ಕವಿತೆಗಳಿಗೆ ಕಿವಿಯಾದ ಅಂಗನವಾಡಿ ಕಾರ್ಯಕರ್ತೆಯರು

KannadaprabhaNewsNetwork |  
Published : Feb 15, 2026, 03:45 AM IST
ಹಂಪಿ ಉತ್ಸವದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿದ ರಾಯಚೂರು ಸಾಹಿತಿ ವೀರಹನುಮಾನ್‌. ಕವಿಗೋಷ್ಠಿಗೆ ಸಭಿಕರಿಲ್ಲದ ಕಾರಣ ಖಾಲಿ ಇರುವ ಆಸನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯನ್ನು ಕರೆ ತರಲಾಗಿತ್ತು.  | Kannada Prabha

ಸಾರಾಂಶ

ತೀರಾ ಕೆಟ್ಟದಾಗಿ ಗಟ್ಟಿತನವಿಲ್ಲದ ಕವಿತೆಗಳನ್ನು ವಾಚನ ಮಾಡಿದ್ದು ನೋಡಿ ಸಭಿಕರು ಬೇಸರಿಸಿದರು.

ಚಂದ್ರು ಕೊಂಚಿಗೇರಿ

ಹಂಪಿ: ವಿಜಯನಗರ ಸಾಮ್ರಾಜ್ಯದ ಅರಸ ಕೃಷ್ಣದೇವರಾಯನ ಕಾಲದಲ್ಲಿ ಹಂಪಿ ಶ್ರೀಮಂತ ಸಾಹಿತ್ಯದ ನೆಲೆಯಾಗಿತ್ತು. ಇಂತಹ ನೆಲದಲ್ಲಿ ಸಾಮಾಜಿಕ ತಲ್ಲಣ, ಅಭಿವೃದ್ಧಿ ದ್ಯೋತಕ, ನೆಲ, ಜಲ, ಭಾಷೆ, ಭ್ರಷ್ಟಾಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದ ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಬೇಕಿತ್ತು. ಆದರೆ ತೀರಾ ಕೆಟ್ಟದಾಗಿ ಗಟ್ಟಿತನವಿಲ್ಲದ ಕವಿತೆಗಳನ್ನು ವಾಚನ ಮಾಡಿದ್ದು ನೋಡಿ ಸಭಿಕರು ಬೇಸರಿಸಿದರು.

ಹೌದು, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಇದಕ್ಕೆ ಸಾಕ್ಷಿಯಾಗಿತ್ತು.

ಕವಿಗೋಷ್ಠಿಯಲ್ಲಿ ಕವಿತೆಗಳನ್ನು ವಾಚಿಸಲು ಬಂದ ಕವಿಗಳು 36, ಆದರೆ ಸಾಹಿತ್ಯ ಸಹೃದಯಿಗಳ ಸಂಖ್ಯೆ ತೀರಾ ವಿರಳ ಇದ್ದ ಕಾರಣ, ಆಯೋಜಕರು ಅಂಗನವಾಡಿ ಕಾರ್ಯಕರ್ತೆಯರನ್ನು ಕರೆ ತಂದು ಆಸನದಲ್ಲಿ ಕುಳಿಸಿದ್ದರು. ಕವಿತೆಗಳನ್ನು ಆಲಿಸುವ ಮನಸ್ಸುಗಳೇ ಇರಲಿಲ್ಲ.

ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ಭಾಗವಹಿಸಲು ಕವಿಗಳು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅರ್ಜಿದಾರರ ಸಾಹಿತ್ಯದ ಕೃಷಿ ಬಗ್ಗೆ ಸಣ್ಣ ಮಾಹಿತಿಯನ್ನು ಸಂಗ್ರಹಿಸದ ಜಿಲ್ಲಾಡಳಿತ, ಯಾವುದೇ ಗಟ್ಟಿತನ ಇಲ್ಲದ ಎರಡು-ಮೂರು ಸಾಲು ಹಂಪಿ ವಾತಾವರಣದ ಬಗ್ಗೆ ಕವಿತೆ ಬರೆದುಕೊಂಡು ಬಂದವರಿಗೆ ವೇದಿಕೆ ಕಲ್ಪಿಸಿರುವುದು ನೋಡಿದರೆ, ಕನ್ನಡ ಸಾಹಿತ್ಯದ ಶ್ರೀಮಂತಿಕೆ, ಸಾವಿರಾರು ವರ್ಷಗಳ ಇತಿಹಾಸ ಮೆರಗನ್ನು ಅರಿತು ಕವಿತೆಗಳ ಬರವಣಿಗೆ ಇಲ್ಲದೇ ಸೊರಗಿದ ಸಾಹಿತ್ಯವನ್ನು ರಚಿಸಿಕೊಂಡು ಪ್ರಜ್ಞಾವಂತರ ವೇದಿಕೆಯನ್ನು ಕವಿತೆಗಳನ್ನು ವಾಚಿಸಿದ್ದು ತೀರಾ ಕನ್ನಡ ಸಾಹಿತ್ಯ ಮುಜುಗುರ ಉಂಟು ಮಾಡಿತ್ತು.

