Watering cotton crops via tankers to save them.

-ಯಾಳಗಿ ಗ್ರಾಮದ ಪ್ರಗತಿಪರ ರೈತ ಗೂಡುಸಾಬ ಸಿಪಾಯಿ ರೈತರಿಗೆ ಮಾದರಿ

--

ಕನ್ನಡಪ್ರಭ ವಾರ್ತೆ ಕೆಂಭಾವಿ

ಪಟ್ಟಣ ಸೇರಿದಂತೆ ವಲಯದ ಬಹುಭಾಗದಲ್ಲಿ ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದು ಬಿತ್ತಿದ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಮಳೆಗಾಗಿ ಈಗಾಗಲೆ ಹಲವು ಕಡೆ ದೇವರ ಮೊರೆ ಹೋಗಿದ್ದು, ದೈವ ಇನ್ನೂ ಫಲ ಕೊಡದ ಹಿನ್ನೆಲೆಯಲ್ಲಿ ಬಿತ್ತಿದ ಬೀಜ ಭೂಮಿಯಿಂದ ಮೇಲೆತ್ತಲು ರೈತರು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದು ಇಲ್ಲೊಬ್ಬ ರೈತರು ಟ್ಯಾಂಕರ್ ಮೂಲಕ ತಮ್ಮ ಜಮೀನಿಗೆ ನೀರು ಹಾಯಿಸುವ ಮೂಲಕ ಬೆಳೆಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಯಾಳಗಿ ಗ್ರಾಮದ ಪ್ರಗತಿಪರ ರೈತ ಗೂಡುಸಾಬ ಸಿಪಾಯಿ ತಮ್ಮ ಐದು ಎಕರೆ ಜಮೀನಿನಲ್ಲಿ ಬಿತ್ತಿದ ಹತ್ತಿ ಬೆಳೆಗಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದು ಕಳೆದ ಒಂದು ವಾರದಿಂದ ಟ್ಯಾಂಕರ್ ಮೂಲಕ ನೀರು ತಂದು ತುಂತುರು ನೀರಾವರಿ ಮೂಲಕ ಬೆಳೆಗಳಿಗೆ ನೀರು ಹಾಯಿಸುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ.

ಈ ನೀರುಣಿಸುವುದು ತುಸು ದುಬಾರಿಯಾದರೂ ತುಟ್ಟಿ ಬೆಲೆ ತೆತ್ತು ಹತ್ತಿ ಬೀಜ ಖರೀದಿಸಿದ್ದು, ಬೀಜ ಮೇಲೆದ್ದು ಮೊಳಕೆಯೊಡೆದರೆ ಮಳೆ ಬರುವ ಲಕ್ಷಣಗಳು ಬಂದು ಬೆಳೆ ಸಮೃದ್ಧವಾಗಬಹುದು ಎಂಬ ನಂಬಿಕೆ ರೈತಾಪಿ ವರ್ಗದಲ್ಲಿ ಇದೆ.

ದಿನಕ್ಕೆ ರೂ. ೭೦೦ ರಂತೆ ಟ್ಯಾಂಕರ್ ಬಾಡಿಗೆ ಪಡೆದು ನಿತ್ಯ ಮೂರರಿಂದ ಐದು ಟ್ಯಾಂಕರ್ ನೀರನ್ನು ಜಮೀನಿಗೆ ಹಾಯಿಸುವ ರೈತ ಗೂಡುಸಾಬ ಅವರು ತುಂತುರು ನೀರಿನ ಮೂಲಕ ನೇರವಾಗಿ ಬೆಳೆಗಳಿಗೆ ನೀರು ಹೋಗುವಂತೆ ಮಾಡಿದ್ದಾರೆ.

ಈ ಪ್ರಯತ್ನ ನೋಡುಗರಿಗೆ ಸೋಜಿಗ ಕಂಡರೂ ಮುಂಬರುವ ದಿನಗಳಲ್ಲಿ ಇದು ಬರಗಾಲದ ಭೀಕರತೆಯನ್ನು ತೋರಿಸುವ ದಿಕ್ಸೂಚಿಯಾಗಿದೆ.

--

ಫೋಟೊ

ಚಿತ್ರ೧೦ಕೆಇಎಂ೩

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೆಂಭಾವಿ ಸಮೀಪ ಯಾಳಗಿ ಗ್ರಾಮದ ಪ್ರಗತಿಪರ ರೈತ ಗೂಡುಸಾಬ ಸಿಪಾಯಿ ತಮ್ಮ ಐದು ಎಕರೆ ಜಮೀನಿನಲ್ಲಿ ಬಿತ್ತಿದ ಹತ್ತಿ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಿರುವುದು.