ಪುರಾತನ ಪರಂಪರೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ

KannadaprabhaNewsNetwork |  
Published : Sep 14, 2026, 01:15 AM IST
 | Kannada Prabha

ಸಾರಾಂಶ

ಇತಿಹಾಸ ಮತ್ತು ಪರಂಪರೆಯನ್ನು ತಿಳಿದುಕೊಳ್ಳುವುದರಿಂದ ಆತ್ಮವಿಶ್ವಾಸ ಗಟ್ಟಿಗೊಳ್ಳುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ವಿ ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ಇತಿಹಾಸ ಮತ್ತು ಪರಂಪರೆಯನ್ನು ತಿಳಿದುಕೊಳ್ಳುವುದರಿಂದ ಆತ್ಮವಿಶ್ವಾಸ ಗಟ್ಟಿಗೊಳ್ಳುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ವಿ ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಅವರು ತುಮಕೂರು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ತುಮಕೂರು ಸಂಶೋಧಕರ ತಂಡ ತುಮಕೂರು, ಇತಿಹಾಸ ಸಂಕಲನ ಸಮಿತಿ, ಕರ್ನಾಟಕ ಇತಿಹಾಸ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಮತ್ತು ಇತಿಹಾಸ ದಿವಸ, ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ನಡೆಯುವ ಹತ್ತು ಕಾರ‍್ಯಕ್ರಮಗಳ ಉದ್ಘಾಟನಾ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ಪರಂಪರೆ ಸಂಸ್ಕೃತಿಯನ್ನು ಕೊಂಡುಕೊಳ್ಳಲಾಗದ ವಸ್ತುವಾಗಿದೆ. ಅದನ್ನು ಜೋಪಾನ ಮಾಡಬೇಕು. ಅಭಿವೃದ್ಧಿಯನ್ನು ಹಣದ ಮೂಲಕ ಅಳೆಯಬಾರದು. ಅದನ್ನು ನಾವು ಸಾಮಾಜಿಕ, ಐತಿಹಾಸಿಕ ದೃಷ್ಟಿಯಿಂದ ನೋಡಲು ಇತಿಹಾಸ ನಮಗೆ ಪಾಠ ಕಲಿಸುತ್ತದೆ. ನಮ್ಮ ಸಮಾಜ ಹಿಂದೆ ಹೇಗಿತ್ತು, ಈಗ ಹೇಗಿದೆ ಮುಂದೆ ಹೇಗಿರಬೇಕು ಎಂದು ನಮಗೆ ಇತಿಹಾಸ ತಿಳಿಸುತ್ತದೆ. ಚರಿತ್ರೆ ಮಾನವೀಯ ಮೌಲ್ಯ, ನೈತಿಕ ಮೌಲ್ಯಗಳನ್ನು ತಿಳಿಸುತ್ತದೆ, ಮನುಷ್ಯತ್ವದ ಮಾನವೀಯದ ಕೊಂಡಿಯಾಗಿರುವ ಚರಿತ್ರೆಯನ್ನು ಇಂದಿನ ಪೀಳಿಗೆ ತಿಳಿದು ಮುಂದಿನ ಪೀಳಿಗೆಗೆ ಪಸರಿಸುವ ಕಾರ‍್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವಿದ್ವಾಂಸರಾಗಿ ಮಾತನಾಡಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಪ್ರೊ. ದೇವರಕೊಂಡಾರೆಡ್ಡಿ ಅವರು ಕರ್ನಾಟಕ ಇತಿಹಾಸ ಅಕಾಡೆಮಿಯು ಕಳೆದ 40 ವರ್ಷಗಳಿಂದ ಕರ್ನಾಟಕದ ಇತಿಹಾಸ ಪರಂಪರೆಯ ಕುರಿತು ಅಧ್ಯಯನ, ಜಾಗೃತಿ ಮೂಡಿಸುತ್ತಾ ಬಂದಿದೆ. ತುಮಕೂರಿನ ಇತಿಹಾಸವು ಸಾವಿರಾರು ವರ್ಷಕ್ಕೂ ಹಳೆಯದಿದೆ. ತಾಲೂಕಿನ ಹಿರೇಗುಂಡಗಲ್ಲಿನಲ್ಲಿ ವೀರಗಲ್ಲು, ಶಾಸನಗಳನ್ನು ಸಂರಕ್ಷಣೆ ಮಾಡಿದ್ದಾರೆ ಈ ರೀತಿಯ ಕಾರ‍್ಯ ಕರ್ನಾಟಕದ ಮೂಲೆಮೂಲೆಗಳಲ್ಲಿ ಆಗಬೇಕು ಎಂದರು. ಶಾಸನಗಳು, ವೀರಗಲ್ಲು, ದೇವಾಲಯದ ಅಡಿಯಲ್ಲಿ ಯಾವುದೇ ನಿಧಿ ಇರುವುದಿಲ್ಲ ಇಂತಹ ಅಮೂಲ್ಯ ಇತಿಹಾಸವೇ ನಿಧಿ ಇದ್ದಂತೆ ಅದನ್ನು ಹಾಳುಮಾಡುವ ಅನೇಕ ದುರಂತ ಕೆಲಸ ಆಗುತ್ತಿದೆ ಇದು ನಡೆಯದಂತೆ ತಡೆಯಬೇಕು ಎಂದರು. ತುಮಕೂರು ವಿಶ್ವವಿದ್ಯಾಲಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಎಂ ಕೊಟ್ರೇಶ್ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ, ಈ ಪರಂಪರೆ ಜಾಗೃತಿ ಕಾರ‍್ಯಕ್ರಮದ ಉದ್ದೇಶ, ಭೌತಿಕ, ಅಭೌತಿಕ ಪರಂಪರೆ, ಜಲ ಪರಂಪರೆ, ಸಂಸ್ಕೃತಿ ಉಳಿಯಲು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಇದರ ಭಾಗವಾಗಿ ನಮ್ಮ ತುಮಕೂರು ಸಂಶೋಧಕರ ತಂಡದ ಇಪ್ಪತ್ತು ಜನ ಸದಸ್ಯರು ಈ ಇತಿಹಾಸ ಪರಂಪರೆ ಸಂರಕ್ಷಿಸುವ ಕಾರ‍್ಯ ಮಾಡುತ್ತಿದ್ದಾರೆ ಎಂದರು.

ಪ್ರಾಂಶುಪಾಲ ಡಾ. ಜಗದೀಶ್ ಸ್ವಾಗತಿಸಿದರು. ಇತಿಹಾಸ ಸಂಕಲನ ಸಮಿತಿಯ ಅಧ್ಯಕ್ಷ ಸಂಜೀವರೆಡ್ಡಿ ತಾಂಡ್ಲೆ, ತುಮಕೂರು ಸಂಶೋಧನಾ ತಂಡದ ಸದಸ್ಯರು ಹಾಗೂ ಶೇಷಾದ್ರಿಪುರಂ ಕಾಲೇಜಿನ ಬೋಧಕ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಕರೆಗೆ 20 ಸಾವಿರ ಪರಿಹಾರ ನೀಡಿ: ಜಿ.ಸಿ.ಶಂಕರಪ್ಪ ಒತ್ತಾಯ
ಜಾನಪದ ಕಲೆ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಿ: ಕೆ.ವಿ.ನವೀನ್ ಕಿರಣ್