ರಾಘವೇಶ್ವರ ಭಾರತೀ ಶ್ರೀಗಳು ಸೇರಿ ವಿವಿಧ ಗಣ್ಯರ ಉಪಸ್ಥಿತಿ
ಅಖಿಲ ಹವ್ಯಕ ಮಹಾಸಭಾದ ಶ್ರೀ ಕ್ಷೇತ್ರ ಬೆಳಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತ್ಯುತ್ಸವ ಮತ್ತು ಹವ್ಯಕ ಭವನ ಲೋಕಾರ್ಪಣೆ ಮೇ 1 ಮತ್ತು 2ರಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಹವ್ಯಕ ಮಹಾಸಭಾದ ಕಾರ್ಯದರ್ಶಿ ಪ್ರಶಾಂತ ಭಟ್ಟ ಹೇಳಿದರು.
ಮಂಗಳವಾರ ಸಂಜೆ ಬೆಳಕೆ ದುರ್ಗಾಪರಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೇ 1ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮೇ 2ರಂದು ಬೆಳಗ್ಗೆ ಬೆಳಗ್ಗೆ 10.30ಕ್ಕೆ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಗಮಿಸಿ ನೂತನ ಸಭಾಭವನ ಉದ್ಘಾಟಿಸಲಿದ್ದಾರೆ. ಅಂದು ಅಪರಾಹ್ನ 11.30ಕ್ಕೆ ಧರ್ಮ ಸಭೆ ನಡೆಯಲಿದ್ದು, ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಮಂಕಾಳ ಎಸ್ .ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಮಾಜಿ ಶಾಸಕ ಸುನೀಲ ನಾಯ್ಕ, ಭೂಮಿ ದಾನ ನೀಡಿದ ಮಂಜುನಾಥ ಬಿಲ್ಲವ ಪಾಲ್ಗೊಳ್ಳಲಿದ್ದು, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಬೆಳಕೆ, ಗೊರ್ಟೆ ಮತ್ತಿತರ ಭಾಗದ ಸರ್ವ ಜನತೆಗೂ ಅನುಕೂಲವಾಗಲಿ ಎನ್ನುವ ಸದಾಶಯದೊಂದಿಗೆ ಸುಮಾರು ₹75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಭಾಭವನ ನಿರ್ಮಿಸಲಾಗಿದೆ. ಹವ್ಯಕ ಮಹಾಸಭಾಕ್ಕೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಉದ್ಯಮಿ ಮಂಜುನಾಥ ಬಿಲ್ಲವ ಅವರು ಜಾಗವನ್ನು ದಾನ ನೀಡಿದ್ದು, ನಾವು ಜಾಗ ಸ್ವೀಕರಿಸಿದ ನಂತರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಮುಂದೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹವ್ಯಕ ಮಹಾಸಭಾ ಚಿಂತನೆ ನಡೆಸಿದ್ದು, ಸ್ಥಳೀಯರ ಸಹಕಾರ ಅಗತ್ಯ ಎಂದರು.