ಜೆ. ನಾಗೇಂದ್ರ , ಕನ್ನಡಪ್ರಭ ವಾರ್ತೆ ಪಾವಗಡ
ಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ಬೆಲೆ ನಿಗದಿಪಡಿಸಿ ರೈತರು ಶೇಂಗಾ ಬಿತ್ತನೆ ಬೀಜ ವಿತರಿಸುತ್ತಿರುವ ಪರಿಣಾಮ ನೆಲಗಡಲೆ ಬಿತ್ತನೆ ಕಾಯಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಶೇ. 40ರಷ್ಟು ಬಿತ್ತನೆ ಕಡಲೇ ಕಾಯಿ ಆಂಧ್ರದ ಪಾಲಾಗುತ್ತಿದೆ ಎಂದು ರೈತರ ಮುಖಂಡರು ಆರೋಪಿಸಿದ್ದಾರೆ.ತಾಲೂಕಿನ ಶೇಂಗಾ ಪ್ರಧಾನ ವ್ಯವಸಾಯ ಬೆಳೆಯಾಗಿದ್ದು ಮುಂಗಾರು ಹಂಗಾಮು ಪ್ರಾರಂಭವಾದ ಪ್ರಯುಕ್ತ ಸಾವಿರಾರು ಹೆಕ್ಟೇರು ಪ್ರದೇಶದ ಜಮೀನುಗಳಲ್ಲಿ ರೈತರು ಉಳಿಮೆ ಮಾಡಿಕೊಂಡಿದ್ದಾರೆ. ಜೂ.ಮೊದಲನೇ ವಾರದಲ್ಲಿ ಶೇಂಗಾ, ತೊಗರಿ, ಅಲಸಂದಿ, ಮೆಕ್ಕೆ ಜೋಳ ಬಿತ್ತನೆಗೆ ಮುನ್ನುಡಿ ಬರೆಯಲು ರೈತರು ಅಣಿಯಾಗಿದ್ದರು. ಆದರೆ ಕಳೆದ ಸಾಲಿಗೆ ಮಳೆಯ ಅಭಾವದಿಂದ ಬೆಳೆ ಬರದೆ ಪ್ರಸಕ್ತ ಸಾಲಿಗೆ ನೆಲಗಡಲೆ ಬಿತ್ತನೆ ಬೀಜದ ಅಭಾವ ಸೃಷ್ಟಿಯಾಗಿದೆ. ಈಗಾಗಲೇ ಬಿತ್ತನೆ ಕಾಯಿಗಾಗಿ ರೈತರು ಪರದಾಟ ನಡೆಸಿದ್ದು, ಮೊದಲನೇ ಹಂತದಲ್ಲಿ ಸರ್ಕಾರದಿಂದ 750ಕ್ವಿಂಟಾಲ್ ಸಹಾಯ ಧನದ ಬಿತ್ತನೆ ಬೀಜ ಇಲ್ಲಿನ ಕೃಷಿ ಇಲಾಖೆಗೆ ಪೂರೈಕೆಯಾಗಿದೆ. ನೆಲಗಡಲೆ, ಮೆಕ್ಕಜೋಳ ಇತರೆ ಬಿತ್ತನೆ ಬೀಜವನ್ನು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಗೋಡನ್ಗಳಲ್ಲಿ ಸ್ಚಾಕ್ ಮಾಡಿದ್ದು, ಮಂಗಳವಾಡ, ಲಿಂಗದಹಳ್ಳಿ , ವೈ.ಎನ್ಹೊಸಕೋಟೆ ಹಾಗೂ ವೆಂಕಟಾಪುರ ಕೋಟಗುಡ್ಡ ಗ್ರಾಮದ ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ಸಹಾಯ ಧನದಲ್ಲಿ ಮಾರಾಟ ಮಾಡಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಶೇಂಗಾ ಬಿತ್ತನೆ ಕಾಯಿಯ ಬೆಲೆ 6500ರುಗಳಿಗೆ ಸಿಗಲಿದೆ. ಆದರೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ನಿಗದಿಪಡಿಸಿ ನಂತರ ಅದಕ್ಕೆ ಸಹಾಯಧನ ಸಹ ನೀಡುವ ಮೂಲಕ ಕೊಡುತ್ತಿರುವುದು ಇದರ ತಳಬುಡವೇ ಅರ್ಥವಾಗುತ್ತಿಲ್ಲ ಎಂಬುದು ರೈತರ ಅಳಲು. ಒಂದು ಕಡೆ ಕಡಿಮೆ ಇರುವ ಬೀಜಕ್ಕೆ ಹೆಚ್ಚಿನ ದರ ನೀಡಲಾಗುತ್ತಿರುವುದು ಯಾವ ಕಾರಣಕ್ಕೆ ಎಂದು ಸರ್ಕಾರವೇ ಬಹಿರಂಗಪಡಿಸಬೇಕಿದೆ ಎನ್ನುವುದು ರೈತರ ಆಗ್ರಹವಾಗಿದೆ.ಕಳೆದ 20ವರ್ಷದಿಂದ ಸಹಾಯ ಧನದ ಶೇಂಗಾ ಹಾಗೂ ಮತ್ತಿತರೆ ಬಿತ್ತನೆ ಬೀಜದ ವಿತರಣೆಯನ್ನು ಇಲ್ಲಿನ ರಾಜ್ಯ ಎಣ್ಣೆ ಕಾಳು ಬೀಜ ಮಾರಾಟ ನಿಗಮದ ನಿರ್ದೇಶಕರೊಬ್ಬರಿಗೆ ವಹಿಸುತ್ತಿದ್ದು ಇದರ ನಿರ್ವಹಣೆಯನ್ನು ಇಲ್ಲಿನ ಸ್ಥಳೀಯ ಪ್ರಭಾವಿ ಮುಖಂಡರೊಬ್ಬರು ವಹಿಸಿಕೊಂಡಿದ್ದಾರೆ. ಬಿತ್ತನೆ ಬೀಜದ ದರ ಹೆಚ್ಚಿಗೆ ಇರುವ ಪರಿಣಾಮ ಕಡಿಮೆ ದರದಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿಸುವುದರಿಂದ ಸಹಾಯಧನ ಶೇಂಗಾ ಅಗತ್ಯ ದಾಖಲೆಯ ರೈತರ ಹೆಸರಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಸಹ ಕಾಲಾವಧಿ ಮುಗಿದ ಬಳಿಕ ಹೆಚ್ಚಿನ ದರದಲ್ಲಿ ರಾತ್ರೋರಾತ್ರಿ ಬಹುತೇಕ ಶೇಂಗಾ ಆಂಧ್ರದ ಎಣ್ಣೆ ತಯಾರಿಕೆಯ ಮಿಲ್ಗಳ ಪಾಲಾಗುವ ಸಾಧ್ಯತೆಗಳು ಇರುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಪಾವಗಡದ ವಿ.ನಾಗಭೂಷಣರೆಡ್ಡಿ, ಹನುಮಂತರಾಯಪ್ಪ,ತಾಳೇಮರದಹಳ್ಳಿ ಗೋವಿಂದಪ್ಪ,ರಾಮಕೃಷ್ಣರಾವ್ ಗುಂಡ್ಲಹಳ್ಳಿಯ ರಮೇಶ್ ಇತರೆ ಅನೇಕ ಮಂದಿ ಮುಖಂಡರು ದೂರಿದ್ದಾರೆ.ಕೋಟ್...
ಇದೊಂದು ವ್ಯವಸ್ಥಿತ ಜಾಲವೆನಿಸುತ್ತದೆ. ಸರ್ಕಾರ ಯಾವಾಗಲೂ ರೈತರಿಗೆ ನೆರವಾಗಬೇಕು. ಆದರೆ ಇಲ್ಲಿ ಸರ್ಕಾರಿ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ರೈತರು ಖಾಸಗಿಯಲ್ಲಿ ಬಿತ್ತನೆ ಬೀಜಕ್ಕೆ ಮೊರೆ ಹೋಗಿದ್ದಾರೆ. ಇದರಿಂದಾಗಿ ಕೊನೆಗೆ ನಮ್ಮ ಪಾಲಿನ ಬಿತ್ತನೆ ಬೀಜಗಳು ಆಂಧ್ರದ ಪಾಲಾಗುತ್ತವೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು - ನಾಗಭೂಷಣರೆಡ್ಡಿ, ರೈತ ಸಂಘದ ಅಧ್ಯಕ್ಷ ಪಾವಗಡ.