ಕನ್ನಡಪ್ರಭ ವಾರ್ತೆ ನಂಜನಗೂಡುಜ್ಞಾನವೆಂಬುದು ಪವಿತ್ರವಾದ ಸಂಪತ್ತು. ಜ್ಞಾನಕ್ಕೆ ಮಿಗಿಲಾದ ಮತ್ತೊಂದು ಸಂಪತ್ತನ್ನು ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅರಿವೇ ಗುರು ಎಂದು ಹೇಳಲಾಗುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿನ ಶ್ರೀ ಮುರಗಿಸ್ವಾಮಿ ವಿರಕ್ತ ಮಠದಲ್ಲಿ ಆಯೋಜಿಸಿದ್ದ ಶ್ರೀ ಬಸವರಾಜ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಹಾಗೂ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಜ್ಞಾನಕ್ಕೆ ಸಮಾನವಾದ ಮತ್ತೊಂದು ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಚಿನ್ನಾಭರಣ ಹಾಗೂ ನಗವನ್ನು ಕದಿಯಬಹುದು. ಆದರೆ ಜ್ಞಾನವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಅಂತಹ ಜ್ಞಾನವನ್ನು ಮಕ್ಕಳಿಗೆ ಸಂಪಾದಿಸುವಂತೆ ಹಚ್ಚುವುದು ತಂದೆ-ತಾಯಿಗಳ ಕರ್ತವ್ಯವಾಗಿದೆ. ಅಲ್ಲದೆ ಜ್ಞಾನ ನೀಡುವ ಜೊತೆಗೆ ಸಂಸ್ಕಾರವನ್ನು ಕಲಿಸುವುದು ಮಠಗಳ ಕರ್ತವ್ಯ ಎಂದರು.ರಾಜ್ಯದಲ್ಲಿ ಬೀದರ್ ನಿಂದ ಚಾಮರಾಜನಗರದವರೆಗೆ ಮಠಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಕೈಗೊಂಡಿರುವ ಅಪಾರ ಸೇವೆ ಸ್ಮರಣೀಯವಾಗಿದ್ದು ಜಗತ್ತಿನ ಎಲ್ಲೇ ಹೋದರು ಕರ್ನಾಟಕ ರಾಜ್ಯ ಮೂಲದ ಹಲವು ಮಂದಿ ಸಾಧಕರು ಲಭ್ಯವಾಗುತ್ತಾರೆ. ಇದಕ್ಕೆ ರಾಜ್ಯದಲ್ಲಿ ಮಠ ಮಾನ್ಯಗಳವರು ಹಾಗೂ ಸಂಘ ಸಂಸ್ಥೆಗಳವರು ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿರುವ ಗುಣಮಟ್ಟದ ಸೇವೆಯೇ ಕಾರಣ. ಈ ನಿಟ್ಟಿನಲ್ಲಿ ಶಿರಮಳ್ಳಿ ಮಠದ ಆವರಣದಲ್ಲಿ ಶಾಲೆಯನ್ನು ಪ್ರಾರಂಭಿಸಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಮಠ ಮತ್ತು ಭಕ್ತರ ಬಾಂಧವ್ಯ ಬೆಳೆಸಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ, ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಗುರು- ಶಿಷ್ಯರ ನಡುವೆ ಅನುನ್ಯತೆಯಿಂದ ಕೂಡಿದ ನೈತಿಕ ಶಿಕ್ಷಣವನ್ನು ಕಲಿಸುತ್ತಿದ್ದರು. ಆದರೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಂಸ್ಕಾರ, ನೈತಿಕತೆ ಮಾಯವಾಗಿದೆ. ಆದ್ದರಿಂದ ಮಕ್ಕಳಿಗೆ ತಂದೆ- ತಾಯಿ ಭಾರವಾಗಿದ್ದಾರೆ. ಸಮಾಜದಲ್ಲಿ ಕೌಟುಂಬಿಕ ಸಂಬಂಧಗಳು ಕುಸಿದಿವೆ, ಆದ್ದರಿಂದ ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ಸಂಸ್ಕಾರಯುತ ನೈತಿಕ ಶಿಕ್ಷಣದ ಅಗತ್ಯವಿದೆ ಎಂದು ಅವರು ಹೇಳಿದರು.ಶಿರಮಳ್ಳಿ ಶ್ರೀಗಳು ಶಾಲೆ ಪ್ರಾರಂಭಿಸುವ ಮೂಲಕ ಮಾನವೀಯ ಮೌಲ್ಯವುಳ್ಳ, ಸಂಸ್ಕಾರಯುತ ನೈತಿಕ ಶಿಕ್ಷಣವನ್ನು ನೀಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಬಾಲ್ಕಿಯ ಹಿರೇಮಠದ ಆಶೀರ್ವಚನ ನೀಡಿದರು.ಭಾಲ್ಕಿ ಹಿರೇಮಠದ ಪಟ್ಟದ ದೇವರು ಆಶೀರ್ವಚನ ನೀಡಿದರು. ಮಾಜಿ ಶಾಸಕ ಹರ್ಷವರ್ಧನ್, ಶಿವಶಂಕರ್ ಸಾಹುಕಾರ, ಮನೋಹರ ಮಠದ, ಮೋಹನ ಪ್ರಸಾದ್ದುಬೆ, ನರೇಂದ್ರ ನಾಯಕ, ವಿಶ್ವನಾಥ ಕೋರವಿ, ಕೃಷ್ಣಭಟ್‌, ಎಸ್.ಎಂ. ಕೆಂಪಣ್ಣ, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ ಇದ್ದರು.