ಪೆಟ್ರೋಲ್‌ ದರ ಏರಿಕೆಯಿಂದ ವಾರ್ಷಿಕ ಆರು ಸಾವಿರ ಕೋಟಿ ರು. ಹೆಚ್ಚುವರಿ ಆದಾಯ ಗಳಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ವ್ಯಾಟ್‌ (ಮೌಲ್ಯವರ್ಧಿತ ತೆರಿಗೆ) ಕಡಿಮೆ ಮಾಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ - ಆರ್‌.ಅಶೋಕ ಕಿಡಿ

ಬೆಂಗಳೂರು : ಪೆಟ್ರೋಲ್‌ ದರ ಏರಿಕೆಯಿಂದ ವಾರ್ಷಿಕ ಆರು ಸಾವಿರ ಕೋಟಿ ರು. ಹೆಚ್ಚುವರಿ ಆದಾಯ ಗಳಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ವ್ಯಾಟ್‌ (ಮೌಲ್ಯವರ್ಧಿತ ತೆರಿಗೆ) ಕಡಿಮೆ ಮಾಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಕಿಡಿಕಾರಿದ್ದಾರೆ.

ಪೆಟ್ರೋಲ್‌ ದರ ಏರಿಕೆ ವಿಚಾರದಲ್ಲಿ 

ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪೆಟ್ರೋಲ್‌ ದರ ಏರಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ಯುದ್ಧದಿಂದಾಗಿ ಪೆಟ್ರೋಲ್‌ ಬಳಕೆ ಕಡಿಮೆ ಮಾಡಲು ಬೇರೆ ದೇಶಗಳು ನಿರ್ಬಂಧ ಹಾಕಿದ್ದರೂ ಪ್ರಧಾನಿ ಮೋದಿ ಅಂತಹ ನಿರ್ಬಂಧ ಹಾಕಿಲ್ಲ. ಕರ್ನಾಟಕದಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 107.70 ರು. ಇದ್ದರೆ, ದೆಹಲಿಯಲ್ಲಿ 99.50 ರು., ಗುಜರಾತ್‌ನಲ್ಲಿ 99.10 ರು., ಉತ್ತರ ಪ್ರದೇಶದಲ್ಲಿ 99.50 ರು., ಹರ್ಯಾಣದಲ್ಲಿ 99.70 ರು. ದರವಿದೆ. ಅಂದರೆ ರಾಜ್ಯದಲ್ಲಿ ಮಾತ್ರ ದರ ಹೆಚ್ಚಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಪೆಟ್ರೋಲ್‌ ಮೇಲಿನ ವ್ಯಾಟ್‌ ಹೆಚ್ಚಳ

ಕಾಂಗ್ರೆಸ್‌ ಸರ್ಕಾರ ಪೆಟ್ರೋಲ್‌ ಮೇಲಿನ ವ್ಯಾಟ್‌ ಹೆಚ್ಚಳ ಮಾಡಿದ್ದು, ಅದನ್ನು ಕಡಿಮೆ ಮಾಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ದರ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಆದಾಯ ಬರುವುದಿಲ್ಲ. ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ ವಾರ್ಷಿಕ 6 ಸಾವಿರ ಕೋಟಿ ರು. ಆದಾಯ ಬರಲಿದೆ. ಇದನ್ನು ಗ್ಯಾರಂಟಿಗೆ ಬಳಸುತ್ತಾರೆ ಎಂದು ಕಿಡಿಕಾರಿದರು.

ಈಗ ಪ್ರತಿ ಲೀಟರ್‌ ಪೆಟ್ರೋಲ್‌ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ 1.15 ರು. ಹೆಚ್ಚುವರಿ ಆದಾಯ ಬರುತ್ತಿದೆ. ಜನರಿಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೆ ರಾಜ್ಯ ಸರ್ಕಾರದ ಕಡೆಯಿಂದಲೇ ವ್ಯಾಟ್‌ ಇಳಿಕೆ ಮಾಡಬೇಕು. ಇಲ್ಲವಾದರೆ ಹೆಚ್ಚುವರಿ ಆದಾಯ ಪಡೆಯುತ್ತಿರುವ ಬಗ್ಗೆ ಜನರಿಗೆ ಹೇಳಬೇಕು. ದರ ಏರಿಕೆಯ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡುವುದು ಎಂದರೆ ಅದು ಜನರಿಗೆ ಮಾಡುವ ವಂಚನೆ ಹಾಗೂ ಟೋಪಿ ಹಾಕುವುದಾಗಿದೆ ಎಂದು ಅಶೋಕ್ ಟೀಕಿಸಿದರು