾಹೀರವಾಗಿ ನಡೆಯುತ್ತಿರುವ ಕಾಮಗಾರಿಯನ್ನು ತಡೆದು ಗುಂಡಿ ಅಗೆತಕ್ಕೆ ಬಳಸುತ್ತಿರುವ ಜೆಸಿಬಿಯನ್ನು ವಶಕ್ಕೆ ಪಡೆಯುವ ಧೈರ್ಯ ಪ್ರದರ್ಶಿಸಲಿಲ್ಲವೆಂದು ಮೀನಾಕ್ಷಿ ಅವರು ಆರೋಪಿಸಿದ್ದಾರೆ.
ನಗರಸಭೆ ಆಸ್ತಿಯಾಗಿರುವ ಉದ್ಯಾನವನದಲ್ಲಿ ಖಾಸಗಿ ಸಂಸ್ಥೆಗಳು, ಟ್ರಸ್ಟ್ಗಳು ಹಾಗೂ ವ್ಯಕ್ತಿಗಳು ಕಟ್ಟಡ ನಿರ್ಮಿಸಲು ಅವಕಾಶವೇ ಇಲ್ಲದಿರುವಾಗ ಕುವೆಂಪು ನಗರದ ಉದ್ಯಾನವನದಲ್ಲಿ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರುವುದೇಕೆ. ಉದ್ಯಾನವನ ಸಂರಕ್ಷಿಸುವುದು ನಗರಸಭೆ ಅಧಿಕಾರಿಗಳ ಕರ್ತವ್ಯ, ಹೊಣೆಗಾರಿಕೆಯಾಗಿದ್ದರೂ ಅದರಿಂದ ನುಣುಚಿಕೊಳ್ಳುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಆರಕ್ಷಕ ಠಾಣೆಗೆ ದೂರು ನೀಡದೆ ದೂರ ಉಳಿದಿರುವುದು ಅಧಿಕಾರಿಗಳ ಕರ್ತವ್ಯಲೋಪವಾಗಿದೆ. ಉದ್ಯಾನವನದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ವಾಯುವಿಹಾರಿಗಳು ಕೂರಲು ಅಳವಡಿಸಿದ್ದ ಕಲ್ಲುಬೆಂಚುಗಳು ಮತ್ತು ವಾಕಿಂಗ್ ಟ್ರ್ಯಾಕ್ನಲ್ಲಿ ಅಳವಡಿಸಿದ್ದ ಟೈಲ್ಸ್ಗಳನ್ನು ನಾಶಗೊಳಿಸಿರುವ ಸಂಬಂಧ ಅಕ್ರಮ ಕಟ್ಟಡ ನಿರ್ಮಿಸುತ್ತಿರುವವರಿಂದ ದಂಡ ವಸೂಲಿ ಮಾಡುವಂತೆಯೂ ಆಗ್ರಹಪಡಿಸಿದ್ದಾರೆ.
ನಿಯಮಬಾಹಿರವಾಗಿ ನಡೆಯುತ್ತಿರುವ ಕಟ್ಟಡ ನಿರ್ಮಾಣದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು, ಪೌರಾಡಳಿತ ಇಲಾಖೆ ಆಯುಕ್ತರು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ನಗರಸಭೆ ಅಧ್ಯಕ್ಷರು-ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ಕೈಚೆಲ್ಲಿ ಕುಳಿತಿದ್ದಾರೆ ಎಂದು ದೂರಿದ್ದಾರೆ.ನಗರಸಭೆ ಅಧಿಕಾರಿಗಳು ಅನುಸರಿಸುತ್ತಿರುವ ನಡೆಯನ್ನು ನೋಡಿದರೆ ನಗರದಲ್ಲಿರುವ ಯಾವುದೇ ಉದ್ಯಾನವನದಲ್ಲಿಲ್ಲದ ಮಾನ್ಯತೆ, ರಿಯಾಯಿತಿ ಕುವೆಂಪುನಗರದ ಉದ್ಯಾನವನಕ್ಕೆ ನೀಡುತ್ತಿರುವುದೇಕೆ. ಇಲ್ಲಿ ಕಾಮಗಾರಿ ನಡೆಸುತ್ತಿರುವ ಖಾಸಗಿ ವ್ಯಕ್ತಿಗಳಿಗೆ ಸರ್ಕಾರದ ನಿಯಮ ಅನ್ವಯಿಸುವುದಿಲ್ಲವೇ. ಇದರ ಹಿಂದೆ ಇರುವ ಷಡ್ಯಂತ್ರವಾದರೂ ಏನು ಎಂದು ಪ್ರಶ್ನಿಸಿದ್ದಾರೆ.ನಗರಸಭೆಗೆ ತಲೆನೋವಾಗಿರುವ ಕಟ್ಟಡ
ಕುವೆಂಪುನಗರದ ಉದ್ಯಾನವನದಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡ ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ. ಈಗ ತಲೆಎತ್ತಿರುವ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿರುವ ಬೇರೆ ಬೇರೆ ಉದ್ಯಾನವನಗಳಲ್ಲೂ ಕಟ್ಟಡ ನಿರ್ಮಾಣವಾಗುವ ಸಾಧ್ಯತೆಗಳಿವೆ. ಇದರಿಂದ ಉದ್ಯಾನವನಗಳೊಳಗೆ ಅಕ್ರಮ ಕಟ್ಟಡಗಳು ತಲೆಎತ್ತಿದರೆ ಏನು ಮಾಡುವುದು ಎಂಬ ಬಗ್ಗೆ ಅಧಿಕಾರಿಗಳ ಸಭೆ ಕರೆದು ಅಧ್ಯಕ್ಷರು-ಆಯುಕ್ತರು ಚರ್ಚಿಸಿದರು. ಖಾಸಗಿ ವ್ಯಕ್ತಿಗಳು ಪ್ರಭಾವಿಗಳಾಗಿದ್ದಾರೆ. ರಜಾ ದಿನಗಳಲ್ಲೇ ಕಾಮಗಾರಿಯನ್ನು ನಡೆಸುತ್ತಾ ಸಾಗಿದರೆ ಏನು ಮಾಡುವುದು ಎನ್ನುವುದು ಅಧಿಕಾರಿಗಳಿಗೆ ತಲೆಬಿಸಿ ಉಂಟುಮಾಡಿದೆ.ಉದ್ಯಾನವನ ಜಾಗವನ್ನು ಉದ್ಯಾನ ಅಭಿವೃದ್ಧಿಗಷ್ಟೇ ಸೀಮಿತವಾಗಿಡಬೇಕು. ಅಲ್ಲಿ ಕಟ್ಟಡ ಕಾಮಗಾರಿಗಳನ್ನು ನಡೆಸಲು ಕಾನೂನಿನೊಳಗೆ ಅವಕಾಶವಿಲ್ಲ. ಕಟ್ಟಡ ನಿರ್ಮಿಸುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ ಅವರು ದೂರು ಸ್ವೀಕರಿಸುತ್ತಿಲ್ಲ. ಉದ್ಯಾನವನ ನಗರಸಭೆಗೆ ಸೇರಿದ ಆಸ್ತಿಯಾಗಿದ್ದು, ಖಾಸಗಿ ವ್ಯಕ್ತಿಗಳು ನಮ್ಮಿಂದ ಯಾವುದೇ ಅನುಮತಿ ಪತ್ರವನ್ನು ಪಡೆದುಕೊಂಡಿಲ್ಲ. ರಾತ್ರೋರಾತ್ರಿ ಕಟ್ಟಡ ನಿರ್ಮಿಸಿದ್ದರೂ ಅದನ್ನು ನಗರಸಭೆ ಸ್ವಾಧೀನಕ್ಕೆ ಪಡೆದು ಸಾರ್ವನಿಕ ಉದ್ದೇಶಗಳಿಗೆ ಸೀಮಿತವಾಗಿ ಬಳಸಿಕೊಳ್ಳಲಾಗುವುದು.- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆರಜಾದಿನವಾಗಿದ್ದರೂ ಅಕ್ರಮ ಕಟ್ಟಡ ಕಾಮಗಾರಿ ನಡೆಯುತ್ತಿರುವ ವಿಷಯ ತಿಳಿದು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ನಿಲ್ಲಿಸಿದ್ದಾರೆ. ಮುಂದೆ ಕಾಮಗಾರಿ ನಡೆಸದಂತೆ ನಿರ್ದಿಷ್ಟ ಸೂಚನೆಯನ್ನೂ ನೀಡಿದ್ದಾರೆ. ಮತ್ತೆ ಕಾಮಗಾರಿ ಮುಂದುವರೆಸಿದರೆ ೧೯೬೪ರ ನಿಯಮದಂತೆ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು.
- ಪಂಪಾಶ್ರೀ, ಆಯುಕ್ತರು, ನಗರಸಭೆ