ಕನ್ನಡಪ್ರಭ ವಾರ್ತೆ ರಾಮನಾಥಪುರಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು, ಬೆಳವಣಿಗೆಗೆ ನಮ್ಮ ಸಮಾಜ ಸದಾ ಬದ್ಧವಾಗಿದೆ. ಮಠಮಂದಿರಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವ ಕೇಂದ್ರಗಳಾಗಿವೆ. ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಏಕೀಕರಿಸುವ ಶಕ್ತಿಯಾಗಿದೆ ಎಂದು ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಹೇಳಿದರು. ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಮಹಾಸಂಸ್ಥಾನ ಮಠದಲ್ಲಿ ನಡೆದ ಸಾಮೂಹಿಕ ಉಪನಯನ ಉಭಯ ಗುರುದ್ವಯರ ದಿವ್ಯಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಸತ್ಕಾರ್ಯಗಳಿಗೆ ಸದ್ಭಳಕೆ ಮಾಡಿಕೊಳ್ಳಬೇಕು, ಪ್ರಾಣಿಪಕ್ಷಿಗಳಿಗೆ ಸಾಮಾನ್ಯ ಜ್ಞಾನ ನೀಡಿರುವ ಭಗವಂತ ಮನುಷ್ಯನಿಗೆ ಮಾತ್ರ ಉನ್ನತ ಜ್ಞಾನಾರ್ಜನೆ ಕರುಣಿಸಿದ್ದಾನೆ. ಮನುಷ್ಯ ಉನ್ನತ ಅಲೋಚನೆ ಬೆಳೆಸಿಕೊಳ್ಳಬೇಕು. ಸತ್ಕಾರ್ಯಗಳು ಸದಾ ಕಾಲ ಶಾಶ್ವತವಾಗಿರುತ್ತವೆ. ದುಶ್ಚಟ ದುರಭ್ಯಾಸಗಳಿಂದ ದೂರವುಳಿದು ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.