ಅಂಗನವಾಡಿ ನೌಕರರಿಂದ ಕರಾಳ ದಿನಾಚರಣೆ

KannadaprabhaNewsNetwork |  
Published : Jul 11, 2026, 01:45 AM IST
10ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಅಂಗನವಾಡಿ ಕೇಂದ್ರಗಳಿಗೆ ಎಲ್ ಕೆಜಿ-ಯುಕೆಜಿ ವಿಸ್ತರಣೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಶುಕ್ರವಾರ ಅಂಗನವಾಡಿ ಕೇಂದ್ರಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಕರಾಳ ದಿನ ಆಚರಿಸಿದರು

ರಾಮನಗರ: ಅಂಗನವಾಡಿ ಕೇಂದ್ರಗಳಿಗೆ ಎಲ್ ಕೆಜಿ-ಯುಕೆಜಿ ವಿಸ್ತರಣೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಶುಕ್ರವಾರ ಅಂಗನವಾಡಿ ಕೇಂದ್ರಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಕರಾಳ ದಿನ ಆಚರಿಸಿದರು.

ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕಿನ ವಿವಿಧ ಭಾಗಗಳಿಂದ ಜಿಲ್ಲಾ ಕೇಂದ್ರ ರಾಮನಗರಕ್ಕೆ ಆಗಮಿಸಿದ ಅಂಗನವಾಡಿ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಐಸಿಡಿಎಸ್ ಗೆ ನೀಡುತ್ತಿದ್ದ ಅನುದಾನವನ್ನು ಬೆಲೆಯೇರಿಕೆಗೆ ತಕ್ಕ ಹಾಗೆ ಹೆಚ್ಚಳ ಮಾಡದೆ ನಿರಂತರವಾಗಿ ಕಡಿಮೆ ಮಾಡುತ್ತಿದೆ. ಅಲ್ಲದೆ 2017ರಿಂದ ಪೌಷ್ಠಿಕ ಆಹಾರಕ್ಕೆ ನೀಡಬೇಕಾದ ಘಟಕ ವೆಚ್ಚ ಹೆಚ್ಚಳ ಮಾಡದೇ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಮತ್ತೊಂದೆಡೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ) 2020 ಜಾರಿ ಮಾಡಿದ್ದರಿಂದ 3 ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ-ಯುಕೆಜಿ ಪ್ರಾರಂಭಿಸಲಾಗುತ್ತಿದೆ. ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ 10 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ತೆಗೆಯುವುದಾಗಿ 2026ರ ಮಾರ್ಚ್ 23ರ ಸಭೆಯಲ್ಲಿ ಹೇಳಿದ್ದ ರಾಜ್ಯ ಸರ್ಕಾರವೂ ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ. ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಗೆ ಸೇರಿಸಲಾಗುತ್ತಿದೆ. ಅಲ್ಲದೆ ಪಲಾನುಭವಿಗಳಿಗೆ ನೀಡುವ ಪೌಷ್ಟಿಕ ಆಹಾರ ಸ್ಥಳೀಯ ತಾಜಾ ಆಹಾರದ ಬದಲಿಗೆ ಸಂಸ್ಕರಿಸಿದ ಪ್ಯಾಕೇಟ್ ಆಹಾರ, ನಗದು ವರ್ಗಾವಣೆ, ಕೇಂದ್ರಿಕೃತ ಕಾರ್ಪೋರೇಟ್ ಅಡಿಗೆ ಮನೆಗಳು ಹಾಗೂ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಹೆಸರಲ್ಲಿ ಕೂಸಿನ ಮನೆಗಳ ಮೂಲಕ ಐಸಿಡಿಎಸ್ ಖಾಸಗೀಕರಣ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಎಫ್‌ಆರ್‌ಎಸ್‌, ಇ-ಕೆವೈಸಿ, ಪೋಷಣ್ ಟ್ರ್ಯಾಕರ್, ಆನ್‌ಲೈನ್ ಕೆಲಸಗಳನ್ನು ಗುಣಮಟ್ಟದ ಮೊಬೈಲ್ 5ಜಿ ಡಾಟಾ ಕೇಂದ್ರಗಳಿಗೆ ವೈ ಫೈ ನೀಡದೆ ಕೆಲಸ ಮಾಡಲು ಒತ್ತಡ ಹೇರಲಾಗುತ್ತಿದೆ. ಒಟಿಪಿ ಹಾಕುವುದರಿಂದ ಲಕ್ಷಾಂತರ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಜನಗಣತಿ , ಬಿಎಲ್‌ಒ ಕೆಲಸಗಳು ಸೇರಿದಂತೆ ಹೆಚ್ಚವರಿ ಕೆಲಸದ ಒತ್ತಡ ಕಾರ್ಯಕರ್ತೆಯರ ಮೇಲೆ ಹೇರಲಾಗುತ್ತಿದೆ.

ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೂ 2018 ರಿಂದ ಗೌರವಧನ ದಲ್ಲಿ ಒಂದು ಪೈಸೆಯೂ ಹೆಚ್ಚಿಸಿಲ್ಲ. ಅಂಗನವಾಡಿ ನೌಕರರನ್ನು ಇನ್ನೂ ಕಾರ್ಮಿಕರಾಗಿ ಪರಿಗಣಿಸದೇ ಕಾನೂನುಗಳ ವ್ಯಾಪ್ತಿಗೂ ತಂದಿಲ್ಲ. ಬದಲಾಗಿ ಇರುವ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ದೂರಿದರು.