ಕವಿಗೋಷ್ಠಿಯ ಆರಂಭದಲ್ಲಿ ಗಂಗಾವತಿಯ ಅರಳಿ ನಾಗಭೂಷಣ ಇವರ ದಿಗಿಲು ಶೀರ್ಷಿಕೆ ಅಡಿ ಉತ್ತರ ಹಾಗೂ ದಕ್ಷಿಣ ಕರ್ನಾಟಕ ಅಭಿವೃದ್ಧಿಯ ಸಾಲು ಸಾಲು ಅಸಮತೋಲನಗಳನ್ನು ಕವಿತೆಯಲ್ಲಿ ಕಟ್ಟಿಕೊಟ್ಟರು. ಮುಂಡರಗಿಯ ಮಕ್ಕಳ ಸಾಹಿತಿ ನಿಂಗು ಸೊಲಗಿ ಇವರ ಕನ್ನಡ ತೇರು ಶೀರ್ಷಿಕೆಯಡಿ ಕನ್ನಡದ ಹಿರಿಮೆ, ಗರಿಮೆ, ಭಾಷೆ ಶೀಮಂತಿಕೆ, ಪ್ರತಿಯೊಬ್ಬರೂ ಕನ್ನಡ ಕಲಿಕೆ ಹೀಗೆ ಸಾಲು ಸಾಲು ಮೊನಚು ಶಬ್ದಗಳ ಮೂಲಕ ಕನ್ನಡ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಕವಿಗೋಷ್ಠಿಗೆ ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ್ದ ಕವಯತ್ರಿ ಗೀತಾ ಎ.ಎಸ್‌. ಕಮಲಾಕರ ಅವರ ಗರುಡಧ್ವಜ ಕವಿತೆಯಲ್ಲಿ ಇಡೀ ಹಂಪಿ ಇತಿಹಾಸವನ್ನು ಕವಿತೆ ಮೂಲಕ ಕಟ್ಟಿಕೊಟ್ಟರು. ಉಳಿದಂತೆ ಕೆಲವು ಕವಿಗಳು ಹಂಪಿ ನೋಟ ಜೀವನ ಪಾಠ, ಇದು ಕೇವಲ ಹಂಪಿ ಅಲ್ಲ, ಕನ್ನಡವೇ ನಮ್ಮ ಸೊಗಸು, ಭಾರತದ ರೈತರು, ನನ್ನೂರು ಸಂಡೂರು, ಪ್ರೀತಿ ಇಂತಹ ಕವಿತೆಗಳನ್ನು ವಾಚಿಸಿದಾಗ ನೆರೆದಿದ್ದ ಸಭಿಕರು ಅಯ್ಯೋ... ಇಂತಹ ಕವಿತೆಯ ಸಾಲುಗಳನ್ನು ಕೇಳಲು ಇಷ್ಟು ದೂರ ಬರಬೇಕಿತ್ತಾ? ಎಂದರು. ಆಸನದಲ್ಲಿ ಕುಳಿತವರು ಎದ್ದೆದ್ದು ಹೋದರು.

ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ರಾಯಚೂರಿನ ಸಾಹಿತಿ ವೀರ ಹನುಮಾನ್‌, ನೂರಾರು ವರ್ಷಗಳ ಕಾಲ ಇತಿಹಾಸವಿರುವ ಈ ಹಂಪಿ ನೆಲದಲ್ಲಿ ಅರಸರು ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ್ದರು. ಅತ್ತ ಹರಿಹರ ಸಾಹಿತಿ ರಾಜರ ಜತೆ ಅಲ್ಲದೇ ಜನ ಸಾಮಾನ್ಯರೊಂದಿಗೆ ಇದ್ದು ಸಾಹಿತ್ಯ ರಚಿಸಿದ್ದಾರೆ ಎಂದರು.

ಕವಿತೆಯ ಸಾಲುಗಳಿಗೆ ಸಾವನ್ನು ಮೆಟ್ಟಿ ನಿಲ್ಲುವ ಶಕ್ತಿ ಇದೆ. ಹೊಸ ಸಾಹಿತ್ಯ ರಚಿಸುವ ಕವಿಗಳು ನಿರಂತರ ಅಧ್ಯಾಯನ ಅಗತ್ಯವಿದೆ. ಪ್ರಸ್ತುತ ಸಮಾಜದಲ್ಲಿರುವ ಜ್ವಲಂತ ಸಮಸ್ಯೆಗಳ ಕುರಿತಾಗಿ ಕವಿತೆಗಳು ಇರಬೇಕು. ಕವಿತೆಗಳು ಅನ್ವೇಷಣೆ, ಸಂಶೋಧನೆ, ಚಳವಳಿ ಹೋರಾಟದ ಒಂದು ಭಾಗವಾಗಬೇಕೆಂದು ಹೇಳಿದರು.

ಅಧ್ಯಕ್ಷತೆಯನ್ನು ಸಾಹಿತಿ ಪಿ.ಆರ್‌. ವೆಂಕಟೇಶ ವಹಿಸಿದ್ದರು. ಸಾಹಿತಿ ಪಿ.ಆರ್‌. ವೆಂಕಟೇಶ ಮಾತನಾಡಿದರು. ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಅಜಮೀರ್‌ ನಂದಾಪುರ, ಗೊಟಗೋಡಿ ಜನಪದ ವಿವಿ ಸಂಶೋಧಕ ಡಾ. ನಾಯಕರ ಹುಲುಗಪ್ಪ, ಪ್ರಾಧ್ಯಾಪಕ ಡಾ. ಕೆ. ರಮೇಶ, ಕಸಾಪದ ಗುಡಿ ಪ್ರಕಾಶ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನಲ್ಲಿ ನೆಮ್ಮದಿಗೆ ಸಂಗೀತ ಅಗತ್ಯ: ಡಾ. ಜಿ.ಎಲ್. ಹೆಗಡೆ
ಆಟೋ ಚಾಲಕರ ಮೇಲೆ ಟ್ಯಾಕ್ಸಿ ಚಾಲಕರ ದೌರ್ಜನ್ಯ ಖಂಡಿಸಿ ಪ್ರತಿಭಟನೆ