- ಅಖಿಲ ಭಾರತ ಕಿಸಾನ್ ಸಭಾ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಚಿಂತಕ ರಾಮಚಂದ್ರಪ್ಪ
ಕನ್ನಡಪ್ರಭ ವಾರ್ತೆ ಹರಿಹರ
ಭಾರತ ಮತ್ತು ಕರ್ನಾಟಕದಲ್ಲಿ ಜಾರಿಯಲ್ಲಿರುವ ಉದಾರೀಕರಣದ ಆರ್ಥಿಕ ನೀತಿಗಳು ಸಾಮಾನ್ಯ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿವೆ. ಇವುಗಳ ವಿರುದ್ಧ ಶ್ರಮಿಕ ವರ್ಗವು ಒಗ್ಗೂಡದಿದ್ದರೆ ಭವಿಷ್ಯದ ಬದುಕು ಮತ್ತಷ್ಟು ದುಸ್ತರವಾಗಲಿದೆ ಎಂದು ಚಿಂತಕ ಎ.ಬಿ. ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.ಹರಿಹರದ ಬಳಿಯ ಮೈತ್ರಿವನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಖಿಲ ಭಾರತ ಕಿಸಾನ್ ಸಭಾ ರಾಜ್ಯಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜಾಗತೀಕರಣ ಬದುಕು ಕಬಳಿಸುವ ಶಕ್ತಿಯಾಗಿದೆ. ಜಾಗತೀಕರಣ ಕೇವಲ ಆರ್ಥಿಕ ಸುಧಾರಣೆಯಲ್ಲ. ಅದು ಸಾಮಾನ್ಯ ರೈತರು ಮತ್ತು ಕಾರ್ಮಿಕರ ಬದುಕನ್ನು ನುಂಗಿ ನೀರು ಕುಡಿಯುತ್ತಿರುವ ರಾಕ್ಷಸೀಶಕ್ತಿಯಾಗಿ ಮಾರ್ಪಟ್ಟಿದೆ. ಕಳೆದ ಕೆಲವು ದಶಕಗಳ ಆರ್ಥಿಕ ನೀತಿಗಳಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ಹೆಚ್ಚಾಗುತ್ತಲೇ ಇದೆ. ಇದರ ವಿರುದ್ದ ಶ್ರಮಿಕ ವರ್ಗದ ಮಹಾಒಕ್ಕೂಟ ಅನಿವಾರ್ಯ ಎಂದರು.
ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿವೆ. ನಮ್ಮ ನಾಡಿನ ಹಿತಾಸಕ್ತಿ ಹಾಗೂ ಅಸ್ಮಿತೆ ಕಾಪಾಡಿಕೊಳ್ಳಲು ನಮ್ಮ "ನೆಲ, ಜಲ ಮತ್ತು ಸಂಸ್ಕೃತಿ "ಯನ್ನು ಈ ಕಂಪನಿಗಳ ಹಿಡಿತದಿಂದ ಮುಕ್ತಗೊಳಿಸಬೇಕಿದೆ. ಆಳುವ ವರ್ಗವು ಜನರ ಅಸಹಾಯಕತೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಆದ್ದರಿಂದ ರೈತರು ಮತ್ತು ಕಾರ್ಮಿಕರು ಕೇವಲ ಆರ್ಥಿಕ ಬೇಡಿಕೆಗಳಿಗಾಗಿ ಪ್ರತಿಭಟಿಸದೇ, ರಾಜಕೀಯ ಅಧಿಕಾರ ಮತ್ತು ಸಾಂವಿಧಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕೃಷಿ ಕ್ಷೇತ್ರದ ವ್ಯಾಪಾರೀಕರಣವನ್ನು ತಡೆಯಲು ಜನಪದ ಚಳವಳಿಗಳು ಮರುಜೀವ ಪಡೆಯಬೇಕಿದೆ. ಶ್ರಮಿಕ ವರ್ಗವು ಸಂಘಟಿತವಾಗಿ ಹೋರಾಡಿದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಪಿ.ವಿ. ಲೋಕೇಶ, ಜಿಲ್ಲಾಧ್ಯಕ್ಷ ಎಚ್.ಜಿ. ಉಮೇಶ ಹಾಗೂ ಹರಿಹರ ತಾಲೂಕು ಸಿಪಿಐ ಕಾರ್ಯದರ್ಶಿ ಎಚ್.ಕೆ. ಕೊಟ್ರಪ್ಪ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು.- - -
(ಕೋಟ್) ಇಂದಿನ ಕಾಲಘಟ್ಟದಲ್ಲಿ ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ ಮತ್ತು ಮಹಿಳಾ ಚಳವಳಿಗಳು ತಮ್ಮ ಪ್ರತ್ಯೇಕತೆ ಮರೆತು ಒಂದಾಗಬೇಕಿದೆ. ಕಾರ್ಪೊರೇಟ್ ಶಕ್ತಿಗಳ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸಲು ಈ ಎಲ್ಲ ಹೋರಾಟಗಳು ಒಂದೇ ಸೂರಿನಡಿ ಬರುವುದು ಇಂದಿನ ತುರ್ತು ಅಗತ್ಯವಾಗಿದೆ.- ಎ.ಬಿ. ರಾಮಚಂದ್ರಪ್ಪ, ಚಿಂತಕ.
- - --02HRR.03:
ಹರಿಹರದ ಬಳಿಯ ಮೈತ್ರಿವನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಖಿಲ ಭಾರತ ಕಿಸಾನ್ ಸಭಾ ರಾಜ್ಯಮಟ್ಟದ ಅಧ್ಯಯನ ಶಿಬಿರವನ್ನು ಚಿಂತಕ ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿ ಮಾತನಾಡಿದರು.