ಕಳೆದ 50 ವರ್ಷ ಯೋಜನೆಯ ಬಲವರ್ಧನೆಗಾಗಿ ದುಡಿದ ಅಂಗನವಾಡಿ ನೌಕರರಿಗೆ 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಕನಿಷ್ಠ ಕೂಲಿ ಜಾರಿ ಮಾಡಿಲ್ಲ. ರಾಜ್ಯ ಸರ್ಕಾರವೂ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಅಂಗನವಾಡಿ ಕಾರ್ಯಕರ್ತೆಗೆ 15 ಸಾವಿರ, ಸಹಾಯಕಿಗೆ 10 ಸಾವಿರ ವೇತನ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಶಿವಮ್ಮ, ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಶಾರದಮ್ಮ, ಲೀಲಾವತಿ, ಹೊನ್ನಮ್ಮ, ಸುವರ್ಣಮ್ಮ, ಕೆ.‍ಎನ್.ಕಾವ್ಯ, ಹೇಮಾವತಿ, ಲಲಿತಾ, ಹನುಮಕ್ಕ, ಯಶೋಧ, ನಾಗರತ್ನ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್‌....................

ಅಂಗನವಾಡಿ ನೌಕರರ ಬೇಡಿಕೆಗಳೇನು ?

*ಅಂಗನವಾಡಿ ಕಾರ್ಯಕರ್ತೆಗೆ 15 ಸಾವಿರ, ಸಹಾಯಕಿಗೆ 10ಸಾವಿರ ವೇತನ ಜಾರಿ ಮಾಡಬೇಕು. ಎಲ್ಲರನ್ನು

ಕಾಯಂಗೊಳಿಸಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲ್ ಕೆಜಿ - ಯುಕೆಜಿ ವಿಸ್ತರಣೆ ಆಗಬೇಕು.

* 3-6 ವರ್ಷದ ಮಕ್ಕಳಿಗೆ ಆರಂಭಿಕ ಬಾಲ್ಯ ಆರೈಕೆ, ಶಿಕ್ಷಣ ಮತ್ತು ಅಭಿವೃದ್ಧಿ (ಇಸಿಸಿಇಡಿ) ಹಕ್ಕನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು. 2011 ರಿಂದ ನಿವೃತ್ತಿ ಆದವರಿಗೆ ಗ್ರಾಚ್ಯುಟಿ ಪಾವತಿಸಬೇಕು.

* 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲಾ ಅಂಗನವಾಡಿಗಳನ್ನು ಅಂಗನವಾಡಿ-ಕಮ್-ಶಿಶುಪಾಲನಾ ಕೇಂದಗಳಾಗಿ ಪರಿವರ್ತಿಸಬೇಕು. 3-6 ವರ್ಷದ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳು ಮತ್ತು ಆಟಿಕೆಗಳನ್ನು ಒದಗಿಸಬೇಕು.

*ಬಿಎಲ್ ಒ, ಎಸ್ ಐಆರ್ ಹಾಗೂ ಇತರೆ ಸಮೀಕ್ಷಾ ಕೆಲಸಗಳಿಂದ ಮುಕ್ತಗೊಳಿಸಬೇಕು. ಇಲಾಖೇತರ ಯಾವುದೇ ಕೆಲಸಗಳನ್ನು ನೀಡಬಾರದು.

*ಪೋಷಣ್ ಟ್ಯಾಕರ್ ಹೆಸರಿನಲ್ಲಿ ಕಿರುಕುಳ ನಿಲ್ಲಿಸಬೇಕು. ಮೊಬೈಲ್, ಡೇಟಾ ಹಾಗೂ ನಿರ್ವಹಣಾ ವೆಚ್ಚಗಳನ್ನು ಮರುಪಾವತಿಸಬೇಕು. ಡಿಜಿಟಲೀಕರಣವನ್ನು ಮೇಲ್ವಿಚಾರಣೆ ಅಥವಾ ಕಿರುಕುಳದ ಸಾಧನವಾಗಿ ಬಳಸಬಾರದು.

* ಡಿಜಿಟಲ್ ಕೆಲಸಕ್ಕಾಗಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್‌ಗಳು ಮತ್ತು ಡೇಟಾ ಪ್ಯಾಕ್‌ಗಳನ್ನು ಒದಗಿಸಬೇಕು.

ಎಫ್ ಆರ್ ಎಸ್ ಮತ್ತು ಇ -ಕೆವೈಸಿ ಕಡ್ಡಾಯ ಎನ್ನುವುದನ್ನು ಹಿಂಪಡೆಯಬೇಕು.

*ಉತ್ತಮ ಗುಣಮಟ್ಟದ ಸ್ಥಳೀಯ ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಒದಗಿಸಬೇಕು. ವೈದ್ಯಕೀಯ ಪರೀಕ್ಷೆಗೊಳಪಡದ ''''''''ಫೋರ್ಟಿಫೈಡ್'''''''' ಆಹಾರ ಸರಬರಾಜು ಮಾಡಬಾರದು. ತಾಜಾ ಸ್ಥಳೀಯ ಆಹಾರವನ್ನು ಒದಗಿಸಬೇಕು.

*2011 ರಿಂದ ನಿವೃತ್ತರಾದ ಕಾರ್ಯಕರ್ತೆ, ಸಹಾಯಕಿಗೂ ರಾಜ್ಯ ಸರ್ಕಾರ ಒಪ್ಪಿದ ಪ್ರಕಾರ ಗ್ರಾಚ್ಯುಟಿ ಬಿಡುಗಡೆ ಮಾಡಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು (Labour Codes) ಹಿಂಪಡೆಯಬೇಕು.

*ಎಎನ್ ಎಂ , ಪ್ರಾಥಮಿಕ ಶಾಲಾ ಶಿಕ್ಷಕ, ಗ್ರಾಮ ಸೇವಕ ಮುಂತಾದ ಹುದ್ದೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮೀಸಲಾತಿ ನೀಡಬೇಕು.

10ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಿ
ಹತ್ತಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು